ADVERTISEMENT

ಡಿಬಾಸ್‌ ಫ್ಯಾನ್ಸ್‌, ಜಗ್ಗೇಶ್ ಮಧ್ಯೆ ವಿವಾದ: ಅಭಿಮಾನಿಗಳ ಪರವಾಗಿ ದರ್ಶನ್‌ ಕ್ಷಮೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2021, 15:28 IST
Last Updated 24 ಫೆಬ್ರುವರಿ 2021, 15:28 IST
ದರ್ಶನ್‌
ದರ್ಶನ್‌   

ಬೆಂಗಳೂರು: ದರ್ಶನ್‌ ಅಭಿಮಾನಿಗಳು ಮತ್ತು ನಟ ಜಗ್ಗೇಶ್‌ ಅವರ ನಡುವಿನ ಸಂಘರ್ಷ ಕೊನೆಗೂ ತಣ್ಣಗಾಗುತ್ತಾ ಬಂದಿದೆ. ‘ನನ್ನ ಅಭಿಮಾನಿಗಳಿಂದ ಹಿರಿಯರಿಗೆ (ಜಗ್ಗೇಶ್‌ ಅವರಿಗೆ) ನೋವಾಗಿದ್ದರೆ ಅವರ ಪರವಾಗಿ ನಾನೇ ಕ್ಷಮೆಯಾಚಿಸುತ್ತೇನೆ’ ಎಂದು ನಟ ದರ್ಶನ್‌ ಅವರು ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

‘ವಿವಾದ ಆದ ದಿನ ನಾನು ತಿರುಪತಿಗೆ ಹೋಗಿದ್ದೆ. ಬರುವಾಗ ತಡರಾತ್ರಿ ಆಗಿತ್ತು. ಆ ವೇಳೆಗೆ ನಿರ್ಮಾಪಕ ವಿಖ್ಯಾತ್‌ ಅವರ ಸುಮಾರು 50ರಿಂದ 60 ಮಿಸ್ಡ್‌ ಕಾಲ್‌ಗಳು ಇದ್ದವು. ಆ ಹೊತ್ತಿನಲ್ಲಿ ಕರೆ ಮಾಡುವುದು ಸರಿಯಲ್ಲ ಎಂದು ಹೇಳಿ ಮರುದಿನ ಮಾತನಾಡಿದೆ. ನನ್ನ ಅಭಿಮಾನಿಗಳು ಜಗ್ಗೇಶ್‌ ಅವರ ಶೂಟಿಂಗ್‌ ಸೆಟ್‌ಗೆ ಹೋಗಿರುವುದು ಗೊತ್ತಾಗಿದ್ದರೆ ಅಂದೇ ಬೈದು ಬಿಡುತ್ತಿದ್ದೆ’ ಎಂದರು.

‘ಜಗ್ಗೇಶ್‌ ನಮ್ಮ ಹಿರಿಯರು. ಹಿರಿಯರು ಯಾವತ್ತೂ ಮುಂದಿರಬೇಕು. ನಾವು ಹಿಂದಿರಬೇಕು. ಒಂದು ವೇಳೆ ಅವರು ಮಾತನಾಡಿದ್ದರೆ ನಮ್ಮ ಬಗ್ಗೆ ತಾನೆ. ನಮ್ಮ ಬಗೆಗಲ್ಲದೇ ಇನ್ಯಾರ ಬಗ್ಗೆ ಮಾತನಾಡಲು ಸಾಧ್ಯ? ಎಂದ ಅವರು, ಈ ವಿವಾದ ಆಗುತ್ತಿದ್ದಂತೆಯೇ ಜಗ್ಗೇಶ್‌ ಅವರಿಗೆ ಕರೆ ಮಾಡಿದ್ದೆ. ಆದರೆ ಸಂಪರ್ಕ ಸಾಧ್ಯವಾಗಲಿಲ್ಲ’ ಎಂದರು.

ADVERTISEMENT

‘ಇಷ್ಟಕ್ಕೂ ಈ ವಿವಾದದಲ್ಲಿ ನನ್ನ ಯಾವುದೇ ಪಾತ್ರ ಇಲ್ಲ. ನಿರ್ಮಾಪಕ ವಿಖ್ಯಾತ್‌ ಅವರಿಗೂ ಇದನ್ನೇ ಹೇಳಿದ್ದೆ. ಕರೆಯ ರೆಕಾರ್ಡಿಂಗನ್ನು ಒಂದೋ ವಿಖ್ಯಾತ್‌ ಸೋರಿಕೆ ಮಾಡಿರಬೇಕು ಅಥವಾ ಜಗ್ಗೇಶ್‌ ಅವರು ಮಾಡಿರಬೇಕು. ಇವರಿಬ್ಬರ ನಡುವಿನ ವಿಚಾರ ಇದರಲ್ಲಿ ನನ್ನ ಪಾತ್ರ ಏನಿದೆ? ಆದರೂ ಅವರಿಗೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ’ ಎಂದರು.

ದರ್ಶನ್‌ ಮಾತಿಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿದ ಜಗ್ಗೇಶ್‌, ‘ಸಮಯ ಸಂದರ್ಭ ವಿಷಘಳಿಗೆ. ಪ್ರೀತಿ ವಿಶ್ವಾಸಕ್ಕೆ ತಾತ್ಕಾಲಿಕ ಸಮಸ್ಯೆ. ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ ಅಪನಂಬಿಕೆ ಮೋಡ ಸರಿದು ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ!
ಕನ್ನಡಕ್ಕೆ ಒಗ್ಗಟ್ಟಿರಲಿ. ಮನಸ್ಸು ಹಗುರವಾಯಿತು ಧನ್ಯವಾದ. ಇನ್ನೆಂದು ಇಂಥ ದಿನ ಬರದಿರಲಿ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.