ನಿರ್ದೇಶಕ ನಾಗರಾಜ ಸೋಮಯಾಜಿ ‘ದೇವಿ ಮಹಾತ್ಮೆ’ ಚಿತ್ರ ಘೋಷಿಸಿದ್ದಾರೆ. ಚಿತ್ರದ ಫಸ್ಟ್ಲುಕ್ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಇವರು ಈ ಹಿಂದೆ ‘ಮರ್ಯಾದೆ ಪ್ರಶ್ನೆ’ ಎಂಬ ಸಿನಿಮಾ ನಿರ್ದೇಶಿಸಿದ್ದರು.
ಕಡಲ ಕಿನಾರೆಯ ಹಳ್ಳಿ ಬದುಕು, ಕರಾವಳಿ ತೀರ, ಯಕ್ಷಗಾನ ಮೊದಲಾದ ಅಂಶಗಳಿಂದ ಕೂಡಿದ ಕಥೆ ಎಂಬುದು ಪೋಸ್ಟರ್ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಚಿತ್ರದ ಶೀರ್ಷಿಕೆ ತಲೆಕೆಳಗಾಗಿದ್ದು ಗಮನ ಸೆಳೆಯುತ್ತಿದೆ.
‘ದೇವಿ ಮಹಾತ್ಮೆ ಟೈಟಲ್ ಕೇಳಿದ ತಕ್ಷಣ ದೇವರ ಸಿನಿಮಾ ಅಂದುಕೊಳ್ಳುವುದು ಸಹಜ. ಆದರೆ ಇದೊಂದು ಕಾಮಿಡಿ ಥ್ರಿಲ್ಲರ್ ಕಥಾಹಂದರ ಚಿತ್ರ. ವಾದಿರಾಜ ಶೆಟ್ಟಿ, ಅರವಿಂದ್ ಕುಪ್ಳೀಕರ್, ಭಾಸ್ಕರ್ ಬಂಗೇರ ಹಾಗೂ ಬಿ. ಕಿರಣ್ ಬರವಣಿಗೆಯಲ್ಲಿ ಸಾಥ್ ಕೊಟ್ಟಿದ್ದಾರೆ’ ಎಂದಿದೆ ಚಿತ್ರತಂಡ.
ಯುವಿಜಿ ಸ್ಟುಡಿಯೋ ಬ್ಯಾನರ್ನಡಿ ವಿದ್ಯಾ ಗಾಂಧಿರಾಜನ್ ಸಿನಿಮಾಗೆ ಬಂಡವಾಳ ಹೂಡಲಿದ್ದಾರೆ. ಎಸ್.ಕೆ. ರಾವ್ ಛಾಯಾಚಿತ್ರಗ್ರಹಣ, ಪ್ರಸಾದ್ ಕೆ. ಶೆಟ್ಟಿ ಸಂಗೀತ ನಿರ್ದೇಶನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.