‘ಒಂದು ಮೊಟ್ಟೆಯ ಕಥೆ’ ಚಿತ್ರದಲ್ಲಿ ಬೋಳು ಮಂಡೆಯ ಜನಾರ್ದನನ (ರಾಜ್ ಶೆಟ್ಟಿ ನಿಭಾಯಿಸಿದ ಪಾತ್ರದ ಹೆಸರು) ಜೊತೆ ಕಾಣಿಸಿಕೊಂಡ ‘ಎಕನಾಮಿಕ್ಸ್ ಟೀಚರ್’ ಸದಭಿರುಚಿಯ ಪ್ರೇಕ್ಷಕರ ಮನಸ್ಸು ಗೆದ್ದಿದ್ದರು. ‘ಚೆಂದ ಅವಳ ಕಿರುಲಜ್ಜೆ’ ಹಾಡಿನಲ್ಲಿನ ಅಭಿನಯದ ಕಾರಣದಿಂದಾಗಿ, ಮನಸ್ಸಿಗೆ ಹಿತವಾದ ಕಚಗುಳಿ ಇರಿಸಿದ್ದರು.
ಮೊಟ್ಟೆಯ ಕಥೆಯನ್ನು ಹೇಳಿದ ನಂತರ ಅಮೃತಾ ಅವರು ‘ಕಥಾಸಂಗಮ’ ಚಿತ್ರದ ಭಾಗವಾದ ‘ಗಿರ್ಗಿಟ್ಲೆ’ಯಲ್ಲಿ ಕಾಣಿಸಿಕೊಂಡರು. ಅದರಲ್ಲಿ ಕೂಡ ಇವರು ರಾಜ್ ಜೊತೆ ಅಭಿನಯಿಸಿದ್ದರು. ಈಗ ಅವರು ತಮ್ಮ ಇನ್ನೊಂದು ಸಿನಿಮಾ ‘ವಾರುಣಿ’ ಬಿಡುಗಡೆ ಆಗುವುದನ್ನು ಕಾಯುತ್ತಿದ್ದಾರೆ.
‘ಕೊರೊನಾ ರಜೆಯಲ್ಲಿ ಪದವಿ ಪೂರ್ಣಗೊಳಿಸುವತ್ತ ಗಮನ ನೀಡಿದ್ದೇನೆ. ಅದನ್ನು ಹೊರತುಪಡಿಸಿ ಬೇರೆ ಯಾವ ಕೆಲಸವನ್ನೂ ಮಾಡುತ್ತಿಲ್ಲ’ ಎನ್ನುತ್ತಾರೆ ಅಮೃತಾ. ಒಂದಿಷ್ಟು ಸಿನಿಮಾಗಳ ಕಥೆಗಳು ಇವರ ಬಳಿ ಬರುತ್ತಿವೆ. ಆದರೆ, ಪರೀಕ್ಷೆಯನ್ನು ಪೂರ್ಣಗೊಳಿಸಿ, ಪದವಿ ಪಡೆದುಕೊಂಡ ನಂತರವೇ ಮುಂದಿನ ಕೆಲಸ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಅಮೃತಾ.
‘ನಿರೀಕ್ಷಣ ಎನ್ನುವ ಕಿರುಚಿತ್ರವೊಂದರಲ್ಲಿ ಈಚೆಗೆ ಅಭಿನಯಿಸಿದೆ. ಮೂರು ವರ್ಷಗಳ ಹಿಂದೆ ನನಗೆ ಅಪಘಾತ ಆಗಿತ್ತು. ಆಗ ನಾನು ಬಿ.ಕಾಂ ಓದುತ್ತಿದ್ದೆ. ಅಪಘಾತದ ಕಾರಣ ನನ್ನ ಓದು ನಿಂತಿತ್ತು. ಈಗ ಓದು ಮುಂದುವರಿಸಿದ್ದೇನೆ’ ಎಂದರು ಅಮೃತಾ. ಇವರ ಕೈಯಲ್ಲಿ ಈಗ ಎರಡು ಸಿನಿಮಾಗಳು ಇವೆಯಂತೆ. ಆದರೆ ಇವುಗಳ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದರು. ಈ ಚಿತ್ರಗಳ ಕೆಲಸ ಜೂನ್–ಜುಲೈ ವೇಳೆಗೆ ಆರಂಭವಾಗುವ ನಿರೀಕ್ಷೆ ಇದೆ.
‘ವಾರುಣಿ ಚಿತ್ರದಲ್ಲಿ ರಾಹುಲ್ ಎನ್ನುವವರು ನಾಯಕ ಆಗಿದ್ದಾರೆ. ಇವರು ಮೊದಲು ತುಳು ಸಿನಿಮಾಗಳಲ್ಲಿ ಅಭಿನಯಿಸಿದವರು. ಉದಯ ಟಿ.ವಿ.ಯ ಅರಮನೆ ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದಾರೆ. ಇದು ಡ್ರಗ್ಸ್ ಕುರಿತ ಕಥೆಯನ್ನು ಹೊಂದಿರುವ ಸಿನಿಮಾ’ ಎಂದರು ಅಮೃತಾ.
‘ಈಗ ನಾನು ಗಿಟಾರ್ ತರಬೇತಿ ಪಡೆಯುತ್ತಿದ್ದೇನೆ. ಕರ್ನಾಟಕ ಸಂಗೀತ ಕಲಿಯುತ್ತಿದ್ದೇನೆ. ಆದರೆ ಕೊರೊನಾ ಕಾರಣದಿಂದ ಈಗ ಅವುಗಳಿಗೆ ರಜೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.