
ರಣವೀರ್ ಸಿಂಗ್ ಅಭಿನಯದ ’ಧುರಂಧರ್’ ಸಿನಿಮಾ ಪ್ರೇಕ್ಷಕರಿಂದ ಭಾರೀ ಮೆಚ್ಚುಗೆ ಪಡೆದುಕೊಂಡು ಸತತ ನಾಲ್ಕನೇ ವಾರವೂ ಮುನ್ನುಗ್ಗುತ್ತಿದೆ. ಈಗಾಗಲೇ ಭಾರತ ಒಂದರಲ್ಲೆ ಬರೋಬ್ಬರಿ ₹700 ಕೋಟಿ ಗಳಿಸಿದೆ. ಸದ್ಯ ಸಿನಿಮಾದ ಕೆಲವು ಸಂಭಾಷಣೆಯನ್ನು ಕತ್ತರಿಸಿ ಮರುಪ್ರದರ್ಶನ ಕಾಣುತ್ತಿದೆ.
ಆದಿತ್ಯ ಧಾರ್ ನಿರ್ದೇಶನದ ’ಧುರಂಧರ್ ಸಿನಿಮಾದಲ್ಲಿ ಅರ್ಜುನ್ ರಾಂಪಾಲ್, ಅಕ್ಷಯ್ ಖನ್ನಾ, ಸಂಜಯ್ ದತ್ ಮತ್ತು ಆರ್. ಮಾಧವನ್ ನಟಿಸಿದ್ದಾರೆ. ಸಿನಿಮಾದ ಮುಂದುವರೆದ ಭಾಗ ಮಾರ್ಚ್ 2026ರಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಸಿನಿಮಾದ ಕೆಲ ಸಂಭಾಷಣೆಗಳನ್ನು ಕತ್ತರಿಸುವ ನಿರ್ಧಾರ ಸ್ವತಃ ಸಿನಿಮಾ ತಂಡ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಬಲೂಚ್' ಮತ್ತು 'ಇಂಟೆಲಿಜೆನ್ಸ್' ಪದಗಳಿಗೆ ಕತ್ತರಿ ಯಾಕೆ?
ಸಿನಿಮಾದ ಸಂಭಾಷಣೆಯಲ್ಲಿ 'ಬಲೂಚ್' ಮತ್ತು 'ಇಂಟೆಲಿಜೆನ್ಸ್' ಎಂಬ ಪದಗಳನ್ನು ಬಳಸಲಾಗಿತ್ತು. ಈ ಪದಗಳ ಬಳಕೆಯಿಂದ ಕೆಲವು ಸಮುದಾಯಗಳಿಗೆ ಬೇಸರವಾಗಿದೆ. ಆ ಕಾರಣಕ್ಕಾಗಿ ಸಿನಿಮಾದ ನಿರ್ಮಾಪಕರು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯನ್ನು (ಸಿಬಿಎಫ್ಸಿ) ಸಂಪರ್ಕಿಸಿ, ಸಿನಿಮಾಟೋಗ್ರಾಫ್ ಕಾಯ್ದೆಯ ನಿಯಮ 31ರ ಅಡಿಯಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡಿದೆ.
ಡಿಸೆಂಬರ್ 5 ರಂದು ಬಿಡುಗಡೆಯಾದ ’ಧುರಂಧರ್’ ಜಾಗತಿಕವಾಗಿ ₹1,000 ಕೋಟಿಗೂ ಹೆಚ್ಚು ಗಳಿಕೆ ಕಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.