ಬೆಂಗಳೂರು: ದೇಶದೆಲ್ಲೆಡೆ ಬಹುತೇಕ ಕೋವಿಡ್ ರೋಗಿಗಳಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದು, ಹಲವೆಡೆ ಆಮ್ಲಜನಕದ ಕೊರತೆಯಿಂದಾಗಿ ಸೋಂಕಿತರು ಸಂಕಷ್ಟ ಅನುಭವಿಸುತ್ತಿರುವುದು ವರದಿಯಾಗುತ್ತಿದೆ.
ಈ ಸಂದರ್ಭದಲ್ಲೇ ಬೆಂಗಳೂರು ಮತ್ತು ಮುಂಬೈನಲ್ಲಿರುವ ಬಡತನ ರೇಖೆಗಿಂತ ಕೆಳಗಿರುವ(ಬಿಪಿಎಲ್) ಕುಟುಂಬದ ಸಹಾಯಕ್ಕೆ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮುಂದಾಗಿದ್ದಾರೆ.
ಕರ್ನಾಟಕದವರೇ ಆಗಿರುವ ಸುನಿಲ್ ಶೆಟ್ಟಿ, ಬಾಲಿವುಡ್ನಲ್ಲಿ ನಟರಾಗಿ ಮಿಂಚಿದವರು. ಇದೀಗ ಕೆವಿಎನ್ ಪ್ರತಿಷ್ಠಾನದ ಜೊತೆಗೂಡಿ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ಉಚಿತವಾಗಿ ಬಿಪಿಎಲ್ ಕುಟುಂಬಗಳಿಗೆ ನೀಡಲು ನಿರ್ಧರಿಸದ್ದಾರೆ. ‘ಇದು ನಮ್ಮೆಲ್ಲರಿಗೂ ಪರೀಕ್ಷೆಯ ಕಾಲ. ಈ ಸಂದರ್ಭದಲ್ಲಿ ಜನರು ಪರಸ್ಪರ ಒಬ್ಬರಿಗೊಬ್ಬರು ಸಹಾಯ ಮಾಡುತ್ತಿರುವುದು ಭರವಸೆಯ ಕಿರಣದಂತೆ ಕಾಣುತ್ತಿದೆ. ಉಚಿತವಾಗಿ ಆಕ್ಸಿಜನ್ ಕಾನ್ಸನ್ಟ್ರೇಟರ್ಗಳನ್ನು ನೀಡುತ್ತಿರುವ ಈ ಅಭಿಯಾನದ ಭಾಗವಾಗುತ್ತಿರುವುದಕ್ಕೆ ನಾನು ಧನ್ಯ. ನನ್ನ ಸ್ನೇಹಿತರು ಹಾಗೂ ಅಭಿಮಾನಿಗಳಲ್ಲಿ ವಿನಂತಿ. ನಿಮಗೆ ಅಥವಾ ನಿಮ್ಮವರಿಗೆ ಯಾವುದೇ ಸಹಾಯ ಬೇಕಿದ್ದಲ್ಲಿ ನನಗೆ ಸಂದೇಶ ರವಾನಿಸಿ’ ಎಂದು ಸುನಿಲ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.