ADVERTISEMENT

ಸೌಂದರ್ಯದ ಗುಟ್ಟು ಬಿಡದ ಚಿರಯುವತಿ!

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2019, 10:49 IST
Last Updated 21 ನವೆಂಬರ್ 2019, 10:49 IST
ರೇಖಾ
ರೇಖಾ   

'ಚಿರಯೌವ್ವನೆ ರೇಖಾ ಸೌಂದರ್ಯಕ್ಕೆ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಫುಲ್‌ ಫಿದಾ ಆಗಿದ್ದಾರೆ. ಹೈದರಾಬಾದ್‌ನಲ್ಲಿ ಮಂಗಳವಾರ ನಡೆದ ಅಕ್ಕಿನೇನಿ ನಾಗೇಶ್ವರರಾವ್‌ (ಎಎನ್‌ಆರ್‌) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸ್ವತಃ ನಾಗಾರ್ಜುನ ಈ ಬಗ್ಗೆ ಹೇಳಿಕೊಂಡಿದ್ದಾರೆ.

ರೇಖಾ ಮತ್ತು ಮರಣೋತ್ತರವಾಗಿ ಶ್ರೀದೇವಿಗೆ ಎಎನ್‌ಆರ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶ್ರೀದೇವಿ ಪರವಾಗಿ ಪತಿ ಬೋನಿ ಕಪೂರ್‌ ಪ್ರಶಸ್ತಿ ಸ್ವೀಕರಿಸಿದರು. ಶ್ರೀದೇವಿ ಮತ್ತು ತಮ್ಮ ನಡುವಿನ ಗೆಳೆತನವನ್ನು ನಾಗಾರ್ಜುನ ಮೆಲುಕು ಹಾಕಿದರು.

ರೇಖಾ ವೇದಿಕೆಗೆ ಏರಿದಾಗ ಇಡೀ ಚಿತ್ರಣವೇ ಬದಲಾಯಿತು. ನಿಮ್ಮ ಸೌಂದರ್ಯದ ಗುಟ್ಟೇನು ಎಂದು ನಾಗಾರ್ಜುನ ಹಾಸ್ಯ ಚಟಾಕಿ ಹಾರಿಸಿದರು. ಈ ಪ್ರಶ್ನೆಯಿಂದ ರೇಖಾ ನಾಚಿ ನೀರಾದರು. ‘ನಾಗಾರ್ಜುನ ಇನ್ನೂ ಚಿರ ಯುವಕನಂತೆ ಕಾಣುತ್ತಾರೆ. ಅದಕ್ಕೆ ಅವರು ಏನು ಮಾಡುತ್ತಾರೆಯೋ ನಾನು ನನ್ನ ಸೌಂದರ್ಯಕ್ಕಾಗಿ ಅದನ್ನೇ ಮಾಡುತ್ತೇನೆ’ ಎಂದು ಕೊನೆಗೂ ಗುಟ್ಟು ಬಿಟ್ಟು ಕೊಡಲಿಲ್ಲ.

ADVERTISEMENT

ತೆಲುಗು ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡಿದ ಚೆಲುವೆ ಎಲ್ಲರನ್ನೂ ದಂಗು ಬಡಿಸಿದರು. ಎಎನ್‌ಆರ್‌, ಎನ್‌ಟಿಆರ್‌ ಮತ್ತು ತೆಲುಗು ಚಿತ್ರರಂಗದೊಂದಿಗೆ ತಮ್ಮ ಬಾಂಧವ್ಯವನ್ನು ಹಂಚಿಕೊಂಡರು. ತೆಲುಗು ಚಿತ್ರದಲ್ಲಿ ನಟಿಸುವ ಬಹುದಿನಗಳ ಆಸೆಯನ್ನು ಹೇಳಿಕೊಂಡರು. ಇದೇ ಅವಕಾಶವನ್ನು ಬಳಸಿಕೊಂಡ ನಾಗಾರ್ಜುನ,ರೇಖಾ ಜತೆ ತೆಲುಗು ಸಿನಿಮಾ ಮಾಡಲು ಸಿದ್ಧ. ಇದು ನನ್ನ ಬಹುದಿನಗಳ ಕನಸು ಎಂದು ಮನದ ಇಂಗಿತವನ್ನು ವೇದಿಕೆಯಲ್ಲಿಯೇ ಬಿಚ್ಚಿಟ್ಟರು.

ತಕ್ಷಣ ಮೈಕ್‌ ಕೈಗೆತ್ತಿಕೊಂಡ ಮೆಗಾಸ್ಟಾರ್‌ ಚಿರಂಜೀವಿ, ‘ನಾಗಾ–ರೇಖಾ ಜೋಡಿಯಾಗಿ ನಟಿಸಲಿ. ತೆರೆಯ ಮೇಲೆ ಈ ಜೋಡಿ ನೋಡಲು ನಾವೆಲ್ಲ ಕಾಯುತ್ತಿರುತ್ತೇವೆ. ನಾಗಾ ದ್ವಿಪಾತ್ರದಲ್ಲಿ ನಟಿಸಲಿ’ ಎಂದು ಹಾರೈಸಿದರು. ಅಕ್ಕಿನೇನಿ ಕುಟುಂಬದ ಜತೆ ಇಡೀ ತೆಲುಗು ಚಿತ್ರರಂಗದ ಕಲಾವಿದರಿಂದ ಸಮಾರಂಭ ಕಳೆಗಟ್ಟಿತ್ತು. ರೇಖಾ ನಟಿಸಿದ ‘ಪಾಣಿಪತ್‌’ ಡಿಸೆಂಬರ್‌ 6ರಂದು ತೆರೆ ಕಾಣಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.