ಬೇರೆ ತಂಡಗಳ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸುವ, ಹೊಸಬರ ಬೆನ್ನಿಗೆ ನಿಲ್ಲುವ ಸ್ಟಾರ್ ನಾಯಕರ ಸಾಲಿನಲ್ಲಿ ನಟ ಧ್ರುವ ಸರ್ಜಾ ಕೂಡ ಒಬ್ಬರು. ಹೊಸಬರ ಸಿನಿಮಾಗಳ ಹಾಡು, ಟ್ರೇಲರ್, ಟೀಸರ್ ಬಿಡುಗಡೆ ಸಮಾರಂಭಗಳಲ್ಲಿ ಇವರು ನೋಡಲು ಸಿಗುತ್ತಾರೆ. ಎರಡು ವಾರಗಳ ಹಿಂದೆ ಬಿಡುಗಡೆಯಾದ ‘ಕೆರೆಬೇಟೆ’ ಚಿತ್ರವನ್ನು ಇವರು ಇತ್ತೀಚೆಗಷ್ಟೇ ವೀಕ್ಷಿಸಿ, ಮೆಚ್ಚುಗೆ ಮಾತನಾಡಿದ್ದಾರೆ.
ಗೌರಿಶಂಕರ್, ಬಿಂದು ಶಿವರಾಂ ನಟನೆಯ ‘ಕೆರೆಬೇಟೆ’ ವಿಭಿನ್ನವಾದ ನಿರೂಪಣೆಯಿಂದ ಜನಮನ್ನಣೆ ಗಳಿಸುತ್ತಿದೆ. ‘ಚಿತ್ರ ತುಂಬಾ ಚೆನ್ನಾಗಿದೆ. ಇಂತಹ ಸಿನಿಮಾಗೂ ಪ್ರೇಕ್ಷಕರು ಯಾಕೆ ಬರುತ್ತಿಲ್ಲ ಎಂಬುದು ಅಚ್ಚರಿಯಾಗುತ್ತಿದೆ. ನಟನೆ, ನಿರ್ದೇಶನ ಎಲ್ಲವೂ ಚೆನ್ನಾಗಿದೆ. ಈ ಸಿನಿಮಾಕ್ಕೆ ಕನ್ನಡ ಕಲಾಭಿಮಾನಿಗಳು ಪ್ರತಿಫಲ ನೀಡಬೇಕು. ಚೆನ್ನಾಗಿರುವ ಸಿನಿಮಾವನ್ನು ಜನ ಗೆಲ್ಲಿಸುತ್ತಾರೆಂಬ ನಂಬಿಕೆ ಇದೆ. ಈ ಸಿನಿಮಾಗೂ ಅದು ಸತ್ಯವಾಗಬೇಕು’ ಎಂದು ಸಿನಿಮಾ ಕುರಿತು ಧ್ರುವ ಮೆಚ್ಚುಗೆ ಮಾತನಾಡಿದ್ದಾರೆ.
ಯೋಗರಾಜ್ ಭಟ್, ನಟರಾದ ಅಜಯ್ ರಾವ್, ವಸಿಷ್ಠ ಸಿಂಹ ಮೊದಲಾದವರು ಸಿನಿಮಾ ವೀಕ್ಷಿಸಿ ಮೆಚ್ಚುಗೆ ಮಾತನಾಡಿದ್ದಾರೆ. ಈ ಚಿತ್ರಕ್ಕೆ ರಾಜ್ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಜನಮನ ಸಂಸ್ಥೆ ನಿರ್ಮಿಸಿದ್ದು, ಗಗನ್ ಬದೇರಿಯ ಸಂಗೀತವಿದ್ದು, ಕೀರ್ತನ್ ಪೂಜಾರಿ ಛಾಯಾಚಿತ್ರಗ್ರಹಣವಿದೆ. ಗೋಪಾಲ್ ದೇಶಪಾಂಡೆ, ಸಂಪತ್ ಕುಮಾರ್, ಹರಿಣಿ ಮೊದಲಾದವರು ತಾರಾಗಣದಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.