ADVERTISEMENT

Film Festival | ಸಿನಿಮಾಗಳು ಸಮಾನತೆ ಬಿಂಬಿಸಲಿ: ನಿರ್ದೇಶಕ ಜಬ್ಬಾರ್‌ ಪಟೇಲ್‌

ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮರಾಠಿ ನಿರ್ದೇಶಕ ಜಬ್ಬಾರ್‌ ಪಟೇಲ್‌

ವಿನಾಯಕ ಕೆ.ಎಸ್.
Published 2 ಮಾರ್ಚ್ 2024, 3:28 IST
Last Updated 2 ಮಾರ್ಚ್ 2024, 3:28 IST
<div class="paragraphs"><p>ಬೆಂಗಳೂರು&nbsp;ನಗರದ ಒರಾಯನ್‌ ಮಾಲ್‌ನಲ್ಲಿ ಶುಕ್ರವಾರದಿಂದ ಆರಂಭವಾದ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗಳ ವೀಕ್ಷಣೆಗಾಗಿ ಆಗಮಿಸಿದ್ದ ಸಿನಿಮಾಸಕ್ತರು</p></div>

ಬೆಂಗಳೂರು ನಗರದ ಒರಾಯನ್‌ ಮಾಲ್‌ನಲ್ಲಿ ಶುಕ್ರವಾರದಿಂದ ಆರಂಭವಾದ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳುತ್ತಿರುವ ಸಿನಿಮಾಗಳ ವೀಕ್ಷಣೆಗಾಗಿ ಆಗಮಿಸಿದ್ದ ಸಿನಿಮಾಸಕ್ತರು

   

–ಪ್ರಜಾವಾಣಿ ಚಿತ್ರ 

ಬೆಂಗಳೂರು: ನಮ್ಮದು ಸರ್ವಧರ್ಮ ಸಹಿಷ್ಣು ರಾಷ್ಟ್ರ ಎಂಬ ಗಾಂಧಿ, ಅಂಬೇಡ್ಕರ್‌ ಆಶಯಗಳನ್ನು ಕಮರ್ಷಿಯಲ್‌, ಬಾಲಿವುಡ್‌ ಸಿನಿಮಾಗಳಲ್ಲಿ ಮಸಾಲೆ ತುಂಬಿ, ಮನರಂಜನಾತ್ಮಕವಾಗಿ ತೋರಿಸುತ್ತಾರೆ. ಮೂರು ಭಿನ್ನ ಧರ್ಮದ ಮಕ್ಕಳು ಒಂದು ತಾಯಿಗೆ ರಕ್ತ ನೀಡುವಂತಹ ದೃಶ್ಯಗಳು ಸ್ವಲ್ಪ ಅವೈಜ್ಞಾನಿಕವೆನ್ನಿಸಿದರೂ, ಅಂತಿಮವಾಗಿ ಕೊಡುವ ಸಂದೇಶ ಗಟ್ಟಿಯಾದದ್ದು ಎಂದು ಮರಾಠಿ ನಿರ್ದೇಶಕ ಜಬ್ಬಾರ್‌ ಪಟೇಲ್‌ ಹೇಳಿದರು.

ADVERTISEMENT

ನಗರದಲ್ಲಿ ಶುಕ್ರವಾರ ನಡೆದ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅವರು ‘ಸಾಂವಿಧಾನಿಕ ಮೌಲ್ಯಗಳು ಮತ್ತು ಭಾರತೀಯ ಚಿತ್ರರಂಗ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸಿನಿಮಾಗಳಲ್ಲಿ ಸ್ವಾತಂತ್ರ, ಸಮಾನತೆ ಸಾರುವ ಅಂಶಗಳನ್ನು ಹೆಚ್ಚು ಹೆಚ್ಚು ಬಳಸಿಕೊಳ್ಳಬೇಕೆಂದು ಕರೆ ನೀಡಿದ ಅವರು, ಭಾರತೀಯ ಚಿತ್ರರಂಗದಲ್ಲಿ ಸಾಂವಿಧಾನಿಕ ಮೌಲ್ಯಗಳ ಅಳವಡಿಕೆ ಹಾದಿಯನ್ನು ವಿವರಿಸಿದರು.

