ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಚಿತ್ರದ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಹೆಚ್ಚಿಸುವ ಉದ್ದೇಶದಿಂದ ಹೊಸ ಯೋಜನೆ ಹಮ್ಮಿಕೊಂಡಿದೆ ಚಿತ್ರತಂಡ. ಅದು ಸಂಕ್ರಾಂತಿಯಿಂದ ಆರಂಭವಾಗುವ ‘ಆಡಿಯೊ ಹಬ್ಬ’.
‘ಯಜಮಾನ’ನ ಎಲ್ಲ ಹಾಡುಗಳನ್ನು ಒಂದೇ ದಿನ ಬಿಡುಗಡೆ ಮಾಡದೆ, ಒಂದೊಂದೇ ಹಾಡುಗಳನ್ನು ಬಿಡುಗಡೆ ಮಾಡುವ ತೀರ್ಮಾನ ಕೈಗೊಂಡಿದೆ ಚಿತ್ರತಂಡ.
‘ಸಂಕ್ರಾಂತಿಯ ದಿನ ಆಡಿಯೊ ಹಬ್ಬ ಆಚರಿಸುತ್ತೇವೆ. ಮೊದಲ ಹಾಡಿನ ಬಿಡುಗಡೆ ಯೂಟ್ಯೂಬ್ ಮೂಲಕ ಆಗಲಿದೆ’ ಎನ್ನುತ್ತಾರೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶೈಲಜಾ ನಾಗ್. ಬಿ. ಸುರೇಶ ಅವರೂ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಬಿಡುಗಡೆ ಆಗುವ ಮೊದಲ ಹಾಡಿನ ಹೆಸರು ‘ಶಿವನಂದಿ’. ಇದಕ್ಕೆ ಸಂಗೀತ ನೀಡಿರುವವರು ವಿ. ಹರಿಕೃಷ್ಣ. ಹರಿಕೃಷ್ಣ ಅವರ ಸಂಗೀತ ಹಾಗೂ ದರ್ಶನ್ ಅವರ ಅಭಿನಯ ಇರುವ 25ನೇ ಚಿತ್ರ ಇದು. ಚಿತ್ರದಲ್ಲಿ ಒಟ್ಟು ಐದು ಹಾಡುಗಳು ಇವೆ. ‘ಇದು ಆ್ಯಕ್ಷನ್ ಡ್ರಾಮಾ. ಮಾಸ್ ಕಮರ್ಷಿಯಲ್ ಸಿನಿಮಾ. ಕುಟುಂಬದ ಎಲ್ಲರೂ ಸೇರಿ ನೋಡಬಹುದಾದ ಸಿನಿಮಾ’ ಎನ್ನುತ್ತಾರೆ ಶೈಲಜಾ. ಹರಿಕೃಷ್ಣ ಮತ್ತು ಪಿ. ಕುಮಾರ್ ಅವರು ಈ ಚಿತ್ರ ನಿರ್ದೇಶಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.