ADVERTISEMENT

ಸಾಹಿತಿ ತೇಜಸ್ವಿ ಕಥೆಯಾಧಾರಿತ ಸಿನಿಮಾ: ಗೆಲುವಿನ ನಗೆ ಬೀರಿದ ‘ಮುಸ್ತಾಫಾ’

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 19:30 IST
Last Updated 8 ಜೂನ್ 2023, 19:30 IST
ನಟ ಧನಂಜಯ್‌
ನಟ ಧನಂಜಯ್‌   

ಡಾಲಿ ಧನಂಜಯ ‘ಡೇರ್ ಡೆವಿಲ್ ಮುಸ್ತಾಫಾ’ ಚಿತ್ರತಂಡದೊಂದಿಗೆ ವೇದಿಕೆಯಲ್ಲಿದ್ದರು. ಅದಕ್ಕೆ ಕಾರಣ ಸಿನಿಮಾದ ಯಶಸ್ಸು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದ ಸಿನಿಮಾ ಮೂರನೇ ವಾರಕ್ಕೆ ಕಾಲಿಟ್ಟಿದೆ.

ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಕಥೆಯಾಧಾರಿತ ‘ಡೇರ್ ಡೆವಿಲ್ ಮುಸ್ತಾಫಾ’ ರಾಜ್ಯ ಹಾಗೂ ಹೊರ ದೇಶದಲ್ಲಿ 80ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಮೂರನೇ ವಾರವೂ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದುಬೈ, ಅಮೆರಿಕ, ಯುರೋಪ್ ದೇಶದಲ್ಲಿ ಬಿಡುಗಡೆಯಾಗಿರುವ ಪೂರ್ಣಚಂದ್ರ ತೇಜಸ್ವಿ ಕಥೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎಂದು ಚಿತ್ರತಂಡ ಹೇಳಿದೆ.

ಡಾಲಿ ಧನಂಜಯ ಮಾತನಾಡಿ, ‘ನಾನು ಇಲ್ಲಿ ಕುಳಿತು ಈ ಗೆಲುವಿನ ಸಂಭ್ರಮವನ್ನು ನೋಡಲು ಬಂದೆ. ಎಲ್ಲಾ ಸಿನಿಮಾಗಳಲ್ಲಿಯೂ ದುಡ್ಡು ಇರುವುದಿಲ್ಲ. ಕಷ್ಟಪಟ್ಟು ಸಿನಿಮಾ ಮಾಡಿರುತ್ತಾರೆ. ಬಿಡುಗಡೆಗೆ ಖರ್ಚು ಮಾಡಲು ಸಾಧ್ಯವಾಗುತ್ತಿರುವುದಿಲ್ಲ. ಈ ಸಿನಿಮಾ ಪೂರ್ಣಚಂದ್ರ ತೇಜಸ್ವಿ ಅವರನ್ನು ಸಂಭ್ರಮಿಸಲು ಸಿಕ್ಕ ಅವಕಾಶ. ನನ್ನ ಕಟೌಟ್ ಮುಂದೆ ಕುಣಿದಾಗಲು ಇಷ್ಟು ಖುಷಿ ಕೊಟ್ಟಿರಲಿಲ್ಲ. ಅಷ್ಟೊಂದು ಖುಷಿ ಪೂರ್ಣಚಂದ್ರ ತೇಜಸ್ವಿ ಕಟೌಟ್ ಮುಂದೆ ಕುಣಿದಾಗ ಸಿಕ್ಕಿದೆ ಎಂದರು.

ADVERTISEMENT

ಶಶಾಂಕ್ ಸೋಗಾಲ್ ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ಈ ಸಿನಿಮಾ ನಿರ್ಮಿಸಿದ್ದಾರೆ. ರಾಹುಲ್‌ ರಾಯ್‌ ಛಾಯಾಗ್ರಹಣ, ನವನೀತ್‌ ಶ್ಯಾಮ್‌ ಸಂಗೀತವಿದೆ. ಶಿಶಿರ್‌ ಬೈಕಾಡಿ, ಆದಿತ್ಯ ಅಶ್ರೀ, ಎಂ.ಎಸ್‌. ಉಮೇಶ್‌, ಮಂಡ್ಯ ರಮೇಶ್‌, ನಾಗಭೂಷಣ್‌ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿದ್ದಾರೆ.

‘ಡೇರ್ ಡೆವಿಲ್ ಮುಸ್ತಾಫಾ’ ಸಿನಿಮಾದ ದೃಶ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.