‘ಜೋರು ಎಂಬ ಪದಕ್ಕೆ ಪರ್ಯಾಯ ಪದ ಹೇಳಿ, ಅದೇ ನನ್ನ ಮುಂದಿನ ಚಿತ್ರದ ಶೀರ್ಷಿಕೆ’ ಹೀಗೆಂದು ಶ್ರೀಮುರಳಿ ಎರಡು ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಅವರ ಅಭಿಮಾನಿವರ್ಗದಲ್ಲಿ ಅವರ ಈ ಮಾತು ಕುತೂಹಲಕ್ಕೆ ಕಾರಣವಾಗಿತ್ತು. ಹಲವರು ಏನೇನೋ ಪದಗಳನ್ನು ಹುಡುಗಿ ಊಹೆಯನ್ನೂ ಮಾಡಿದ್ದರು. ಸ್ವತಃ ಶ್ರೀಮುರಳಿ ಅವರೇ ನಿನ್ನೆ (ಜೂನ್ 21) ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೊಸ ಸಿನಿಮಾದ ಶೀರ್ಷಿಕೆ ಬಹಿರಂಗಪಡಿಸಿದ್ದಾರೆ. ಶ್ರೀಮುರಳಿ ಹೊಸ ಸಿನಿಮಾದ ಹೆಸರು ‘ಭರಾಟೆ’. ‘ಭರ್ಜರಿ’ ಚಿತ್ರದ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.
'ಮಫ್ತಿ' ಚಿತ್ರ ಬಿಡುಗಡೆಯಾಗಿ ಎಂಟು ತಿಂಗಳು ಕಳೆದಿದ್ದರೂ ಶ್ರೀಮುರಳಿ ಹೊಸ ಸಿನಿಮಾ ಯಾವುದು ಎಂಬ ಕುತೂಹಲ ಹುಟ್ಟಿತ್ತು. ಶ್ರೀಮುರಳಿ ಸಾಮಾನ್ಯವಾಗಿ ವರ್ಷಕ್ಕೆ ಒಂದೇ ಚಿತ್ರದಲ್ಲಿ ನಟಿಸುವ ನಿಯಮವನ್ನು ಪಾಲಿಸಿಕೊಂಡು ಬಂದಿದ್ದಾರೆ. ಅವರು ನಟಿಸಿದ್ದ ಮಫ್ತಿ ಚಿತ್ರವೂ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈಗ ‘ಭರ್ಜರಿ’ಯಂಥ ಸೂಪರ್ ಹಿಟ್ ಚಿತ್ರವನ್ನು ಕೊಟ್ಟ ಚೇತನ್ ಕುಮಾರ್ ಅವರ ಜತೆಯಾಗಿದ್ದಾರೆ. ಇದು ‘ಭರಾಟೆ’ಯ ಮೇಲೆ ನಿರೀಕ್ಷೆಯ ಗೋಪುರ ನಿರ್ಮಾಣವಾಗಲು ಕಾರಣವಾಗಿದೆ.
‘ಇದು ಪಕ್ಕಾ ಎಂಟರ್ಟೈನ್ಮೆಂಟ್ ಪ್ಯಾಕೇಜ್’ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್. ‘ಶ್ರೀಮುರಳಿ ಅವರಿಗೆ ಪಕ್ಕಾ ಮಾಸ್ ಅಭಿಮಾನಿಗಳಿದ್ದಾರೆ. ನಾನು ನನ್ನ ಹಿಂದಿನ ಎರಡೂ ಸಿನಿಮಾಗಳಲ್ಲಿ ಫ್ಯಾಮಿಲಿ ಎಮೊಶನ್ಸ್ ಇದ್ದವು. ಭರಾಟೆಯಲ್ಲಿ ಈ ಎರಡೂ ಬ್ಲೆಂಡ್ ಆಗಿರುತ್ತವೆ. ಎರಡೂ ವರ್ಗದ ಪ್ರೇಕ್ಷಕರಿಗೆ ತಲುಪುವಂಥ ಸಿನಿಮಾ ಇದು’ ಎನ್ನುತ್ತಾರೆ ಚೇತನ್.
ಇದೀಗ ಈ ಚಿತ್ರದ ನಾಯಕಿಯಾಗಿ ಶ್ರೀಲೀಲಾ ನಟಿಸಲಿದ್ದಾರೆ. ಎ.ಪಿ. ಅರ್ಜುನ್ ಅವರ ‘ಕಿಸ್’ ಸಿನಿಮಾದಲ್ಲಿ ನಾಯಕಿಯಾಗಿದ್ದ ಈ ಹುಡುಗಿಗೆ ಇದು ಎರಡನೇ ಸಿನಿಮಾ.
ಉಳಿದ ಪಾತ್ರಗಳಲ್ಲಿ ಯಾರು ನಟಿಸಲಿದ್ದಾರೆ, ಶ್ರೀಮುರಳಿ ಯಾವ ರೀತಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಹಲವು ಪ್ರಶ್ನೆಗಳಿಗೆ ಇನ್ನು ಮೇಲೆಯೇ ಉತ್ತರ ಸಿಗಬೇಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.