ADVERTISEMENT

ದಿಗಂತ್‌ ‘ಎಡಗೈ’ ಹಿಡಿದ ರಾಧಿಕಾ ನಾರಾಯಣ್‌!

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2022, 11:26 IST
Last Updated 7 ನವೆಂಬರ್ 2022, 11:26 IST
ರಾಧಿಕಾ ನಾರಾಯಣ್‌
ರಾಧಿಕಾ ನಾರಾಯಣ್‌   

‘ಶಿವಾಜಿ ಸುರತ್ಕಲ್‌’ ಎರಡನೇ ಭಾಗದ ಶೂಟಿಂಗ್‌ ಪೂರ್ಣಗೊಳಿಸಿರುವ ‘ರಂಗಿತರಂಗ’ ಖ್ಯಾತಿಯ ರಾಧಿಕಾ ನಾರಾಯಣ್‌ ಹೊಸ ಪ್ರೊಜೆಕ್ಟ್‌ಗೆ ಪ್ರವೇಶಿಸಿದ್ದಾರೆ. ಈ ಬಾರಿ ಅವರು ‘ದೂದ್‌ಪೇಢ’ ದಿಂಗತ್‌ ‘ಎಡಗೈ’ ಹಿಡಿದಿದ್ದಾರೆ. ದಿಗಂತ್‌ ನಾಯಕನಾಗಿ ನಟಿಸುತ್ತಿರುವ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ತಂಡವನ್ನು ಅವರು ಸೇರಿಕೊಂಡಿದ್ದಾರೆ.

ವಿಭಿನ್ನ ಶೀರ್ಷಿಕೆಯ ಈ ಸಿನಿಮಾ, ಸಮರ್ಥ್ ಬಿ. ಕಡಕೊಳ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರವಾಗಿದೆ. ಈಗಾಗಲೇ ನಟಿಯರಾದ ಧನು ಹರ್ಷ ಹಾಗೂ ನಿಧಿ ಸುಬ್ಬಯ್ಯ ಸಿನಿಮಾ ಸೆಟ್‌ ಪ್ರವೇಶಿಸಿದ್ದು, ರಾಧಿಕಾ ನಾರಾಯಣ್ ಅವರೂ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದಿದೆ ಚಿತ್ರತಂಡ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ.

ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಕಥೆಯನ್ನು ಈ ಚಿತ್ರ ಒಳಗೊಂಡಿದೆ. ಬ್ಲ್ಯಾಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಸಿನಿಮಾದಲ್ಲಿದೆ. ಹೈಫನ್ ಪಿಕ್ಚರ್ಸ್ ಬ್ಯಾನರ್‌ನಡಿ ಗುರುದತ್ ಗಾಣಿಗ ಹಾಗೂ ನಿರ್ದೇಶಕ ಸಮರ್ಥ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಶೇ80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ‘ಭಜರಂಗಿ’ ಲೋಕಿ, ಕೃಷ್ಣ ಹೆಬ್ಬಾಳ್ ಚಿತ್ರದ ತಾರಾಗಣದಲ್ಲಿದ್ದಾರೆ. ಅಭಿಮನ್ಯು ಸದಾನಂದ್ ಛಾಯಾಗ್ರಹಣ, ರಾಹುಲ್ ವಿ. ಪಾರ್ವತಿಕರ್ ಹಾಗೂ ಶ್ರೀಪಾದ್ ಜೋಶಿ ಸಂಭಾಷಣೆ ಚಿತ್ರಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.