ಕ್ರಿಸ್ಟಲ್ ಪಾರ್ಕ್ ಬ್ಯಾನರ್ನಡಿ ನಿರ್ಮಿಸಿ, ಸುಜಯ್ ಶಾಸ್ತ್ರಿ ನಿರ್ದೇಶಿಸಿರುವ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾಕ್ಕೆ ಚಲನಚಿತ್ರ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆಯಂತೆ.
ಪಕ್ಕಾ ಹಾಸ್ಯ ಪ್ರಧಾನ ಚಿತ್ರವಾದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ನೋಡಿರುವ ಸೆನ್ಸಾರ್ ಮಂಡಳಿ ಸದಸ್ಯರು ನಕ್ಕು ನಕ್ಕು ಸುಸ್ತಾಗಿ, ಚಿತ್ರತಂಡಕ್ಕೆ ಶಬ್ಬಾಶ್ ಗಿರಿ ನೀಡಿದ್ದಾರೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಟಿ.ಆರ್.ಚಂದ್ರಶೇಖರ್.
ಈ ಸಿನಿಮಾ ಆಗಸ್ಟ್ 9ರಂದು ವರಮಹಾಲಕ್ಷ್ಮಿ ಹಬ್ಬದ ದಿನ ರಾಜ್ಯದಾದ್ಯಂತ ತೆರೆ ಕಾಣಲಿದೆ. ಇದೇ ಶುಕ್ರವಾರ (ಜು.26ರಂದು) ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ. ಸಿನಿಮಾದ ಮೂರು ಹಾಡುಗಳು ಬಿಡುಗಡೆಗೂ ಮೊದಲೇ ಹಿಟ್ ಆಗಿವೆ. ‘ಸ್ವಾಗತಂ ಕೃಷ್ಣ’ ಹಾಡು ಯೂಟೂಬ್ನ ‘ಕ್ರಿಸ್ಟಲ್ ಪಾರ್ಕ್ ಮ್ಯೂಸಿಕ್’ ಚಾನೆಲ್ನಲ್ಲಿಬಿಡುಗಡೆಯಾದ ಒಂದೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದರು. ಈವರೆಗೆ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಈ ಹಾಡನ್ನು ಹಾಲಿಸಿದ್ದಾರೆ. ಜಯಂತ್ ಕಾಯ್ಕಿಣಿಯವರು ಬರೆದಿರುವ ‘ಏನನ್ನೋ ಹೇಳಲು ಹೋಗಿ ಇನ್ನೇನೋ ಹೇಳಿದೆಯಲ್ಲ...’ ಹಾಡಿಗೆ ಕೆನಾಡದಲ್ಲಿ ಪ್ಯೂಷನ್ ಮ್ಯೂಸಿಕ್ ಅಳವಡಿಸಲಾಗುತ್ತಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಸುಜ ಶಾಸ್ತ್ರಿ.
‘ಒಂದು ಮೊಟ್ಟೆಯ ಕಥೆ’ ಸಿನಿಮಾದ ನಾಯಕ ರಾಜ್ ಬಿ.ಶೆಟ್ಟಿ ಈ ಸಿನಿಮಾದಲ್ಲಿ ನಾಯಕನಾಗಿ ಮತ್ತು ‘ವಿದ್ಯಾ ವಿನಾಯಕ’ ಧಾರಾವಾಹಿಯ ಕವಿತಾ ಗೌಡ ನಾಯಕಿಯಾಗಿ ನಟಿಸಿದ್ದಾರೆ. ಭರಪೂರ ಕಾಮಿಡಿ ಇರುವ ಈ ಚಿತ್ರದಲ್ಲಿ ಸುಜಯ ಶಾಸ್ತ್ರಿಯೂ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಮಣಿಕಂಠ ಕದ್ರಿ ಸಂಗೀತ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.