ಚಿತ್ರಮಂದಿರಗಳಲ್ಲಿ ‘ದೃಶ್ಯ–2’ ಹಾಗೂ ಒಟಿಟಿ ವೇದಿಕೆಯಲ್ಲಿ ‘ಕನ್ನಡಿಗ’ ಸಿನಿಮಾಗಳ ಬಿಡುಗಡೆ ನಂತರ, ಕ್ರೇಜಿಸ್ಟಾರ್ ರವಿಚಂದ್ರ ವಿ. ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.
ಎನ್.ಎಸ್. ರಾಜಕುಮಾರ್ ತಮ್ಮ ಓಂಕಾರ್ ಫಿಲಂಸ್ ಮೂಲಕ ‘ರಮ್ಯ ರಾಮಸ್ವಾಮಿ’ ಎಂಬ ಚಿತ್ರವನ್ನು ಸದ್ಯದಲ್ಲೇ ಆರಂಭಿಸಲಿದ್ದು, ನಾಯಕನ ಪಾತ್ರಕ್ಕೆ ರವಿಚಂದ್ರ ವಿ. ಬಣ್ಣಹಚ್ಚಲಿದ್ದಾರೆ. ಜನಾರ್ದನ ಮಹರ್ಷಿ ಅವರು ಈ ಚಿತ್ರಕ್ಕೆ ಕಥೆ ಬರೆದಿದ್ದು, ಚಿ.ಗುರುದತ್ ನಿರ್ದೇಶನದಲ್ಲಿ ಈ ಚಿತ್ರ ತೆರೆ ಮೇಲೆ ಬರಲಿದೆ. ‘ರಾಮಸ್ವಾಮಿ’ ಪಾತ್ರದಲ್ಲಿ ರವಿಚಂದ್ರ ವಿ. ಅವರು ಕಾಣಿಸಿಕೊಳ್ಳಲಿದ್ದು, ‘ರಮ್ಯ’ ಪಾತ್ರದಲ್ಲಿ ಯಾರು ನಟಿಸುತ್ತಿದಾರೆಂಬ ಕುತೂಹಲ ಎಲ್ಲರಲ್ಲೂ ಇದೆ. ‘ಆ ಪಾತ್ರದಲ್ಲಿ ಖ್ಯಾತ ನಟಿಯೊಬ್ಬರು ನಟಿಸಲಿದ್ದು, ಅವರು ಯಾರು ಎನ್ನುವುದನ್ನು ಶೀಘ್ರದಲ್ಲೇ ತಿಳಿಸಲಾಗುವುದು’ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಜಿ.ಎಸ್.ವಿ ಸೀತಾರಾಂ ಛಾಯಾಗ್ರಹಣ ಹಾಗೂ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿರಲಿದೆ. ಚಿತ್ರದ ಕುರಿತು ಹೆಚ್ಚಿನ ಮಾಹಿತಿ ಶೀಘ್ರದಲ್ಲೇ ಹೊರಬೀಳಲಿದೆ ಎಂದಿದೆ ಚಿತ್ರತಂಡ.
ರವಿಚಂದ್ರ ವಿ. ನಟನೆಯ ‘ರವಿ ಬೋಪಣ್ಣ’ ಚಿತ್ರವೂ ಬಿಡುಗಡೆಗೆ ಸಿದ್ಧವಾಗಿದೆ. ಕೆಲ ತಿಂಗಳ ಹಿಂದೆ ತಮ್ಮ 1n1ly ಯೂಟ್ಯೂಬ್ ಚಾನೆಲ್ ಮುಖಾಂತರ ಹೊಸ ಸಿನಿಮಾಗಳ ಕನಸು ಬಿಚ್ಚಿಟ್ಟಿದ್ದ ರವಿಚಂದ್ರ ವಿ., ‘ಗಾಡ್’, ‘6T’ ಹಾಗೂ ‘ಬ್ಯಾಡ್ಬಾಯ್ಸ್’ ಹೀಗೆ ಮೂರು ಚಿತ್ರಗಳ ಝಲಕ್ ನೀಡಿದ್ದರು. ‘ಕನ್ನಡಿಗ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಪಾವನಾ ಗೌಡ, ‘6T–ಲಿವಿಂಗ್ ವಿದ್ ದಿ ಪಾಸ್ಟ್’ ಚಿತ್ರದಲ್ಲೂ ಗ್ಲ್ಯಾಮರಸ್ ಪಾತ್ರಕ್ಕೆ ಬಣ್ಣಹಚ್ಚಲಿದ್ದಾರೆ. ‘ಬ್ಯಾಡ್ಬಾಯ್ಸ್’ ಚಿತ್ರದಲ್ಲಿ ರವಿಚಂದ್ರ ಪುತ್ರರಾದ ಮನೋರಂಜನ್ ಹಾಗೂ ವಿಕ್ರಮ್ ಕೂಡಾ ಕಾಣಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.