ADVERTISEMENT

ದೇಶ ಕಟ್ಟುವಿಕೆಯಲ್ಲಿ ಮೊಘಲರ ಪಾತ್ರ ಮಹತ್ವದ್ದು, ಅವಹೇಳನ ಸರಿಯಲ್ಲ: ಕಬೀರ್ ಖಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಆಗಸ್ಟ್ 2021, 9:09 IST
Last Updated 26 ಆಗಸ್ಟ್ 2021, 9:09 IST
ಕಬೀರ್ ಖಾನ್
ಕಬೀರ್ ಖಾನ್   

ಮುಂಬೈ: ‘ದೇಶ ಕಟ್ಟುವಿಕೆಯಲ್ಲಿ ಮೊಘಲರ ಪಾತ್ರ ಮಹತ್ವದಾಗಿದ್ದು, ಅವರನ್ನು ಅವಹೇಳನಕಾರಿಯಾಗಿ ಬಿಂಬಿಸುವುದು ಸರಿಯಲ್ಲ’ ಎಂದು ಬಾಲಿವುಡ್‌ ನಿರ್ದೇಶಕ ಕಬೀರ್ ಖಾನ್ ಹೇಳಿದ್ದಾರೆ.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ಭಾರತದಲ್ಲಿ ಆಡಳಿತ ನಡೆಸಿದ ಮುಸ್ಲಿಂ ರಾಜರನ್ನು ಸಿನಿಮಾಗಳಲ್ಲಿ ಕೆಟ್ಟದಾಗಿ ತೋರಿಸಲಾಗುತ್ತಿದೆ. ಜತೆಗೆ ಅವರ ಬಗ್ಗೆ ಅವಹೇಳನ ಮಾಡಲಾಗುತ್ತಿದೆ’ ಎಂದು ಅಸಮಾಧಾನ ಹೊರಹಾಕಿದ್ದರು. ಸದ್ಯ ಕಬೀರ್ ಖಾನ್ ಅವರ ಹೇಳಿಕೆ ಸಿನಿಮಾ ರಂಗದಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ನಮ್ಮಲ್ಲಿ ಭಿನ್ನ ದೃಷ್ಟಿಕೋನಗಳಿರುವುದು ನಿಜ. ಆದರೆ, ಸಿನಿಮಾಗಳಲ್ಲಿ ಮೊಘಲರ ಕುರಿತು ಏನಾದರೂ ಹೇಳಲು ಬಯಸಿದರೆ ಆದಕ್ಕೆ ಸೂಕ್ತ ಸಾಕ್ಷಿಗಳನ್ನು ಕೊಡಬೇಕು. ಇತಿಹಾಸದ ಬಗ್ಗೆ ತಿಳಿದುಕೊಳ್ಳಬೇಕು. ಇಲ್ಲವಾದರೆ ಜನರು ತಪ್ಪಾಗಿ ಗ್ರಹಿಸುತ್ತಾರೆ. ಮೊಘಲರನ್ನು ಖಳನಾಯಕರು ಎಂದು ಹೇಳಲು ಸಾಧ್ಯವಿಲ್ಲ. ದೇಶ ಕಟ್ಟುವಿಕೆಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ’ ಎಂದು ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಇತ್ತೀಚಿನ ಸಿನಿಮಾಗಳಲ್ಲಿ ಮೊಘಲರನ್ನು ರಾಕ್ಷಸರಂತೆ ತೋರಿಸಲಾಗುತ್ತಿದೆ. ಅದಕ್ಕೆ ಸಾಕ್ಷಿ ಏನಿದೆ? ಎಂದು ಪ್ರಶ್ನಿಸಿರುವ ಕಬೀರ್, ಮುಕ್ತವಾಗಿ ಚರ್ಚಿಸುವಂತೆ ಸವಾಲು ಹಾಕಿದ್ದಾರೆ. ಜತೆಗೆ, ಅಂತಹ ಸಿನಿಮಾಗಳ ಬಗ್ಗೆ ನನಗೆ ಗೌರವ ಇಲ್ಲ ಎಂದು ಹೇಳಿಕೊಂಡಿದ್ದಾರೆ.

ಬಾಲಿವುಡ್​ನಲ್ಲಿ ಹಲವು ಸೂಪರ್‌ ಹಿಟ್​ ಚಿತ್ರಗಳನ್ನು ನಿರ್ದೇಶಿಸಿರುವ ಕಬೀರ್​ ಖಾನ್​. ಭಜರಂಗಿ ಭಾಯಿಜಾನ್​, ಏಕ್​ ಥಾ ಟೈಗರ್​, ಟ್ಯೂಬ್‌ಲೈಟ್‌, ಕಾಬೂಲ್ ಎಕ್ಸ್​ಪ್ರೆಸ್​ ಮುಂತಾದ ಸಿನಿಮಾಗಳ ಮೂಲಕ ಅವರು ಖ್ಯಾತಿ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.