‘ಸ್ವಾತಂತ್ರ್ಯಪೂರ್ವದಲ್ಲಿಯೇ ಬಿಮಲ್‌ ರಾಯ್‌, ಮೆಹಬೂಬ್‌ ಖಾನ್‌ರಂತಹ ನಿರ್ದೇಶಕರು ಸಂವಿಧಾನ ರಚನೆಗೆ ಮೊದಲೇ ಅದರ ಮೌಲ್ಯಗಳನ್ನು ತೆರೆಯ ಮೇಲೆ ತರಲು ಯತ್ನಿಸಿದ್ದರು. ಅಂಬೇಡ್ಕರ್‌ ಮೂಲಕ ನಾವು ಪಡೆದುಕೊಂಡಿದ್ದನ್ನು ಸಿನಿಮಾದ ಮೂಲಕ ಇನ್ನಷ್ಟು ಜನರಿಗೆ ತಲುಪಿಸುವ ಯತ್ನಗಳು ಹೆಚ್ಚಾಗಬೇಕು’ ಎಂದು ತಿಳಿಸಿದರು. ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್‌.ಎಸ್‌.ವಿದ್ಯಾಶಂಕರ್‌ ಕಾರ್ಯಕ್ರಮ ನಡೆಸಿಕೊಟ್ಟರು.

ಉತ್ತಮ ಪ್ರತಿಕ್ರಿಯೆ: ಈ ವರ್ಷದ ಚಿತ್ರೋತ್ಸವಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಪಾರ ಸಂಖ್ಯೆಯ ಸಿನಿಮೋತ್ಸಾಹಿಗಳು ಚಿತ್ರೋತ್ಸವದತ್ತ ಹೆಜ್ಜೆ ಹಾಕಿದ್ದಾರೆ. ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಜನ ಬಂದಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಉತ್ತಮ ಚಿತ್ರಗಳನ್ನು ವೀಕ್ಷಿಸಲು ಬೆಳಿಗ್ಗೆಯಿಂದಲೇ ಜನ ಸರದಿ ಸಾಲಿನಲ್ಲಿ ನಿಂತ ದೃಶ್ಯಗಳು ಅಲ್ಲಲ್ಲಿ ಕಂಡುಬಂದವು. ಮಧ್ಯಾಹ್ನ 12.50ರ ಸುಮಾರಿಗೆ ಸಿನಿಮಾದ ಪ್ರಾಂಗಣ ಭರ್ತಿಯಾಗಿತ್ತು. ಶ್ರೀಲಂಕಾದ ನಿರ್ದೇಶಕ ಪ್ರಸನ್ನ ವಿತಾನಗೆ ಅವರ ‘ಪ್ಯಾರಡೈಸ್‌’, ಬಲ್ಗೇರಿಯಾದ ‘ಬ್ಲಾಗಾಸ್‌ ಲೆಸನ್‌’, ಟರ್ಕಿಶ್‌ ಚಿತ್ರ ‘ಅಬೌಟ್‌ ಡ್ರೈ ಗ್ರಾಸಸ್‌’, ಪರ್ಷಿಯನ್‌ ಚಿತ್ರ ‘ಟೆರೆಸ್ಟ್ರಿಯಲ್‌ ವರ್ಸಸ್‌’ ಮೊದಲಾದ ಸಿನಿಮಾಗಳಿಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ಸಾಂವಿಧಾನಿಕ ಮೌಲ್ಯಗಳು ಮತ್ತು ಭಾರತೀಯ ಚಿತ್ರರಂಗ’ ಎಂಬ ವಿಷಯದ ಕುರಿತು ಮರಾಠಿ ನಿರ್ದೇಶಕ ಜಬ್ಬಾರ್‌ ಪಟೇಲ್‌ ಉಪನ್ಯಾಸ ನೀಡಿದರು. ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್‌.ಎಸ್‌ ವಿದ್ಯಾಶಂಕರ್‌ ಹಾಜರಿದ್ದರು - ಪ್ರಜಾವಾಣಿ ಚಿತ್ರ
ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಶುಕ್ರವಾರ ‘ಸಾಂವಿಧಾನಿಕ ಮೌಲ್ಯಗಳು ಮತ್ತು ಭಾರತೀಯ ಚಿತ್ರರಂಗ’ ಎಂಬ ವಿಷಯದ ಕುರಿತು ಮರಾಠಿ ನಿರ್ದೇಶಕ ಜಬ್ಬಾರ್‌ ಪಟೇಲ್‌ ಉಪನ್ಯಾಸ ನೀಡಿದರು ಪ್ರಜಾವಾಣಿ ಚಿತ್ರ
ಸಿನಿಮೋತ್ಸವದ ಮಾಹಿತಿ ಪತ್ರದಲ್ಲಿರುವ ಕೇಸರಿ ಹರವು ನಿರ್ದೇಶನದ ‘ಕಿಸಾನ್‌ ಸತ್ಯಾಗ್ರಹ’ ಸಾಕ್ಷ್ಯಚಿತ್ರದ ಟಿಪ್ಪಣಿ

