ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಮುಖ್ಯಭೂಮಿಕೆಯಲ್ಲಿರುವ ‘ಬಾನದಾರಿಯಲ್ಲಿ’ ಸೆ.28ರಂದು ತೆರೆಗೆ ಬರುತ್ತಿದೆ. ಶ್ರೀವಾರಿ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಅಭಿಲಾಶ್ ಛಾಯಾಗ್ರಹಣವಿದೆ. ಇದೊಂದು ಪ್ರೇಯಸಿ ಕಳೆದುಕೊಂಡವನ ಕಥೆ ಎಂಬುದನ್ನು ಟ್ರೇಲರ್ ಹೇಳುತ್ತಿದೆ.
‘ತೆಂಗಿನ ಮರ ಹಾಕಿದ್ರೆ ತೆಂಗಿನಕಾಯಿ ಕೊಡ್ತದೆ
ಮಾವಿನ ಮರ ಹಾಕಿದ್ರೆ ಮಾವಿನಕಾಯಿ ಕೊಡ್ತದೆ
ನಿಂಬೆ ಮರ ಹಾಕಿದ್ರೆ ನಿಂಬೆಕಾಯಿ ಕೊಡ್ತದೆ...’
ನಟಿ ರೀಷ್ಮಾ ನಾಣಯ್ಯ ಕೀನ್ಯಾದ ದಟ್ಟ ಕಾಡಿನಲ್ಲಿ ರಚಿಸಿದ ಈ ಕವಿತೆಗೆ ಧ್ವನಿಯಾದರು ರಂಗಾಯಣ ರಘು ಹಾಗೂ ನಟ ಗೋಲ್ಡನ್ ಸ್ಟಾರ್ ಗಣೇಶ್. ಈ ಹಾಸ್ಯಮಯ ಸನ್ನಿವೇಶಕ್ಕೆ ವೇದಿಕೆ ಒದಗಿಸಿದ್ದು ‘ಬಾನದಾರಿಯಲ್ಲಿ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ.
ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ಮಾತನಾಡಿದ ರಂಗಾಯಣ ರಘು, ಕಾಡಿನಲ್ಲಿ ಭಯಾನಕ ವನ್ಯಜೀವಿಗಳ ನಡುವೆ ಚಿತ್ರೀಕರಣ ಮಾಡಿದ್ದು, ಹುಲಿ, ಸಿಂಹಗಳು ತಾವಿದ್ದ ವಾಹನದ ಬಳಿಗೆ ಬಂದಾಗ ಭಯಗೊಂಡ ಸನ್ನಿವೇಶಗಳನ್ನು ಹಾಸ್ಯಮಯವಾಗಿ ಮೆಲುಕು ಹಾಕಿದರು. ಜೊತೆಗೆ ನಟಿ ರೀಷ್ಮಾ ನಾಣಯ್ಯ ರಚಿಸಿದ ಕವಿತೆಯನ್ನು ವಾಚಿಸಿ ಸಭಿಕರನ್ನು ನಗೆಗಡಲಿನಲ್ಲಿ ತೇಲಿಸಿದರು.
ಪ್ರೀತಂ ಗುಬ್ಬಿ ನಿರ್ದೇಶನದಲ್ಲಿ ಗಣೇಶ್, ರುಕ್ಮಿಣಿ ವಸಂತ್, ರೀಷ್ಮಾ ನಾಣಯ್ಯ ಮುಖ್ಯಭೂಮಿಕೆಯಲ್ಲಿರುವ ‘ಬಾನದಾರಿಯಲ್ಲಿ’ ಸೆ.28ರಂದು ತೆರೆಗೆ ಬರುತ್ತಿದೆ. ಶ್ರೀವಾರಿ ಸಂಸ್ಥೆ ನಿರ್ಮಾಣದ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ, ಅಭಿಲಾಶ್ ಛಾಯಾಗ್ರಹಣವಿದೆ. ಇದೊಂದು ಪ್ರೇಯಸಿ ಕಳೆದುಕೊಂಡವನ ಕಥೆ ಎಂಬುದನ್ನು ಟ್ರೇಲರ್ ಹೇಳುತ್ತಿದೆ.
‘ಪ್ರೀತಂ ಯಾವಾಗಲೂ ಪ್ರೇಮಕಥೆಗಳನ್ನೇ ಹೇಳುತ್ತಾನೆ. ನಾನು ಮತ್ತು ಪ್ರೀತಂ ಕ್ಲಾಸ್ಮೇಟ್ಸ್. ಜೊತೆಗೆ ಒಟ್ಟಿಗೆ ಸಿನಿಮಾ ಪಯಣ ಆರಂಭಿಸಿ ಕಷ್ಟ–ಸುಖಗಳನ್ನು ಒಟ್ಟಿಗೆ ಕಂಡವರು. ಕಥೆಯ ಶೀರ್ಷಿಕೆಗೆ ತಲೆಕೆಡಿಸಿಕೊಂಡು ಕುಳಿತಿದ್ದೆವು. ಆಗ ನೆನಪಿಗೆ ಬಂದಿದ್ದು ಅಪ್ಪು ಹಾಡಿನ ಸಾಲು. ಮಿಕ್ಸ್ ಮಾಡುವುದರಲ್ಲಿ ಪ್ರೀತಂ ಪರಿಣತ. ಹಾಗಾಗಿ ಭಾವನೆ ಮತ್ತು ಮಾಸ್ ಅಂಶಗಳನ್ನು ಚೆನ್ನಾಗಿ ಮಿಕ್ಸ್ ಮಾಡಿದ್ದಾನೆ. 36 ದಿನಗಳ ಕಾಲ ಕೀನ್ಯಾದಲ್ಲಿನ ಚಿತ್ರೀಕರಣ ಅನುಭವ ಭಿನ್ನವಾಗಿತ್ತು. ದಟ್ಟ ಅರಣ್ಯದಲ್ಲಿ ವನ್ಯಜೀವಿಗಳ ನಡುವೆ ಚಿತ್ರೀಕರಣ ಮಾಡುವಾಗ ಜೀವವೇ ಬಾಯಿಗೆ ಬಂದಂತಾಗುತ್ತಿತ್ತು. ಆದರೆ ರಂಗಾಯಣ ರಘು, ರೀಷ್ಮಾ ಅವರ ಆಫ್ಸ್ಕ್ರೀನ್ ಹಾಸ್ಯದ ಸನ್ನಿವೇಶಗಳು ನಮ್ಮನ್ನು ತುಸು ನಿರಾಳವಾಗಿಸುತ್ತಿತ್ತು’ ಎಂದರು ಗಣೇಶ್.
ರೀಷ್ಮಾ ಕವಿತೆಯಲ್ಲಿ ರಂಗಾಯಣ ರಘು ಒಂದು ಸಾಲನ್ನು ಬಿಟ್ಟಿದ್ದಾರೆ ಎಂದ ಗಣೇಶ್, ‘ಜಾಲಿ ಮರ ಹಾಕಿದ್ರೆ ಏನು ಕೊಡ್ತದೆ?’ ಎಂಬ ಸಾಲನ್ನು ಸೇರಿಸಿ ಎಲ್ಲರನ್ನೂ ನಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.