ಬೆಂಗಳೂರು:ಅಂಬಾರಿ’, ‘ಅದ್ದೂರಿ’, ‘ರಾಟೆ’, ‘ಐರಾವತ’ ಹಾಗೂ ‘ಕಿಸ್’ನಂತಹ ಅದ್ದೂರಿ ಸಿನಿಮಾಗಳನ್ನು ನೀಡಿದ ನಿರ್ದೇಶಕ ಎ.ಪಿ. ಅರ್ಜುನ್ ದಶಕದ ಗೆಳತಿ ಅನ್ನಪೂರ್ಣ ಜತೆಗೆ ಸಪ್ತಪದಿ ತುಳಿದಿದ್ದಾರೆ.
ಕೊರೊನಾ ಲಾಕ್ಡೌನ್ ಇರುವ ಕಾರಣಕ್ಕೆ ಅವರು ಬೆಂಗಳೂರಿನ ತಮ್ಮ ಮನೆಯ ಮುಂದೆಯೇ ಅತ್ಯಂತ ಸರಳವಾಗಿ ವಿವಾಹ ಮಾಡಿಕೊಂಡಿದ್ದಾರೆ. ಅರ್ಜುನ್ ಆಪ್ತ ಸ್ನೇಹಿತರು ಮತ್ತು ವಧು–ವರನ ಎರಡೂ ಕುಟುಂಬದ ಸದಸ್ಯರು ಮಾತ್ರ ಮದುವೆಗೆ ಸೇರಿದ್ದರು.
ಅರ್ಜುನ್ ಕೈಹಿಡಿದಿರುವಅನ್ನಪೂರ್ಣ ಅವರು ವೃತ್ತಿಯಲ್ಲಿ ಫ್ಯಾಷನ್ ಡಿಸೈನರ್. ಮೂಲತಃ ಬೇಲೂರಿನವರು. ‘ಅದ್ದೂರಿ’ ಸಿನಿಮಾ ಮಾಡುವಾಗ ಅರ್ಜುನ್ಗೆ ಸ್ನೇಹಿತರ ಮೂಲಕ ಅನ್ನಪೂರ್ಣ ಅವರ ಪರಿಚಯವಾಗಿತ್ತಂತೆ. ಈ ಸ್ನೇಹ, ಪ್ರೀತಿಗೆ ತಿರುಗಿ ಇಬ್ಬರೂ ಈಗ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ.
‘ಮನೆಯ ಮುಂದೆ ಚಪ್ಪರ ಹಾಕಿ, ಗುಂಡುಕಲ್ಲು, ಕುಂಬಗಳನ್ನು ಇಟ್ಟು, ಮಾವು, ಬಾಳೆ ಕಂಬ, ತೆಂಗಿನ ಗರಿಗಳಿಂದ ಅಲಂಕರಿಸಿ, ಹಳೇ ಕಾಲದಲ್ಲಿ ಮದುವೆಗಳಂತೆ ಧಾರೆ ಎರೆಯುವಕಾರ್ಯಕ್ರಮ ನಡೆಯಿತು. ಮದುವೆಯ ಊಟಕ್ಕೆ ಬಿಳಿ ಹೋಳಿಗೆ, ಕ್ಯಾರೆಟ್ ಹಲ್ವಾ, ಜಾಮೂನು, ಬೋಂಡಾ ಸೂಪು, ಪುಲಾವ್ ಮಾಡಿಸಿದ್ದೆವು. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಬಂಧುಗಳನ್ನು ಸೇರಿಸಿಕೊಂಡು, ಲಾಕ್ಡೌನ್ ನಿಯಮ ಪಾಲಿಸಿದೆವು’ ಎನ್ನುವ ಮಾತು ಸೇರಿಸಿದರು ಅರ್ಜುನ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.