ADVERTISEMENT

ಅಕ್ಷಯ್ ಕುಮಾರ್ ನಟನೆಯ ಪೃಥ್ವಿರಾಜ್ ಸಿನಿಮಾ ಶೀರ್ಷಿಕೆ ಬದಲಿಗೆ ಕರ್ಣಿ ಸೇನಾ ಪಟ್ಟು

ಪಿಟಿಐ
Published 31 ಮೇ 2021, 15:49 IST
Last Updated 31 ಮೇ 2021, 15:49 IST
ನಟ ಅಕ್ಷಯ್ ಕುಮಾರ್
ನಟ ಅಕ್ಷಯ್ ಕುಮಾರ್   

ಜೈಪುರ/ಮುಂಬೈ: ಸತ್ಯವನ್ನು ತಿರುಚಲಾಗಿದೆ ಎಂದು ಆರೋಪಿಸಿ ಸಂಜಯ್ ಲೀಲಾ ಬನ್ಸಾಲಿ ಅವರ 'ಪದ್ಮಾವತ್' ಸಿನಿಮಾ ಬಿಡುಗಡೆಗೆ ಪ್ರತಿಭಟನೆ ನಡೆಸಿದ್ದ ಶ್ರೀ ರಜಪೂತ್ ಕರ್ಣಿ ಸೇನಾ ಮುಂಬರುವ ಅಕ್ಷಯ್ ಕುಮಾರ್ ಅಭಿನಯದ 'ಪೃಥ್ವಿರಾಜ್' ಸಿನಿಮಾದತ್ತ ಇದೀಗ ಗಮನ ಹರಿಸಿದ್ದು, ಶೀರ್ಷಿಕೆಯನ್ನು ಬದಲಾಯಿಸಬೇಕೆಂದು ಒತ್ತಾಯಿಸುತ್ತಿದೆ.

ಯಶ್ ರಾಜ್ ಫಿಲ್ಮ್ಸ್ ಐತಿಹಾಸಿಕ ನಾಟಕದ ಶೀರ್ಷಿಕೆಯು ಕೊನೆಯ ಹಿಂದೂ ಚಕ್ರವರ್ತಿ ಪೃಥ್ವಿರಾಜ್ ಚೌಹಾಣ್ ಅವರ ಹಿರಿಮೆಯನ್ನು ಪ್ರತಿಬಿಂಬಿಸುವಂತಿರಬೇಕೆಂದು ಬಯಸಿದ್ದೇವೆ. ಆದರೆ, ಕೇವಲ 'ಪೃಥ್ವಿರಾಜ್' ಎಂದು ಹೆಸರಿಟ್ಟಿರುವುದು 'ಆತನ ವೈಭವಕ್ಕೆ ಅನ್ಯಾಯ' ಮಾಡಿದಂತಾಗುತ್ತದೆ ಎಂದಿರುವ ಕರ್ಣಿ ಸೇನಾ, ಪ್ರತಿಭಟನೆಯ ಎಚ್ಚರಿಕೆ ನೀಡಿದೆ.

'ಕೊನೆಯ ಹಿಂದೂ ಚಕ್ರವರ್ತಿ ಮತ್ತು ಮಹಾನ್ ರಜಪೂತ ರಾಜನಾಗಿದ್ದ ಪೃಥ್ವಿರಾಜ್ ಚೌಹಾಣ್ ಅವರ ಮೇಲೆ ಚಿತ್ರ ನಿರ್ಮಾಪಕರು ಈ ಸಿನಿಮಾವನ್ನು ಮಾಡಿದ್ದಾರೆ. ಚಿತ್ರದ ಹೆಸರನ್ನು ಕೇವಲ ಪೃಥ್ವಿರಾಜ್ ಎಂದು ಹೇಗೆ ಇಡಬಹುದು? ಶೀರ್ಷಿಕೆಗೆ ಪೂರ್ಣ ಹೆಸರು ಇರಬೇಕು' ಎಂದು ಶ್ರೀ ರಜಪೂತ್ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಮಹಿಪಾಲ್ ಸಿಂಗ್ ಮಕ್ರಾನಾ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ADVERTISEMENT

ದಿಲೀಪ್ ಸಿಂಗ್ ನೇತೃತ್ವದ ಕರ್ಣಿ ಸೇನೆಯ ಮುಂಬೈ ತಂಡವು ಕಳೆದ ವಾರ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಶೀರ್ಷಿಕೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ, ಆದರೆ ಇನ್ನೂ ಯಾವುದೇ ಎಫ್ಐಆರ್ ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.

ಈ ವಿಚಾರವಾಗಿ ಸದ್ಯ ಚಿತ್ರ ನಿರ್ಮಾಣ ಸಂಸ್ಥೆಯಿಂದ ಪ್ರೊಡಕ್ಷನ್ ಹೌಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಳೆದ ವರ್ಷ ಮಾರ್ಚ್‌ನಲ್ಲಿ ಮಕ್ರಾನ ನೇತೃತ್ವದ ಕರ್ಣಿ ಸೇನಾ ಸದಸ್ಯರು ಜೈಪುರದ ಹೊರವಲಯದಲ್ಲಿ ನಡೆಯುತ್ತಿದ್ದ 'ಪೃಥ್ವಿರಾಜ್' ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದರು.

ಚಲನಚಿತ್ರ ನಿರ್ಮಾಪಕರು ಬಯೋಪಿಕ್ ಸಿನಿಮಾಗಳನ್ನು ಮಾಡುವಾಗ ಐತಿಹಾಸಿಕ ವ್ಯಕ್ತಿಗಳಿಗೆ ಸೂಕ್ತ ಗೌರವ ನೀಡಬೇಕು. 'ನಮ್ಮ ಪೂರ್ವಜರು ತಮ್ಮ ಪ್ರಾಣ ತ್ಯಾಗ ಮಾಡುವ ಮೂಲಕ ಇತಿಹಾಸ ನಿರ್ಮಿಸಿದರು. ಇದು ನಮಗೆ ಇತಿಹಾಸವಾಗಿದ್ದರೆ, ಚಲನಚಿತ್ರ ನಿರ್ಮಾಪಕರಿಗೆ ವ್ಯವಹಾರವಾಗಿದೆ. ಇತಿಹಾಸವು ರಚನೆಯಾಗಿದ್ದು ಸಂಸ್ಕೃತಿಯನ್ನು ರಕ್ಷಿಸಲು ಹೊರತು ವ್ಯಾಪಾರ ಮಾಡಲು ಮತ್ತು ಲಾಭ ಗಳಿಸಲು ಅಲ್ಲ' ಎಂದು ಹೇಳಿದರು.

ಪೃಥ್ವಿರಾಜ್ ಸಿನಿಮಾವನ್ನು ಬರಹಗಾರ-ನಿರ್ದೇಶಕ ಚಂದ್ರಪಾರಕ್ ದ್ವಿವೇದಿ ನಿರ್ದೇಶಿಸಿದ್ದಾರೆ. ಇದನ್ನು ಯಶ್ ರಾಜ್ ಫಿಲ್ಮ್ಸ್ ನಿರ್ಮಿಸುತ್ತಿದ್ದು, ಕುಮಾರ್ ಅವರ ಪೃಥ್ವಿರಾಜ್ ಚೌಹಾಣ್ ಎದುರು ಮಿಸ್ ವರ್ಲ್ಡ್ 2017ರ ವಿಜೇತೆ ಮಾನುಶಿ ಚಿಲ್ಲರ್ ಸನ್ಯೋಗಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.