ADVERTISEMENT

ಶಿವಣ್ಣನ ಬರ್ತ್‌ಡೇಗೆ ‘ವಿಡಿಯೊ ಟ್ರಿಬ್ಯೂಟ್’: ಮೈಸೂರಿನ ಯುವ ತಂಡದ ಕಾಣಿಕೆ

ನೇಸರ ಕಾಡನಕುಪ್ಪೆ
Published 11 ಜುಲೈ 2020, 13:32 IST
Last Updated 11 ಜುಲೈ 2020, 13:32 IST
ನಟ ಶಿವರಾಜ್‌ಕುಮಾರ್‌, ಅರ್ಜುನ್‌ ಕಶ್ಯಪ್ ಹಾಗೂ ಸಂಕಲನಗಾರ ಹರ್ಷ ನಂದನ್
ನಟ ಶಿವರಾಜ್‌ಕುಮಾರ್‌, ಅರ್ಜುನ್‌ ಕಶ್ಯಪ್ ಹಾಗೂ ಸಂಕಲನಗಾರ ಹರ್ಷ ನಂದನ್   

ಜುಲೈ 12 ಹ್ಯಾಟ್ರಿಕ್‌ ಹೀರೊ ಶಿವರಾಜ್‌ಕುಮಾರ್ ಅವರ ಜನ್ಮದಿನ. ಯುವಕರ ಪಾಲಿಗೆ ಹಿತಚಿಂತಕರಾಗಿರುವ ಶಿವಣ್ಣನ ಮೇಲಿನ ಅಭಿಮಾನದಿಂದ ಮೈಸೂರಿನ ಕಲಾನಿರ್ದೇಶಕರ ತಂಡವು ಜನ್ಮದಿನಕ್ಕಾಗಿ ‘ಮ್ಯೂಸಿಕಲ್ ವಿಡಿಯೊ ಟ್ರಿಬ್ಯೂಟ್‌’ ಅನ್ನು ಕಾಣಿಕೆಯಾಗಿ ನೀಡಿದ್ದಾರೆ.

‘ಕಿನೊ ಕ್ಲೌಡ್ಸ್‌’ ಎಂಬ ಸೃಜನಾತ್ಮಕ ಕಲಾ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿರುವ ಮೈಸೂರಿಗ ಅರ್ಜುನ್‌ ಕಶ್ಯಪ್‌, ಕಿರು ಚಿತ್ರಗಳ ಮೂಲಕ ಹೆಸರು ಮಾಡಿದವರು. ಚಿತ್ರ ನಿರ್ಮಾಣ, ನಿರ್ದೇಶನ ಇವರ ಆಸಕ್ತಿ. ಇವರು ಶಿವಣ್ಣನಿಂದ ಬೆನ್ನು ತಟ್ಟಿಸಿಕೊಂಡವರು. 2016ರಲ್ಲಿ ಮಹಿಳಾ ಸಬಲೀಕರಣ ವಿಷಯನ್ನು ಆಧರಿಸಿ ‘ರೆಸ್ಪೆಕ್ಟ್‌ ವಿಮೆನ್‌’ ಎಂಬ ಕಿರುಚಿತ್ರವನ್ನು ನಿರ್ಮಾಣ ಮಾಡುವಾಗ ಶಿವಣ್ಣನ ಬಳಿ ಹೋಗಿದ್ದರು. ‘ವಿಡಿಯೊ ಬೈಟ್‌ ಒಂದನ್ನು ಕೊಡುವಿರಾ ಅಣ್ಣ?’ ಎಂದು ಕೋರಿದ್ದರು. ಅದಕ್ಕೆ ಶಿವಣ್ಣ, ‘ನಿಮ್ಮಂಥ ಹುಡುಗರು ಚಿತ್ರರಂಗಕ್ಕೆ ಬರಬೇಕು’ ಎಂದು ಹುರಿದುಂಬಿಸಿದ್ದರು.

‘ನನಗೆ ಮಾತ್ರವೇ ಅಲ್ಲ, ಎಲ್ಲ ಯುವಕರಿಗೂ ಶಿವಣ್ಣ ಪ್ರೋತ್ಸಾಹಿಸುತ್ತಾರೆ. ಹಾಗಾಗಿ, ಚಿತ್ರರಂಗದಲ್ಲಿ ಅವರ ಮೇಲೆ ನನಗೆ ಅಪಾರವಾದ ಅಭಿಮಾನ. ನನ್ನ ಅಭಿಮಾನಕ್ಕೊಂದು ರೂಪ ಕೊಡಬೇಕು ಎಂದು ಬಹಳ ದಿನಗಳಿಂದ ಕನಸು ಕಂಡಿದ್ದೆ. ಅದಕ್ಕಾಗಿ ಈಗ ಜನ್ಮದಿನದ ಕಾಣಿಕೆ ಕೊಟ್ಟಿದ್ದೇನೆ. ‘ಸರ್ವಂ ಶಿವಂ’ ಎಂಬ ಮೂರು ನಿಮಿಷದ ಮ್ಯೂಸಿಕಲ್‌ ವಿಡಿಯೊ ತುಣುಕನ್ನು ರಚಿಸಿದ್ದಾರೆ.‌

