ಮಲಯಾಳದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 2ನಿಂದ ಸ್ಪರ್ಧಿ ಡಾ.ರಜಿತ್ ಕುಮಾರ್ ಅವರನ್ನು ಹೊರ ಹಾಕಿದ್ದಕ್ಕೆ ರಜಿತ್ ಅಭಿಮಾನಿಗಳು ಬಿಗ್ಬಾಸ್ ನಿರೂಪಕ ಮೋಹನ್ ಲಾಲ್ ವಿರುದ್ಧ ಸೈಬರ್ ದಾಳಿ ನಡೆಸಿದ್ದಾರೆ. ಮಾರ್ಚ್ 10ರಂದು ಪ್ರಸಾರವಾದ ಬಿಗ್ಬಾಸ್ನ 66ನೇ ಕಂತಿನ ‘ಸ್ಕೂಲ್ ಟಾಸ್ಕ್’ನಲ್ಲಿ ಸ್ಪರ್ಧಿ ರಜಿತ್, ಸಹಸ್ಪರ್ಧಿ ರೇಷ್ಮಾಳ ಕಣ್ಣಿಗೆ ಖಾರದ ಪುಡಿ ಹಚ್ಚಿದ್ದರು. ಕೆಲವು ದಿನಗಳ ಹಿಂದೆಯಷ್ಟೇ ಕಣ್ಣಿಗೆ ಸೋಂಕು ತಗಲಿ ಚಿಕಿತ್ಸೆ ಪಡೆದು ವಾಪಸ್ ಆಗಿದ್ದ ರೇಷ್ಮಾಳೊಂದಿಗೆ ರಜಿತ್ ಈ ರೀತಿ ನಡೆದುಕೊಂಡಿದ್ದಕ್ಕೆ ತೀವ್ರ ಆಕ್ಷೇಪವ್ಯಕ್ತವಾಗಿತ್ತು.
‘ಟಾಸ್ಕ್ ಭಾಗವಾಗಿ ನಾನು ಆ ಕೆಲಸ ಮಾಡಿದೆ. ಕ್ಷಮಿಸಿ’ ಎಂದು ರಜಿತ್ ಹೇಳಿದರೂ ರೇಷ್ಮಾ ಕ್ಷಮಿಸಲಿಲ್ಲ. ಮೋಹನ್ ಲಾಲ್ ಕೂಡ ರಜಿತ್ ಕೃತ್ಯವನ್ನು ಖಂಡಿಸಿದ್ದು, ಬಿಗ್ಬಾಸ್ ನಿಯಮ ಉಲ್ಲಂಘನೆ ವಿರುದ್ಧ ಟೀಕಿಸಿದ್ದರು. ಆದರೆ ಪ್ರಬಲ ಸ್ಪರ್ಧಿಯಾಗಿದ್ದ ರಜಿತ್ ಅವರನ್ನು ಈ ರೀತಿ ಹೊರಗೆ ಕಳಿಸಿರುವುದು ಸರಿಯಲ್ಲ ಎಂದು ವಾದಿಸಿ ಅವರ ಅಭಿಮಾನಿಗಳ ಸಂಘ ಮೋಹನ್ ಲಾಲ್ ವಿರುದ್ಧ ಕಿಡಿಕಾರಿತ್ತು. ಮಹಿಳಾ ವಿರೋಧಿ ಧೋರಣೆಗಳಿಂದ ವಿವಾದಕ್ಕೀಡಾಗಿ ಸುದ್ದಿಯಲ್ಲಿದ್ದ ರಜಿತ್ ಬಿಗ್ಬಾಸ್ಗೆ ಬಂದ ನಂತರ ಅತಿಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದರು. ಈ ಖ್ಯಾತಿ ಯಿಂದಾಗಿಯೇ ಅವರನ್ನು ಶೋದಿಂದ ಹೊರಹಾಕಲಾಗಿದೆ ಎಂಬುದು ಅಭಿಮಾನಿಗಳ ವಾದ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.