ಹೈದರಾಬಾದ್: ‘ಮೆಗಾಸ್ಟಾರ್’ ಚಿರಂಜೀವಿ ನಟನೆಯ ‘ಆಚಾರ್ಯ’ ಚಿತ್ರದಿಂದ ನಟಿ ತ್ರಿಷಾ ಕೃಷ್ಣನ್ ಹೊರನಡೆದಿರುವುದು ಹಳೆಯ ಸುದ್ದಿ. ಕೊರಟಾಲ ಶಿವ ನಿರ್ದೇಶನದ ಚಿರು ನಾಯಕನಾಗಿರುವ 152ನೇ ಚಿತ್ರ ಇದು. ತಾವು ಈ ಚಿತ್ರ ಕೈಬಿಟ್ಟಿರುವುದಾಗಿ ತ್ರಿಷಾ ಟ್ವಿಟ್ ಮೂಲಕ ಘೋಷಿಸಿದ್ದರು.
‘ಈ ಸಿನಿಮಾದಲ್ಲಿ ನಟಿಸುವ ಸಂಬಂಧ ನನ್ನೊಟ್ಟಿಗೆ ಮೊದಲಿಗೆ ನಿರ್ಮಾಪಕರು ನಡೆಸಿದ ಮಾತುಕತೆಗೂ ಹಾಗೂ ನಟನೆಗೆ ಸಜ್ಜಾದಾಗ ಅವರು ಹೇಳಿದ ನನ್ನ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿತ್ತು. ಈ ಸೃಜನಾತ್ಮಕ ಕೆಲಸ ವ್ಯತ್ಯಾಸದಿಂದಲೇ ನಾನು ಚಿತ್ರದಿಂದ ಹೊರ ನಡೆದೆ’ ಎಂದು ಹೇಳಿದ್ದರು.
ಆಕೆ ನಟಿಸಬೇಕಿದ್ದ ಪಾತ್ರದಲ್ಲಿ ಈಗ ಕಾಜಲ್ ಅಗರ್ವಾಲ್ ನಟಿಸುವುದು ಖಾತ್ರಿಯಾಗಿದೆ. ಆದರೆ, ತ್ರಿಷಾ ಅವರ ಹೇಳಿಕೆಯು ಚಿರಂಜೀವಿ ಅವರಿಗೆ ಅಚ್ಚರಿ ಮೂಡಿಸಿದ್ದು ಸುಳ್ಳಲ್ಲ. ಇತ್ತೀಚೆಗೆ ಮಾಧ್ಯಮದವರೊಟ್ಟಿಗೆ ನಡೆದ ಸಂವಾದದಲ್ಲಿ ಚಿರಂಜೀವಿ ಅವರು ತ್ರಿಷಾ ಚಿತ್ರದಿಂದ ಹೊರಹೋದ ನೈಜ ಕಾರಣವನ್ನು ಹೇಳಿದ್ದಾರೆ.
‘ಆಚಾರ್ಯ’ ಸಿನಿಮಾದಲ್ಲಿ ಆಕೆ ನಟಿಸುವುದಿಲ್ಲ ಎಂಬ ಸುದ್ದಿ ಕೇಳಿ ನನಗೂ ಶಾಕ್ ಆಯಿತು. ಈ ಬಗ್ಗೆ ನನ್ನ ಚಿತ್ರತಂಡದೊಟ್ಟಿಗೆ ಚರ್ಚಿಸಿದೆ. ನನ್ನ ಮಗಳು ಸುಶ್ಮಿತಾ ಆಕೆಯೊಟ್ಟಿಗೆ ಮಾತನಾಡಲು ಸಿದ್ಧಳಿದ್ದಳು. ಮಣಿರತ್ನಂ ನಿರ್ದೇಶನದ ಬಿಗ್ಬಜೆಟ್ ಸಿನಿಮಾದಲ್ಲಿ ತ್ರಿಷಾ ನಟಿಸುತ್ತಿದ್ದಾರೆ. ಜೊತೆಗೆ, ಈಗಾಗಲೇ ಹಲವು ಸಿನಿಮಾಗಳಿಗೆ ಸಹಿ ಹಾಕಿದ್ದಾರೆ. ಸಮಯದ ಹೊಂದಾಣಿಕೆಯಿಂದ ಹಿಂದೆ ಸರಿದಿದ್ದಾರೆ. ಆಕೆ ಹೇಳಿದಂತೆ ಯಾವುದೇ ಸೃಜನಾತ್ಮಕ ವ್ಯತ್ಯಾಸವನ್ನು ನನ್ನ ತಂಡ ಸೃಷ್ಟಿಸಿಲ್ಲ’ ಎಂದು ಹೇಳಿದ್ದಾರೆ ಚಿರಂಜೀವಿ.
‘ಆಚಾರ್ಯ’ ಚಿತ್ರದಲ್ಲಿ ಮಹೇಶ್ ಬಾಬು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಈಗ ಆ ಪಾತ್ರದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ. ಚೆರ್ರಿ ಮತ್ತು ನಿರಂಜನ್ ರೆಡ್ಡಿ ಇದಕ್ಕೆ ಬಂಡವಾಳ ಹೂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.