ADVERTISEMENT

ಕರುಣೆಯ ಕವಚ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2019, 19:30 IST
Last Updated 4 ಏಪ್ರಿಲ್ 2019, 19:30 IST
ಶಿವರಾಜ್‌ಕುಮಾರ್
ಶಿವರಾಜ್‌ಕುಮಾರ್   

‘ನಾ ನು ರಿಮೇಕ್‌ ಸಿನಿಮಾದಲ್ಲಿ ನಟಿಸುವುದಿಲ್ಲ’ ಎಂದು ಒಂದೂವರೆ ದಶಕದ ಹಿಂದೆ ಶಪಥ ಮಾಡಿದ್ದರು ನಟ ಶಿವರಾಜ್‌ಕುಮಾರ್‌. ಚಾಚೂತಪ್ಪದೆ ಆ ಮಾತು ಪಾಲಿಸಿದ್ದರು. ಮೂರು ವರ್ಷದ ಹಿಂದೆ ಮಲಯಾಳದಲ್ಲಿ ‘ಒಪ್ಪಂ’ ಚಿತ್ರ ತೆರೆಕಂಡಿತು. ಈ ಸಿನಿಮಾ ವೀಕ್ಷಿಸಿದಾಗ ಶಿವಣ್ಣಗೆ ರಿಮೇಕ್‌ ಚಿತ್ರದಲ್ಲಿ ನಟಿಸುವ ಆಸೆ ಮತ್ತೆ ಗರಿಗೆದರಿತು. ಅದರಲ್ಲಿನ ಭಾವನಾತ್ಮಕ ಸನ್ನಿವೇಶಗಳು ಅವರ ಮನಸ್ಸಿಗೆ ತಟ್ಟಿದವು. ಈಗ ‘ಒಪ್ಪಂ’ ಕನ್ನಡದಲ್ಲಿ ‘ಕವಚ’ವಾಗಿ ಇದೇ ಶುಕ್ರವಾರ ಬಿಡುಗಡೆಯಾಗುತ್ತಿದೆ.

ನಟ ಮೋಹನ್‍ಲಾಲ್‌ ನಟಿಸಿದ್ದ ಪಾತ್ರಕ್ಕೆ ಕನ್ನಡದಲ್ಲಿ ಶಿವಣ್ಣ ಜೀವ ತುಂಬಿದ್ದಾರೆ. ಈ ಕತೆಯ ನಾಯಕ ಅಂಧ. ಜಗತ್ತು ಕಾಣದಿದ್ದರೂ ದೈಹಿಕವಾಗಿ ಆತ ಬಲಶಾಲಿ. ಜೀವನದಲ್ಲಿ ನಡೆಯುವ ಒಂದು ಘಟನೆಯಿಂದ ಆತ ಮಾನಸಿಕವಾಗಿ ಕುಗ್ಗಿ ಹೋಗುತ್ತಾನೆ. ಆಗ ಅವನ ನೆರವಿಗೆ ಬರುವುದು ಆತನ ಬುದ್ಧಿವಂತಿಕೆ. ಸಮಸ್ಯೆಯ ವಿರುದ್ಧ ಈಜಿ ಆತ ಹೇಗೆ ಜಯಶಾಲಿಯಾಗುತ್ತಾನೆ ಎನ್ನುವುದು ಚಿತ್ರದ ಕಥಾಹಂದರ.

ಕನ್ನಡದಲ್ಲಿ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿರುವುದು ಜಿ.ವಿ.ಆರ್‌. ವಾಸು. ಇದು ಅವರ ಮೊದಲ ಚಿತ್ರ. ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾಅವರೊಟ್ಟಿಗೆ ಮೂರು ಚಿತ್ರಗಳಿಗೆ ಸಹಾಯಕರಾಗಿ ದುಡಿದ ಅನುಭವ ಅವರಿಗಿದೆ. ಅಂದಹಾಗೆ ವರ್ಮಾ ಅವರೊಟ್ಟಿಗೆ ‘ಕಿಲ್ಲಿಂಗ್‌ ವೀರಪ್ಪನ್’ ಚಿತ್ರದಲ್ಲಿ ಕೆಲಸ ಮಾಡುತ್ತಿ‌ರುವಾಗಲೇ ಈ ಚಿತ್ರ ನಿರ್ದೇಶಿಸುವ ಆಸೆ ಅವರೊಳಗೆ ಚಿಗುರೊಡೆಯಿತಂತೆ. ಅವರೊಂದಿಗೆ ನಡೆಸಿದ ಮಾತುಕತೆಯ ಅಕ್ಷರರೂಪ ಇಲ್ಲಿದೆ.

ADVERTISEMENT

ಶಿವಣ್ಣ ಅವರನ್ನೇ ಸಿನಿಮಾದ ನಾಯಕರಾಗಿ ಆಯ್ಕೆ ಮಾಡಿದ್ದು ಏಕೆ?‌

‘ಒಪ್ಪಂ’ ಭಾವನಾತ್ಮಕ ಸಂಬಂಧ ಕುರಿತು ಹೇಳುವ ಕಥನ. ಮಲಯಾಳದಲ್ಲಿ ಈ ಚಿತ್ರ ನೋಡಿದಾಗಲೇ ಕನ್ನಡದಲ್ಲಿ ಇದನ್ನು ನಿರ್ದೇಶಿಸಬೇಕೆಂಬ ಆಸೆ ಬೆಳೆಯಿತು. ಮೋಹನ್‌ಲಾಲ್‌ ನಟಿಸಿದ ಪಾತ್ರಕ್ಕೆ ಇಲ್ಲಿ ಯಾವ ನಟ ಜೀವ ತುಂಬುತ್ತಾರೆ ಎಂದು ಆಲೋಚಿಸಿದೆ. ಆ ಕ್ಷಣಕ್ಕೆ ನನ್ನ ಕಣ್ಣಮುಂದೆ ಬಂದ ಚಿತ್ರ ಶಿವರಾಜ್‌ಕುಮಾರ್‌ ಅವರದ್ದು. ಭಾವನಾತ್ಮಕ ದೃಶ್ಯಗಳಲ್ಲಿ ಅವರು ಲೀಲಾಜಾಲವಾಗಿ ನಟಿಸುತ್ತಾರೆ. ಹಾಗಾಗಿ, ಅವರನ್ನೇ ನಾಯಕನನ್ನಾಗಿ ಆಯ್ಕೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದೆ. ಸಿನಿಮಾ ಬಗ್ಗೆ ವಿವರಿಸಿದಾಗ ಅವರೂ ಒ‍ಪ್ಪಿಕೊಂಡರು. ಈಗ ಚಿತ್ರ ತೆರೆಗೆ ಬರುತ್ತಿರುವುದು ