‘ಸೈರಾ ನರಸಿಂಹ ರೆಡ್ಡಿ’ ಚಿತ್ರೀಕರಣದ ಸಂದರ್ಭದಲ್ಲಿ ಸ್ಟಂಟ್ ದೃಶ್ಯ ಮಾಡುವಾಗ ನಟಿ ಅನುಷ್ಕಾ ಶೆಟ್ಟಿ ಕಾಲು ಮುರಿದಿದೆ ಎಂಬ ಸುದ್ದಿಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.
ಒಂದು ವರ್ಷದಿಂದ ಯಾವುದೇ ಸಿನಿಮಾ ಒಪ್ಪಿಕೊಳ್ಳದ ಅನುಷ್ಕಾ, ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಕಳೆದ ವಾರ ಇದರ ಚಿತ್ರೀಕರಣದ ವೇಳೆ ಸ್ಟಂಟ್ ಮಾಡುವಾಗ ಅನುಷ್ಕಾ ಗಾಯಗೊಂಡಿದ್ದಾರೆ, ವೈದ್ಯರು ಕೆಲ ಕಾಲ ವಿಶ್ರಾಂತಿ ತೆಗೆದುಕೊಳ್ಳಲು ತಿಳಿಸಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಅದಕ್ಕೆ ಅವರ ಅಭಿಮಾನಿಗಳು ಟ್ವಿಟ್ಟರ್, ಇನ್ಸ್ಟಾಗ್ರಾಂಗಳಲ್ಲಿ ‘ಬೇಗ ಆರಾಮಾಗಿ’ ಎಂದು ಹಾರೈಕೆಗಳನ್ನು ಕಳುಹಿಸಿದ್ದರು.
ಈಗ ಅನುಷ್ಕಾ ಈ ಗಾಳಿಸುದ್ದಿಯನ್ನು ಗಾಳಿಗೆ ತೂರಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ‘ನಾನು ಗಟ್ಟಿಮುಟ್ಟಾಗಿ ಆರೋಗ್ಯವಾಗಿದ್ದೇನೆ. ಸಂತೋಷದಿಂದ ಸಿಯಾಟಲ್ನಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದೇನೆ. ದಯವಿಟ್ಟು ಯಾರೂ ಮತ್ತೊಬ್ಬರ ಆರೋಗ್ಯದ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡಬೇಡಿ’ ಎಂದು ಮನವಿ ಮಾಡಿದ್ದಾರೆ.
ಇದೇ ಪೋಸ್ಟ್ನಲ್ಲಿ ‘ಸೈರಾ ನರಸಿಂಹ ರೆಡ್ಡಿ ಚಿತ್ರೀಕರಣದಲ್ಲಿ ಆಗಿದ್ದು ಸಣ್ಣ ಗಾಯ’ ಎಂದು ಸ್ಪಷ್ಟಪಡಿಸಿದ್ದಾರೆ. ಅವರು ಹೇಮಂತ್ ಮಧುರಕರ್ ಅವರ ‘ಸೈಲೆನ್ಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಸಿಯಾಟಲ್ನಲ್ಲಿ ನಡೆಯುತ್ತಿರುವ ಈ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಮಾಧವನ್ ಹಾಗೂ ಶಾಲಿನಿ ಪಾಂಡೆ ಕೂಡ ಇದ್ದಾರೆ. ಇದರಲ್ಲಿ ಕಿವಿ ಕೇಳದ ಹಾಗೂ ಮಾತು ಬಾರದ ಮಹಿಳೆಯ ಪಾತ್ರದಲ್ಲಿ ಅನುಷ್ಕಾನಟಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.