ಪುಷ್ಪ ಅರುಣ್ಕುಮಾರ್ ಮತ್ತು ದೀಪಿಕಾ ದಾಸ್
ಚಿತ್ರ: ಇನ್ಸ್ಟಾಗ್ರಾಂ
ಬೆಂಗಳೂರು: ನಿರ್ಮಾಪಕಿ, ನಟ ಯಶ್ ಅವರ ತಾಯಿ ಪುಷ್ಪ ಅರುಣ್ಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ನಟಿ ದೀಪಿಕಾ ದಾಸ್, ‘ಹೊಸ ಕಲಾವಿದರನ್ನು ಬೆಳೆಸೊ ಜನರು ಕಲಾವಿದವರಿಗೆ ಗೌರವ ಕೊಡುವುದನ್ನು ಮೊದಲು ಕಲಿತಿರಬೇಕು’ ಎಂದಿದ್ದಾರೆ.
‘ಕೊತ್ತಲವಾಡಿ’ ಚಿತ್ರದ ಮೂಲಕ ಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದ ಪುಷ್ಪ ಅವರು, ಚಿತ್ರದ ಪ್ರಚಾರ ವೇಳೆ ಸಂದರ್ಶವೊಂದರಲ್ಲಿ ದೀಪಿಕಾ ದಾಸ್ ಅವರ ಬಗ್ಗೆ ಮಾತನಾಡಿದ್ದರು.
ನಿಮ್ಮ ಹೊಸ ಸಿನಿಮಾಕ್ಕೆ ದೀಪಿಕಾ ದಾಸ್ ಅವರು ನಾಯಕಿಯಾಗಿ ಆಯ್ಕೆ ಆಗಿದ್ದಾರೆಂಬ ಎಂಬ ಸುದ್ದಿಯಿದೆ ಎಂದು ಸಂದರ್ಶಕಿ ಪುಷ್ಟ ಅವರಿಗೆ ಕೇಳಿದ್ದಾರೆ. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಅವರು, ‘ನಮಗೂ ಅವರಿಗೂ ಆಗುವುದಿಲ್ಲ. ಅವಳೇನು ದೊಡ್ಡ ನಟಿಯಲ್ಲ. ದೊಡ್ಡ ಸಾಧನೆಯನ್ನು ಮಾಡಿಲ್ಲ. ಅಂತವಳು ನಮ್ಮ ಸಿನಿಮಾಕ್ಕೆ ಹೇಗೆ ಆಯ್ಕೆ ಆಗುತ್ತಾಳೆ’ ಎಂದು ಹೇಳಿದ್ದರು.
ಸಂದರ್ಶನದ ಈ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ್ದು, ಯಶ್ ತಾಯಿ ಹೇಳಿಕೆಯನ್ನು ಹಲವರು ಖಂಡಿಸಿದ್ದಾರೆ.
ಏತನ್ಮಧ್ಯೆ, ಈ ಹೇಳಿಕೆಗೆ ದೀಪಿಕಾ ದಾಸ್ ಅವರೂ ಪ್ರತಿಕ್ರಿಯಿಸಿದ್ದು, ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಎರಡು ಪೋಸ್ಟ್ ಹಂಚಿಕೊಂಡಿದ್ದಾರೆ.
‘ಇಲ್ಲಿಯವರೆಗೂ ಯಾರ ಹೆಸರನ್ನು ಹೇಳಿಕೊಂಡು ಬಂದಿಲ್ಲ. ಮುಂದೇನು ಬರಲ್ಲ. ಕೆಲವರಿಗೆ ಬೆಲೆ ಕೊಟ್ಟ ಮಾತ್ರಕ್ಕೆ ಯಾರನ್ನು ಕಂಡು ಯಾರಿಗೂ ಭಯ ಇಲ್ಲ. ಅದು ಅಮ್ಮ ಆದ್ರೂ ಸರಿ, ದೊಡ್ಡಮ್ಮ ಆದ್ರೂ ಸರಿ ಅಥವಾ ಪುಷ್ಪಮ್ಮ ಆದ್ರೂ ಸರಿ’ ಎಂದು ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ
‘ನಾನು ಯಾವ ದೊಡ್ಡ ನಟಿ ಅಲ್ಲದಿದ್ದರೂ, ಏನು ಸಾಧನೆ ಮಾಡದಿದದ್ದರೂ ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಅಧಿಕಾರ ಯಾರಿಗೂ ಇಲ್ಲ’ ಎಂದು ಹೇಳಿದ್ದಾರೆ.
ಮತ್ತೊಂದು ಪೋಸ್ಟ್ನಲ್ಲಿ, ‘ಸತ್ಯದ ತಲೆ ಮೇಲೆ ಹೊಡೆದ ಹಾಗೆ ಹೇಳುವಂತಹ ಬುದ್ಧಿ. ಯಾರು ಎಲ್ಲೂ ಹೋಗಿಲ್ಲ. ನಮ್ಮ ಹತ್ತಿರ ಬರುವ ಅವಶ್ಯಕತೆನೂ ಇಲ್ಲ. ಅನಾವಶ್ಯಕವಾಗಿ ಇಲ್ಲದ್ದನ್ನು ಮಾತನಾಡಿ ನನ್ನ ಮತ್ತು ನನ್ನ ಕುಟುಂಬವನ್ನು ಇದರಲ್ಲಿ ತರಬೇಡಿ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.