ADVERTISEMENT

ನಟ ಶಿವರಾಜ್‌ಕುಮಾರ್‌ ಅವರನ್ನು ದರ್ಶನ್‌ ಹೊಗಳಿದ್ದೇಕೆ?

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2019, 9:14 IST
Last Updated 2 ಡಿಸೆಂಬರ್ 2019, 9:14 IST
‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌
‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌   

‘ಕನ್ನಡ ಚಿತ್ರರಂಗಕ್ಕೆ ನಟ ಶಿವರಾಜ್‌ಕುಮಾರ್‌ ಒಬ್ಬರೇ ಹ್ಯಾಟ್ರಿಕ್‌ ಹೀರೊ. ನಾನು ಹ್ಯಾಟ್ರಿಕ್‌ ಸಾಧಿಸುತ್ತೇನೆ ಎಂದು ಹೇಳುವುದಿಲ್ಲ. ಒಳ್ಳೆಯ ಸಿನಿಮಾ ಕೊಡುವುದಷ್ಟೇ ನನ್ನ ಉದ್ದೇಶ’ ಎಂದು ‘ಚಾಲೆಂಜಿಂಗ್‌ ಸ್ಟಾರ್‌’ ದರ್ಶನ್‌ ಹೇಳಿದ್ದಾರೆ.

ಪ್ರಸ‌ಕ್ತ ವರ್ಷ ದಚ್ಚು ನಟನೆಯ ‘ಯಜಮಾನ’ ಮತ್ತು ‘ಮುನಿರತ್ನ ಕುರುಕ್ಷೇತ್ರ’ ಚಿತ್ರಗಳು ಯಶಸ್ಸು ಕಂಡಿವೆ. ಈ ಹಿನ್ನೆಲೆಯಲ್ಲಿ ‘ಒಡೆಯ’ ಚಿತ್ರದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಒಂದು ವರ್ಷಕ್ಕೆ ಮೂರು ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದೆ. ಆ ನಿಟ್ಟಿನಲ್ಲಿ ವೇಗವಾಗಿಯೇ ನನ್ನ ಕೆಲಸ ಮಾಡುತ್ತಿರುವೆ. ಆದರೆ, ನನ್ನ ಯೋಜನೆಗೆ ಬ್ರೇಕ್‌ ಹಾಕಿದ್ದು‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ. 2ಡಿ ಮತ್ತು 3ಡಿ ರೂಪದಲ್ಲಿ ಇದು ನಿರ್ಮಾಣವಾಯಿತು. ಇದಕ್ಕಾಗಿ ಸಾಕಷ್ಟು ಸಮಯ ಹಿಡಿಯಿತು. ಆದರೆ, ಸರಿಯಾದ ಸಮಯಕ್ಕೆ ಇದೇ ವರ್ಷ ಬಿಡುಗಡೆಯಾಗಿದ್ದು ಖುಷಿ ನೀಡಿದೆ’ ಎಂದು ವಿವರಿಸಿದರು ದರ್ಶನ್‌.

‘ಮೊದಲಿನಿಂದಲೂ ನಾನು ಸಂದೇಶ್‌ ಪ್ರೊಡಕ್ಷನ್‌ ಜೊತೆಗೆ ಬೆಳೆದಿದ್ದೇನೆ. ಈ ಮೊದಲು ಇದೇ ಪ್ರೊಡಕ್ಷನ್‌ನಡಿ ‘ಪ್ರಿನ್ಸ್‌’ ಸಿನಿಮಾ ಮಾಡಿದೆ. ಸಂದೇಶ್‌ ನಾಗರಾಜ್‌ ಅವರು ಸೆಟ್‌ಗೆ ಬಂದು ಹೋಗುತ್ತಿದ್ದರು. ‘ಐರಾವತ’ ಸಿನಿಮಾದ ವೇಳೆಯೂ ಇದೇ ಆಯಿತು. ನೀವು ನಿಂತುಕೊಂಡರೆ ಮಾತ್ರ ‘ಒಡೆಯ’ ಸಿನಿಮಾ ಮಾಡುತ್ತೇನೆ ಎಂದು ಹೇಳಿದ್ದೆ. ನಾನು ಶೂಟಿಂಗ್‌ ಮುಗಿಸಿಕೊಟ್ಟು ಬೇರೊಂದು ಸಿನಿಮಾಕ್ಕೆ ಹೊರಟು ಹೋದೆ. ಚಿತ್ರದ ಉಳಿದ ಎಲ್ಲಾ ಕೆಲಸವನ್ನೂ ಅವರೇ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದರು.

ADVERTISEMENT

ಎಂ.ಡಿ. ಶ್ರೀಧರ್‌ ನಿರ್ದೇಶನದ ‘ಒಡೆಯ’ ಚಿತ್ರ ಡಿಸೆಂಬರ್‌ 12ರಂದು ತೆರೆ ಕಾಣಲಿದೆ. ಇದರಲ್ಲಿ ದರ್ಶನ್‌ಗೆ ಕೊಡಗಿನ ಬೆಡಗಿ ಸನ ತಿಮ್ಮಯ್ಯ ಜೋಡಿಯಾಗಿದ್ದಾರೆ. ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.