ADVERTISEMENT

ದೀಪಿಕಾ: ಡಿಶುಂ.. ಡಿಶುಂ...!

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 19:30 IST
Last Updated 12 ಜನವರಿ 2020, 19:30 IST
ಜೆಎನ್‌ಯುನಲ್ಲಿ ನಟಿ ದೀಪಿಕಾ ಪಡುಕೋಣೆ
ಜೆಎನ್‌ಯುನಲ್ಲಿ ನಟಿ ದೀಪಿಕಾ ಪಡುಕೋಣೆ   
""
""

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ದೆಹಲಿಯಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯಕ್ಕೆ (ಜೆಎನ್‌ಯು) ಭೇಟಿ ನೀಡಿ, ದಾಳಿಗೆ ಒಳಗಾದ ವಿದ್ಯಾರ್ಥಿಗಳ ಪರ ನಿಂತಿರುವುದು ಬಾಲಿವುಡ್‌ನಲ್ಲಷ್ಟೇ ಅಲ್ಲ, ದೇಶದ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸಿದೆ.

ರಾತ್ರೋರಾತ್ರಿ ದೀಪಿಕಾ ಪಡುಕೋಣೆವಿದ್ಯಾರ್ಥಿಗಳ ಮತ್ತು ಸಿಎಎ ವಿರೋಧಿಗಳ ಕಣ್ಮಣಿಯಾಗಿ ಹೊರಹೊಮ್ಮಿದ್ದಾರೆ. ಮತ್ತೊಂದೆಡೆ ಶುಕ್ರವಾರ ಬಿಡುಗಡೆಯಾದ ದೀಪಿಕಾ ನಟನೆಯ ‘ಛಪಾಕ್‌’ ಚಿತ್ರದ ವಿರುದ್ಧ ರಾಜಕೀಯ ಪಕ್ಷವೊಂದರ ಕಾರ್ಯಕರ್ತರು ಮತ್ತು ಬೆಂಬಲಿಗರು ಸಮರ ಸಾರಿದ್ದಾರೆ.

ಮುಸುಕುಧಾರಿಗಳು ಜೆಎನ್‌ಯು ಮೇಲೆ ದಾಳಿ ನಡೆಸಿದ ಎರಡು ದಿನಗಳ ಬಳಿಕ ದೀಪಿಕಾ ಜೆಎನ್‌ಯುಗೆ ಭೇಟಿ ನೀಡಿ, ದಾಳಿಗೊಳಗಾದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ಆಯಿಷಿ ಘೋಷ್‌ಗೆ ಸಾಂತ್ವನ ಹೇಳಿದ್ದರು. ಬಹಿರಂಗವಾಗಿ ಜೆಎನ್‌ಯು ವಿದ್ಯಾರ್ಥಿಗಳ ಬೆನ್ನಿಗೆ ನಿಂತು ನೈತಿಕ ಬೆಂಬಲ ಸೂಚಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದೀಪಿಕಾ ವಿರುದ್ಧ ಬಿಜೆಪಿ ಮುಗಿಬಿದ್ದಿದೆ.

ADVERTISEMENT

ದೀಪಿಕಾ ಪಡುಕೋಣೆ ಅವರ ಪತಿ ರಣವೀರ್‌ ಸಿಂಗ್‌ ಪತ್ನಿಯ ಬೆಂಬಲಕ್ಕೆ ನಿಂತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ನಡೆಯನ್ನು ಹಲವರು ಶ್ಲಾಘಸಿದ್ದಾರೆ. ದೀಪಿಕಾ ಮೊದಲಿಗಿಂತೆ ಹೆಚ್ಚು ಸುಂದರ ಮತ್ತು ದೊಡ್ಡವರಾಗಿ ಕಾಣುತ್ತಿದ್ದಾರೆ ಎಂದು ಕೊಂಡಾಡಿದ್ದಾರೆ.

ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ, ವಿರೋಧವಾಗಿ ಬಾಲಿವುಡ್‌ ಸೆಲೆಬ್ರಿಟಿಗಳು ಎರಡು ಬಣಗಳಲ್ಲಿ ಹಂಚಿ ಹೋಗಿದ್ದಾರೆ. ಇನ್ನೂ ವಿಶೇಷ ಎಂದರೆ,ನಟ, ನಟಿಯರು, ಚಿತ್ರ ನಿರ್ಮಾಪಕರು, ನಿರ್ದೇಶಕರು, ತಂತ್ರಜ್ಞರು ಬಹಿರಂಗವಾಗಿ ಬೀದಿಗಿಳಿದಿದ್ದಾರೆ. ಆದರೆ, ಅಮಿತಾಭ್‌ ಬಚ್ಚನ್‌, ಹೃತಿಕ್‌ ರೋಷನ್‌, ಶಾರೂಕ್‌, ಸಲ್ಮಾನ್‌, ಆಮೀರ್‌ ಖಾನ್‌, ಅನುಷ್ಕಾ ಶರ್ಮಾ, ಕರೀನಾ ಕಪೂರ್‌ ಅವರಂತಹ ಸೆಲೆಬ್ರಿಟಿಗಳು ಜಾಣ ಮೌನ ವಹಿಸಿದ್ದಾರೆ.

