ಹಿರಿಯೂರು: ನಗರದ ಎಪಿಎಂಸಿ ಆವರಣದ ಮುಖ್ಯದ್ವಾರದಲ್ಲಿ ನಿರ್ಮಿಸಿರುವ ‘ಬಂಗಾರದ ಮನುಷ್ಯ’ ಉದ್ಯಾನವನ್ನು ಗುರುವಾರ ಚಿತ್ರನಟ ದುನಿಯಾ ವಿಜಯ್ ಉದ್ಘಾಟಿಸಿದರು.
ಅಖಿಲ ಕರ್ನಾಟಕ ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಹುಚ್ಚವ್ವನಹಳ್ಳಿ ಪ್ರಸನ್ನ, ‘ಇಲ್ಲಿ ಆರು ವರ್ಷಗಳ ಹಿಂದೆ ಡಾ.ರಾಜ್ ಕುಮಾರ್ ಆಕೃತಿ ಹೋಲುವ ರೈತ ಕುಟುಂಬದ ದೃಶ್ಯಾವಳಿಯೊಂದನ್ನು ರಚಿಸಲಾಗಿತ್ತು. ದೃಶ್ಯಾವಳಿಯಲ್ಲಿ ಜೋಡೆತ್ತಿನ ಬಂಡಿಯನ್ನು ಡಾ.ರಾಜ್ ಕುಮಾರ್ ಓಡಿಸುವ, ಜತೆಯಲ್ಲಿ ಸಾಕು ನಾಯಿ, ಮತ್ತೊಂದು ಬದಿಯಲ್ಲಿ ಕರುವಿಗೆ ಹಾಲುಣಿಸುತ್ತಿರುವ ತಾಯಿ ಹಸುವಿನ ಚಿತ್ರಗಳಿದ್ದವು. ಬಿಸಿಲು–ಮಳೆ–ಗಾಳಿಗೆ ಸಿಲುಕಿ ಬಂಡಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ರಾಜ್ ಮೂರ್ತಿಯಲ್ಲಿನ ಕೈ ಮತ್ತು ಕಾಲುಗಳಲ್ಲಿನ ಬೆರಳುಗಳು ತುಂಡಾಗಿದ್ದವು. ಎತ್ತಿನ ಗಾಡಿ ತುಂಬ ಶಿಥಿಲವಾಗಿದ್ದ ಕಾರಣ ಮುರಿದು ಬಿದ್ದರೆ ಡಾ.ರಾಜ್ ಪ್ರತಿಮೆ ಹಾಳಾಗುವ ಸಾಧ್ಯತೆ ಇತ್ತು. ಇಡೀ ದೃಶ್ಯಾವಳಿಯನ್ನು ಚಿತ್ರದುರ್ಗದ ಮುರುಘಾ ವನದ ಕಲಾವಿದ ಸಂಗಮೇಶ್ ಅವರಿಂದ ಪುನರ್ ನಿರ್ಮಿಸಲಾಯಿತು’ ಎಂದು ವಿವರಿಸಿದರು.
ಪ್ರಸನ್ನ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ದುನಿಯಾ ವಿಜಯ್, ‘ದೃಶ್ಯಾವಳಿಗೆ ಮೂಲರೂಪ ಕೊಡಿಸುವ ಮೂಲಕ ಪ್ರಸನ್ನ ಅವರು ವರನಟ ಡಾ. ರಾಜ್ ಅವರಿಗೆ ಗೌರವ ಸಮರ್ಪಿಸಿರುವುದರ ಜೊತೆಗೆ ರೈತರ ಬದುಕು ಮುರಿದು ಬೀಳದಿರಲಿ ಎಂಬ ಸಂದೇಶ ಕೊಡಿಸಿದ್ದಾರೆ. ಯುವಕರು ಇಂತಹ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು. ಕನ್ನಡ ಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಮೂಲಕ ಕಲಾವಿದರ ಬೆನ್ನು ತಟ್ಟಬೇಕು’ ಎಂದು ಮನವಿ ಮಾಡಿದರು.
ನಿರ್ಮಾಪಕ ಕೆ.ಪಿ.ಶ್ರೀಕಾಂತ್, ಚಿತ್ರದುರ್ಗ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್, ಐಮಂಗಲ ಹರೀಶ್ ಹಾಗೂ ವಿಜಯ್ ಅಭಿಮಾನಿಗಳು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.