
‘ಜೋಗಿ’, ‘ಪ್ರೀತಿ ಏಕೆ ಭೂಮಿ ಮೇಲಿದೆ’ ಸಿನಿಮಾಗಳನ್ನು ನಿರ್ಮಿಸಿದ ಅಶ್ವಿನಿ ರಾಮ್ಪ್ರಸಾದ್ ತಮ್ಮ ಪುತ್ರ ಅರುಣ್ ರಾಮ್ಪ್ರಸಾದ್ ಅವರನ್ನು ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
‘ಘಾರ್ಗಾ’ ಎಂಬ ಶೀರ್ಷಿಕೆ ಹೊತ್ತ ಈ ಸಿನಿಮಾ ಅಡ್ವೆಂಚರಸ್ ಡ್ರಾಮಾ ಜಾನರ್ನಲ್ಲಿದೆ. ಚಿತ್ರದಲ್ಲಿ ಅರುಣ್ ಒಬ್ಬ ಬರಹಗಾರ, ಸಂಶೋಧಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಂ. ಶಶಿಧರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ‘ಘಾರ್ಗಾ’ ಒಂದು ಊರಿನ ಹೆಸರು. ನಾಯಕಿ ಪಾತ್ರದಲ್ಲಿ ರೆಹಾನ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರದ ‘ನೀನು ನನಗೆ’ ಎಂಬ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಯಿತು.
‘ಚಿತ್ರರಂಗದಲ್ಲಿ 40 ವರ್ಷ ಆಡಿಯೊ ಕಂಪನಿ ಮಾಲೀಕ, ನಿರ್ಮಾಪಕನಾಗಿ ಕೆಲಸ ಮಾಡಿದ್ದೇನೆ. ಇದೀಗ ಮಗನನ್ನು ಲಾಂಚ್ ಮಾಡುತ್ತಿದ್ದೇನೆ. ಈ ಚಿತ್ರವನ್ನು ನಾಲ್ಕು ವರ್ಷಗಳ ಹಿಂದೆಯೇ ಶುರು ಮಾಡಿದ್ದೆವು. ನಾನಾ ಕಾರಣಗಳಿಂದ ತಡವಾಯಿತು. ನಾಯಕ ಇಲ್ಲಿ ಮೂರು ಗೆಟಪ್ಗಳಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಚಿಕ್ಕಮಗಳೂರಿನಲ್ಲಿ ಸೆಟ್ ಹಾಕಿ ಶೂಟಿಂಗ್ ಮಾಡಿದ್ದೇವೆ. ಶೂಟಿಂಗ್ ಸಂದರ್ಭದಲ್ಲೂ ಕೊಂಚ ಅಡಚಣೆಗಳಾದವು. ಚಿತ್ರವೀಗ ಬಿಡುಗಡೆಗೆ ಸಿದ್ಧವಿದ್ದು, ಸೆನ್ಸಾರ್ಗೆ ಹೋಗಲು ಅಣಿಯಾಗಿದೆ. ಜನವರಿ ವೇಳೆಗೆ ರಿಲೀಸ್ ಮಾಡುವ ಯೋಜನೆಯಿದೆ’ ಎಂದರು ನಿರ್ಮಾಪಕ ರಾಮ್ಪ್ರಸಾದ್.
ನಿರ್ದೇಶಕ ಶಶಿಧರ್ ಮಾತನಾಡಿ, ‘ಹಾರರ್, ಸಸ್ಪೆನ್ಸ್, ಥ್ರಿಲ್ಲರ್, ಆ್ಯಕ್ಷನ್ ಹೀಗೆ ಎಲ್ಲ ರೀತಿಯ ಮನರಂಜನಾತ್ಮಕ ಅಂಶಗಳೂ ಚಿತ್ರದಲ್ಲಿವೆ. ಮಂಗಳೂರು, ಚಿಕ್ಕಮಗಳೂರು, ದಾಂಡೇಲಿ, ಆಗುಂಬೆ ಹಾಗೂ ಬೆಂಗಳೂರಲ್ಲಿ ಚಿತ್ರೀಕರಿಸಿದ್ದೇವೆ. ‘ಜೀ’ ಸಂಸ್ಥೆಯು ಒಳ್ಳೆಯ ಮೊತ್ತ ಕೊಟ್ಟು ಹಕ್ಕುಗಳನ್ನು ಖರೀದಿಸಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.