ಸ್ವರಾ ಭಾಸ್ಕರ್‌

ಸಿಎಎ ವಿರುದ್ಧವಾಗಿ ಪ್ರತಿಭಟನೆ ನಡೆಸುತ್ತಿರುವ ಜೆಎನ್‌ಯು ಮತ್ತು ಜಾಮೀಯಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಬೆಂಬಲವಾಗಿ ಬಾಲಿವುಡ್‌ ಸೆಲೆಬ್ರಿಟಿಗಳ ದೊಡ್ಡ ಗುಂಪು ಮುಂಬೈನಲ್ಲಿ ಬೀದಿಗಿಳಿದಿದೆ. ಸ್ವರಾ ಭಾಸ್ಕರ್‌, ನಿರ್ದೇಶಕ ಅನುರಾಗ್‌ ಕಶ್ಯಪ್‌, ವಿಶಾಲ್‌ ಭಾರದ್ವಾಜ್‌, ಅನುಭವ ಸಿನ್ಹಾ, ತಾಪ್ಸಿ ಪನ್ನು, ದಿಯಾ ಮಿರ್ಜಾ, ಜೋಯಾ ಅಖ್ತರ್‌, ಅಲಿ ಫಜಲ್‌, ರಿಚಾ ಚಡ್ಡಾ ಮುಂತಾದವರು ಬೀದಿಗಿಳಿದಿದ್ದಾರೆ.

ಸುನಿಲ್‌ ಶೆಟ್ಟಿ,ಶಬಾನಾ ಅಜ್ಮಿ, ಸೋನಾಕ್ಷಿ ಸಿನ್ಹಾ, ಜಾವೇದ್‌ ಅಖ್ತರ್‌, ಫರ್ಹಾನ್‌ ಅಖ್ತರ್‌, ರಿಚಾ ಛಡ್ಡಾ, ಕಬೀರ್‌ ಖಾನ್‌, ಕರಣ್‌ ಜೋಹರ್‌, ಪರಿಣೀತಿ ಚೋಪ್ರಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ದೊಡ್ಡ ಪಡೆಯೇ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದೆ. ಕಳೆದ ವಾರ ಸಿಎಎ ಪರ ಕೇಂದ್ರ ಸರ್ಕಾರ ಕರೆದಿದ್ದ ಸಭೆಯತ್ತಲೂ ಈ ಸೆಲೆಬ್ರಿಟಿಗಳು ಸುಳಿದಿರಲಿಲ್ಲ.

ಸಿಬಿಎಫ್‌ಸಿ ಮುಖ್ಯಸ್ಥ ಪ್ರಸೂನ್‌ ಜೋಶಿ, ನಿರ್ಮಾಪಕರಾದ ರಾಹುಲ್‌ ರವೇಲ್‌, ಕುನಾಲ್ ಕೊಹ್ಲಿ, ಭೂಷಣ್‌ ಕುಮಾರ್‌, ಅನು ಮತ್ತು ಶಶಿ ರಂಜನ್‌. ನಿರ್ದೇಶಕ ಅಭಿಷೇಕ್‌ ಕಪೂರ್‌, ನಟರಾದಅನುಮಪ್‌ ಖೇರ್, ರಣವೀರ್‌ ಶೋರೆ, ಶೈಲೇಶ್‌ ಲೋಧಾ, ಗಾಯಕ ಕೈಲಾಸ್‌ ಖೇರ್‌, ರೂಪ್‌ಕುಮಾರ್‌ ರಾಠೋಡ, ಶಾನ್ ಮುಂತಾದವರು ಕೇಂದ್ರ ಸರ್ಕಾರ ಮತ್ತು ಸಿಎಎ ಪರ ಬ್ಯಾಟ್‌ ಬೀಸುತ್ತಿದ್ದಾರೆ.

ತುಕ್ಡೆ ತುಕ್ಡೆ ಗ್ಯಾಂಗ್‌ಗೆ ಬೆಂಬಲ ಸೂಚಿಸಿರುವ ದೀಪಿಕಾ ನಟನೆಯ ‘ಛಪಾಕ್‌’ಸಿನಿಮಾ ಬಹಿಷ್ಕರಿಸಿ ಎಂದು ಬಿಜೆಪಿ ಬೆಂಬಲಿಗರು ಟ್ವೀಟ್‌ ಮೂಲಕ ಕರೆ ನೀಡಿದ್ದಾರೆ.

ದೀಪಿಕಾ ವಿರುದ್ಧ ಏನೇ ಟೀಕೆಗಳಿದ್ದರೂ ಚಿತ್ರ ಪ್ರೇಕ್ಷಕರು ಛಪಾಕ್‌ ನೋಡಲು ಮುಗಿ ಬಿದ್ದಿದ್ದಾರೆ. ಬಿಜೆಪಿಯ ಬಹಿಷ್ಕಾರದ ಕರೆಯ ಹೊರತಾಗಿಯೂ ಶುಕ್ರವಾರ ಮೊದಲ ದಿನದ ‘ಛಪಾಕ್‌’ ಬಾಕ್ಸ್ ಆಫೀಸ್‌ ಕಲೆಕ್ಷನ್‌ ₹7 ಕೋಟಿ ದಾಟಿರುವುದಾಗಿ ಪ್ರಾಥಮಿಕ ವರದಿ ತಿಳಿಸಿದೆ.

ಬಿಜೆಪಿಯವರು ಕೊನೆಗೊಂದು ದಿನ ಅಕ್ಷಯ್‌ ಕುಮಾರ್‌, ಪರೇಶ್‌ ರಾವಲ್‌, ಅನುಪಮ್‌ ಖೇರ್‌ ಚಿತ್ರಗಳನ್ನು ಮಾತ್ರ ನೋಡಬೇಕಾಗುತ್ತದೆ ಎಂದು ಕಾಲೆಳೆದಿದ್ದಾರೆ.

ಅನುರಾಗ್‌ ಕಶ್ಯಪ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.