ADVERTISEMENT

ಅಮಿತಾಭ್ ಕಾಲಿಗೆ ಬಿದ್ದ ದಿಲ್ಜಿತ್‌ಗೆ ಎಸ್‌ಎಫ್‌ಜೆಯಿಂದ ಬೆದರಿಕೆ: ಕಾರಣವೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಅಕ್ಟೋಬರ್ 2025, 8:17 IST
Last Updated 29 ಅಕ್ಟೋಬರ್ 2025, 8:17 IST
   

ನವದೆಹಲಿ: ನವೆಂಬರ್ 1ರಂದು ಆಸ್ಟ್ರೇಲಿಯಾದಲ್ಲಿ ಆಯೋಜಿಸಿರುವ ಕಾರ್ಯಕ್ರಮವನ್ನು ರದ್ದುಪಡಿಸುವಂತೆ ಜನಪ್ರಿಯ ಗಾಯಕ ದಿಲ್ಜಿತ್ ದೋಸಾಂಜ್‌ ಅವರಿಗೆ ನಿಷೇಧಿತ ‘ಸಿಖ್ಸ್ ಫಾರ್ ಜಸ್ಟೀಸ್’(ಎಸ್‌ಎಫ್‌ಜೆ) ಸಂಘಟನೆ ಬೆದರಿಕೆ ಹಾಕಿದೆ.

ಕೌನ್‌ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ದಿಲ್ಜಿತ್ ಅವರು ನಟ, ನಿರೂಪಕ ಅಮಿತಾಭ್‌ ಬಚ್ಚನ್‌ ಅವರ ಕಾಲಿಗೆ ಬಿದ್ದಿದ್ದರು. ಇದಾದ ಬೆನ್ನಲ್ಲೇ ಅವರಿಗೆ ಬೆದರಿಕೆ ಬಂದಿದೆ ಎಂದು ಸುದ್ದಿಸಂಸ್ಥೆ ಎನ್‌ಡಿಟಿವಿ ವರದಿ ಮಾಡಿದೆ.

‘ಅಮಿತಾಬ್ ಬಚ್ಚನ್ ಪಾದಗಳನ್ನು ಮುಟ್ಟುವ ಮೂಲಕ ದಿಲ್ಜಿತ್ 1984ರ ಸಿಖ್‌ ವಿರೋಧಿ ದಂಗೆಯಲ್ಲಿ ಮಡಿದ ಪ್ರತಿಯೊಬ್ಬ ವ್ಯಕ್ತಿಯನ್ನು ಅವಮಾನಿಸಿದ್ದಾರೆ’ ಎಂದು ಎಸ್‌ಎಫ್‌ಜೆ ಹೇಳಿದೆ.

ADVERTISEMENT

‘ಸಿಖ್ ವಿರೋಧಿ ದಂಗೆ’ ವೇಳೆ ಸಿಖ್ಖರನ್ನು ಕೊಲ್ಲುವಂತೆ ಅಮಿತಾಭ್ ಬಚ್ಚನ್‌ ಪ್ರಚೋದಿಸಿದ್ದರು ಎಂದು ಈ ಸಂಘಟನೆ ಆರೋಪಿಸಿದೆ.

‘ಇದು ಅಜ್ಞಾನವಲ್ಲ.. ದ್ರೋಹ.. ಸಿಖ್‌ ವಿರೋಧಿ ದಂಗೆ ವೇಳೆ ಸಿಖ್ಖರನ್ನು ಜೀವಂತವಾಗಿ ಸುಟ್ಟರು, ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರು, ಮಕ್ಕಳನ್ನು ಕೊಂದರು. ಅವರ ಚಿತಾಭಸ್ಮವಿನ್ನು ತಣ್ಣಗಾಗಿಲ್ಲ. ಆತ್ಮಸಾಕ್ಷಿ ಇರುವ ಯಾವುದೇ ಸಿಖ್ಖರು ನ.1 ಸ್ಮರಣಾರ್ಥ ದಿನದಂದು ಯಾವುದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸುವುದಿಲ್ಲ’ ಎಂದೂ ಅದು ಹೇಳಿದೆ.

ಅಮೆರಿಕದಲ್ಲಿ ನೆಲೆಸಿರುವ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಎಸ್‌ಎಫ್‌ಜೆ ಸಂಘಟನೆಯ ‍ಪ್ರಮುಖ ನಾಯಕನಾಗಿದ್ದು, ಈತನ ವಿರುದ್ಧ ದೇಶ ವಿರೋಧಿ ಚಟುವಟಿಕೆ ನಡೆಸಿದ ಹಲವು ಪ್ರಕರಣಗಳು ದಾಖಲಾಗಿವೆ.

ಇಂದಿರಾ ಗಾಂಧಿ ಹತ್ಯೆಯಾದ ಮರುದಿನ (1984 ನವೆಂಬರ್‌ 1) ದೆಹಲಿಯ ಆಜಾದ್‌ ಮಾರ್ಕೆಟ್‌ ಬಳಿಯಿರುವ ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ ಹಲವರು ಹತ್ಯೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.