ಹೊಸದಾಗಿ ಮದುವೆಯಾದ ಜೋಡಿಗಳು ಇನ್ನೇನು ಹನಿಮೂನ್ ಮುಗಿಸಿ ವಾಪಸ್ ಆದ ಕೆಲ ದಿನಗಳಲ್ಲೇ ಪರಿಚಿತರು, ಸಂಬಂಧಿಕರು ಏನಾದರೂ ವಿಶೇಷ ಸುದ್ದಿ ಇದೆಯೇ ಎಂದು ದಂಪತಿಗಳನ್ನು ವಿಚಾರಿಸುವುದುಂಟು. ಇಂಥ ವಿಚಾರಣೆಗಳಿಗೆ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದಂಪತಿಯೂ ಹೊರತಾಗಿಲ್ಲ.
ಈಚೆಗೆ ಕಾನ್ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಗಿಳಿಹಸಿರಿನ ಉದ್ದನೆಯ ಉಡುಪು ತೊಟ್ಟು ಮಿಂಚಿದ್ದ ದೀಪಿಕಾಳಚಿತ್ರವನ್ನು ತುಸು ಮಾರ್ಪಡಿಸಿ ರಣವೀರ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಾಕಿದ್ದೇ ತಡ, ಪರಿಚಿತರು ಸೇರಿದಂತೆ ಅಭಿಮಾನಿಗಳು ಸಾಲುಸಾಲಾಗಿ ವಿಶೇಷ ಸುದ್ದಿಯ ಬಗ್ಗೆ ವಿಚಾರಿಸಿದ್ದರು. ಒಬ್ಬ ಅಭಿಮಾನಿಯಂತೂ ದೀಪಿಕಾ ಗರ್ಭಿಣಿಯಾಗಿದ್ದಾರೆ. ಈ ಒಂಬತ್ತು ತಿಂಗಳು ನಮ್ಮ ದೀಪಿಕಾಳನ್ನು ಚೆನ್ನಾಗಿ ನೋಡಿಕೊಳ್ಳಿ ಎಂದೂ ರಣವೀರ್ಗೆ ಸಲಹೆ ನೀಡಿದ್ದ.
ಮದುವೆಯಾದಾಗಿನಿಂದಲೂ ಇಂಥ ಅಂತೆ–ಕಂತೆಗಳ ಸುದ್ದಿಗಳನ್ನು ಕೇಳುತ್ತಾ ಬಂದಿರುವ ದೀಪಿಕಾ, ಇದೀಗ ತಾಯ್ತನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ‘ನನ್ನ ಜೀವನದಲ್ಲಿ ನಾನು ಇತರ ಹೆಣ್ಣುಮಕ್ಕಳಂತೆ ಯಾವತ್ತಾದರೂ ಒಂದು ದಿನ ತಾಯ್ತನವನ್ನು ಅನುಭವಿಸುವುದು ಖಚಿತ. ಆದರೆ, ತಾಯ್ತನದ ನೆಪದಲ್ಲಿ ಹೆಣ್ಣಿಗೆ ಪದೇಪದೇ ಇಂಥ ಪ್ರಶ್ನೆಗಳನ್ನು ಕೇಳುವುದು ಸರಿಯಲ್ಲ. ಮುಖ್ಯವಾಗಿ ದಂಪತಿಗಳ ಮೇಲೆ ಈ ವಿಷಯದ ಕುರಿತಾಗಿ ಒತ್ತಡ ಹೇರುವುದು ತರವಲ್ಲ. ಯಾವತ್ತು ಜನರು ಮಹಿಳೆಗೆ ಗರ್ಭಿಣಿಯಾಗುವುದು ಮತ್ತು ತಾಯ್ತನಕ್ಕೆ ಸಂಬಂಧಿಸಿದಂತೆ ವಿಷಯಗಳ ಕುರಿತಾಗಿ ಪ್ರಶ್ನಿಸುವುದನ್ನು ಬಿಡುತ್ತಾರೋ ಅಂದು ಸಮಾಜದಲ್ಲಿ ಬದಲಾವಣೆಯಾಗುತ್ತದೆ’ ಎಂದು ದೀಪಿಕಾ ಪ್ರಬುದ್ಧವಾಗಿ ನುಡಿದಿದ್ದಾರೆ.
ದೀಪಿಕಾ ಸದ್ಯಕ್ಕೆ ಮೇಘನಾ ಗುಲ್ಜಾರ್ ನಿರ್ದೇಶನದ ‘ಚಪಾಕ್’ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಆ್ಯಸಿಡ್ ಸಂತ್ರಸ್ತೆ ಲಕ್ಷ್ಮೀ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.