ADVERTISEMENT

ಶರಣ್‌– ಆಶಿಕಾ ಹೊಸ ಅವತಾರ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 19:45 IST
Last Updated 21 ನವೆಂಬರ್ 2019, 19:45 IST
‘ಅವತಾರ ಪುರುಷ’ ಚಿತ್ರದಲ್ಲಿ ಆಶಿಕಾ ರಂಗನಾಥ್‌ ಮತ್ತು ಶರಣ್
‘ಅವತಾರ ಪುರುಷ’ ಚಿತ್ರದಲ್ಲಿ ಆಶಿಕಾ ರಂಗನಾಥ್‌ ಮತ್ತು ಶರಣ್   

‘ಆಪರೇಷನ್‌ ಅಲಮೇಲಮ್ಮ’ ಚಿತ್ರದಿಂದ ಆರಂಭವಾದ ಸಿಂಪಲ್‌ ಸುನಿ ಅವರ ಯಶಸ್ಸಿನ ‍ಪಯಣ ‘ಚಮಕ್‌’ ಕೊಟ್ಟು ‘ಬಜಾರ್‌’ವರೆಗೂ ತಲುಪಿತ್ತು. ಈಗ ಪ್ರೇಕ್ಷಕರಿಗೆ ‘ಅವತಾರಪುರುಷ’ನ ಅವಾಂತರ ತೋರಿಸಲು ಅವರು ಮುಂದಾಗಿದ್ದಾರೆ. ಇದು ಅವರ ಇದುವರೆಗಿನ ಸಿನಿಮಾಗಳಿಗಿಂತ ಕೊಂಚ ಬೇರೆ ಥರದ ಕಥೆ.

ಇತ್ತೀಚೆಗೆ ಈ ಚಿತ್ರದ ಕ್ಲೈಮ್ಯಾಕ್ಸ್‌ ದೃಶ್ಯವನ್ನೂ ಚಿತ್ರೀಕರಿಸಲಾಗಿದೆ. ಸಿನಿಮಾದ ಮುಕ್ಕಾಲು ಭಾಗದಷ್ಟು ಚಿತ್ರೀಕರಣ ಪೂರ್ಣಗೊಂಡಿದೆಯಂತೆ.

ಮೂರು ದಶಕದ ಹಿಂದೆ ತೆರೆಕಂಡ ಅಂಬರೀಷ್‌ ನಟಿಸಿದ್ದ ‘ಅವತಾರಪುರುಷ’ ಚಿತ್ರಕ್ಕೂ ಮತ್ತು ಇದಕ್ಕೂ ಯಾವುದೇ ಸಂಬಂಧ ಇಲ್ಲ. ಹಾರರ್‌, ಕಾಮಿಡಿ ಕಥೆ ಇದು ಎನ್ನುವುದು ಚಿತ್ರತಂಡದ ಸ್ಪಷ್ಟನೆ.

ADVERTISEMENT

ನಟ ಶರಣ್‌ ಅವರದು ಇದರಲ್ಲಿ ಜೂನಿಯರ್‌ ಕಲಾವಿದನ ಪಾತ್ರ. ಅವರಿಗೆ ಆಶಿಕಾ ರಂಗನಾಥ್‌ ಜೋಡಿಯಾಗಿದ್ದಾರೆ. ‘ರ‍್ಯಾಂಬೊ 2’ ಚಿತ್ರದ ಬಳಿಕ ಈ ಜೋಡಿ ಮತ್ತೆ ‘ಅವತಾರಪುರುಷ’ದಲ್ಲಿ ಒಂದಾಗಿದೆ. ಆಶಿಕಾ ಎನ್‌ಆರ್‌ಐ ಆಗಿ ಕಾಣಿಸಿಕೊಂಡಿದ್ದಾರೆ. ಶರಣ್‌ ಅವರ ಪುತ್ರಿ ಪುಣ್ಯಾ ಈ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶ ಪಡೆದಿರುವುದು ವಿಶೇಷ.

‘ಸಿನಿಮಾದಲ್ಲಿ ಮಾಟ, ಮಂತ್ರದ ಸುತ್ತ ಕಥೆ ಹೆಣೆಯಲಾಗಿದೆ. ಅದಕ್ಕೆ ಕಾಮಿಡಿಯ ಲೇಪನ ಹಚ್ಚಲಾಗಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿವೆ. ಎರಡು ಹಾಡಿನ ಚಿತ್ರೀಕರಣ ಬಾಕಿಯಿದೆ. ಚಿತ್ರದ ಉಳಿದ ಭಾಗದ ಶೂಟಿಂಗ್‌ ಪೂರ್ಣಗೊಂಡಿದೆ’ ಎಂದು ವಿವರಿಸುತ್ತಾರೆ ಸುನಿ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಒಳಪ್ಪಮನ್ನ ಎಂಬಲ್ಲಿ ಶೂಟಿಂಗ್‌ ನಡೆಸಲಾಗಿದೆ. ಉಳಿದ ಕೆಲವು ದೃಶ್ಯಗಳ ಶೂಟಿಂಗ್‌ ನಡೆದಿರುವುದು ಮಡಿಕೇರಿ, ಬೆಂಗಳೂರಿನ ಹೆಸರಘಟ್ಟದಲ್ಲಿ. ನಟ ಶ್ರೀನಗರ ಕಿಟ್ಟಿ ಮಂತ್ರವಾದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಾಯಿಕುಮಾರ್‌ ಅವರದು ಆಯುರ್ವೇದಿಕ್‌ ಪಂಡಿತನ ಪಾತ್ರವಂತೆ.

ಚಿತ್ರಕ್ಕೆ ಬಂಡವಾಳ ಹೂಡಿರುವುದು ಪುಷ್ಕರ್‌ ಮಲ್ಲಿಕಾರ್ಜುನಯ್ಯ. ರಕ್ಷಿತ್‌ ಶೆಟ್ಟಿ ನಟನೆಯ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾಕ್ಕೂ ಅವರೇ ಆರ್ಥಿಕ ಇಂಧನ ಒದಗಿಸಿದ್ದಾರೆ. ಈ ಚಿತ್ರ ಡಿಸೆಂಬರ್‌ 27ರಂದು ತೆರೆಗೆ ಬರಲಿದೆ. ಮುಂಬರುವ ಮಾರ್ಚ್‌ನಲ್ಲಿ ಜನರಿಗೆ ‘ಅವತಾರ‍ಪುರುಷ’ನ ದರ್ಶನವಾಗುವ ನಿರೀಕ್ಷೆಯಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.