ADVERTISEMENT
ಅರ್ಜುನ್‌ ಕಶ್ಯಪ್ ಹಾಗೂ ಸಂಕಲನಗಾರ ಹರ್ಷ ನಂದನ್

ಈ ವಿಡಿಯೊಗಾಗಿ ಅರ್ಜುನ್‌ ಹಾಡೊಂದನ್ನು ರಚಿಸಿದ್ದಾರೆ. ನಿರ್ಮಾಣ, ನಿರ್ದೇಶನವೂ ಇವರದೇ. ಆಂಟನಿ ಹಾಗೂ ಅರ್ಜುನ್‌ ಅವರ ಧ್ವನಿಯಲ್ಲಿ ಗಾಯನ ಮೂಡಿಬಂದಿದೆ. ಧೀರಜ್‌ ಸಂಗೀತ, ಹರ್ಷನಂದನ್‌ ಸಂಕಲನ, ಸೃಜನಾತ್ಮಕ ನಿರ್ಮಾಣ ಶಿವರಂಜನ್‌ ಮತ್ತು ಕೌಶಿಕ್ ಕುಮಾರ್, ಸಹ ಸಂಪಾದಕರಾಗಿ ಸುಪ್ರೀತ್‌ ಹಾಗೂ ನಂದನ್‌ ಕಾರ್ಯನಿರ್ವಹಿಸಿದ್ದಾರೆ. ಇವರೆಲ್ಲರೂ ಮೈಸೂರಿಗರೇ ಎಂಬುದು ವಿಶೇಷ. ‘ಸಲಗ’ ಎಂಬ ಸಂಸ್ಥೆಯ ಹೆಸರಿನಲ್ಲಿ ನಿರ್ಮಾಣವಾಗಿದೆ.

‘ಚಿತ್ರರಂಗಕ್ಕೆ ಗಟ್ಟಿ ನೆಲೆಯನ್ನು ಕಟ್ಟಿಕೊಟ್ಟಿದ್ದು ಮೈಸೂರಿನ ಕಲಾವಿದರು. ರಾಜಕುಮಾರ್, ವಿಷ್ಣುವರ್ಧನ್‌, ಅಂಬರೀಷ್ ಸೇರಿದಂತೆ ಅನೇಕರು ಈ ಮಣ್ಣಿನಿಂದಲೇ ಗುರುತಿಸಿಕೊಂಡವರು. ಆದರೆ, ಈಗ ಮೈಸೂರಿಗರು ಕೊಂಚ ಸೊರಗಿದ್ದಾರೆ. ಈ ಕೊರತೆಯನ್ನು ನೀಗಿಸಬೇಕು ಎಂಬ ಪ್ರಯತ್ನ ನಮ್ಮದು. ಹಾಗಾಗಿ, ಮೈಸೂರಿಗರಾದ ನಾವು ಸೃಜನಾತ್ಮಕವಾಗಿ, ಸತ್ವಯುತ ನಿರ್ಮಾಣವನ್ನು ನೀಡುವ ಪಣ ತೊಟ್ಟಿದ್ದೇವೆ’ ಎಂದು ಅರ್ಜುನ್‌ ‘ಪ್ರಜಾವಾಣಿ’ಯೊಂದಿಗೆ ತಮ್ಮ ಮನದಾಳದ ವಿಚಾರ ಹಂಚಿಕೊಂಡರು.

ಅರ್ಜುನ್‌ ಅವರು ಸ್ಟಾರ್‌ ಸ್ಪೋರ್ಟ್ಸ್‌, ಕಲ್ಯಾಣಿ ಮೋಟಾರ್ಸ್‌ ಸಂಸ್ಥೆಗಳಿಗೆ ಜಾಹಿರಾತುಗಳನ್ನು ನಿರ್ಮಿಸಿದ್ದಾರೆ. ಕೆಪಿಎಲ್‌ ‘ಬೆಂಗಳೂರು ಬ್ಲಾಸ್ಟರ್ಸ್‌’ ತಂಡಕ್ಕೆ ಗೀತೆಯನ್ನು ರಚಿಸಿಕೊಟ್ಟಿದ್ದಾರೆ. ‘ಬೀರ್ಬಲ್‌ ಟ್ರಿಲಜಿ’ ಸಿನಿಮಾಗೆ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.