‘ಕಿಸಾನ್‌ ಸತ್ಯಾಗ್ರಹ’ ಪ್ರದರ್ಶನಕ್ಕೆ ತಡೆ

ಪಂಜಾಬ್‌ ರೈತರ ಚಳವಳಿಯ ಚಿತ್ರಣ ಕಟ್ಟಿಕೊಡುವ ಕೇಸರಿ ಹರವೂ ನಿರ್ದೇಶನದ ‘ಕಿಸಾನ್‌ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಈ ವರ್ಷದ ಚಿತ್ರೋತ್ಸವ ಪ್ರದರ್ಶನ ಪಟ್ಟಿಯಲ್ಲಿ ಜಾಗ ಪಡೆದಿತ್ತು. ಆದರೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಈ ಸಾಕ್ಷ್ಯಚಿತ್ರ ಪದರ್ಶಿಸದಂತೆ ತಡೆ ಹಿಡಿದಿದೆ.

‘ಈ ಸಾಕ್ಷ್ಯಚಿತ್ರಕ್ಕೆ ಸೆನ್ಸಾರ್‌ ಇರಲಿಲ್ಲ. ಹೀಗಾಗಿ ನಾವು ಇದನ್ನು ಪ್ರದರ್ಶಿಸಲು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅನುಮತಿಗಾಗಿ ಕಳುಹಿಸಿದ್ದೆವು. ಅಲ್ಲಿ ಈ ಚಿತ್ರ ಸೇರಿದಂತೆ ಒಟ್ಟು ಮೂರು ಚಿತ್ರಗಳಿಗೆ ಅನುಮೋದನೆ ದೊರೆತಿಲ್ಲ’ ಎಂದು ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್‌.ಎಸ್‌.ವಿದ್ಯಾಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದನ್ನು ತಡೆಹಿಡಿದಿರುವುದರ ಹಿನ್ನೆಲೆ ಪ್ರಶ್ನಾರ್ಹ. ಇಸ್ರೇಲ್‌ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಹಾಗಾಗಿ ಅಲ್ಲಿನ ಚಿತ್ರಗಳನ್ನು ತಡೆಹಿಡಿದಿದ್ದಾರೆ. ಮಾನವ ಹಕ್ಕುಗಳ ದಮನದ ಕುರಿತಾಗಿನ ಈ ಚಿತ್ರಗಳು ವಿವಾದ ಹುಟ್ಟಿಸಬಹುದೆಂಬ ಉದ್ದೇಶದಿಂದ ಇರಬಹುದು. ಆದರೆ ಈ ಮೂಲಕ ಒಬ್ಬ ಚಿತ್ರ ನಿರ್ಮಾಣಕಾರನ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುತ್ತಿದೆ. ರೈತರ ಹೋರಾಟವನ್ನೇ ತಡೆಹಿಡಿಯಲು ಯತ್ನಿಸುತ್ತಿರುವವರು ನಮ್ಮ ಚಿತ್ರ ತಡೆಹಿಡಿದಿರುವುದು ಅಚ್ಚರಿಯಲ್ಲ’ ಎಂದು ನಿರ್ದೇಶಕ ಕೇಸರಿ ಹರವೂ ಕೇಂದ್ರ ಸರ್ಕಾರದ ನಿಲುವಿನ ಕುರಿತು ಬೇಸರ ವ್ಯಕ್ತಪಡಿಸಿದರು.

‘ಸಿಗ್ನೇಚರ್‌ ಹಾಡು’ ಪ್ರಮುಖ ಆಕರ್ಷಣೆ

15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಜಾನಪದ ಕಲಾ ಪ್ರಕಾರಗಳನ್ನು ಬಳಸಿಕೊಂಡು ಸೃಷ್ಟಿಸಿರುವ ‘ಸಿಗ್ನೇಚರ್‌ ಹಾಡು’ ಚಿತ್ರೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ತ್ರಿಲೋಕಚಂದ್ರ ಕೆ.ವಿ ಇಲಾಖೆ ಆಯುಕ್ತ ಹೇಮಂತ್‌ ನಿಂಬಾಳ್ಕರ್‌ ಮಾರ್ಗದರ್ಶನದಲ್ಲಿ ಚಿತ್ರ ನಿರ್ದೇಶಕ ಕೆ.ಶಿವರುದ್ರಯ್ಯ ಗೀತೆಯನ್ನು ನಿರ್ದೇಶನ ಮಾಡಿದ್ದಾರೆ. ಜಾನಪದ ಕಲಾವಿದರಾದ ಪಿಚ್ಚಳ್ಳಿ ಶ್ರೀನಿವಾಸ್ ಜನಾರ್ದನ್‌ (ಜನ್ನಿ) ರಾಮಚಂದ್ರ ಹಡಪದ ಸವಿತಾ ವೈ.ಜಿ.ಉಮಾ ಕೋಲಾರ ಅಭಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.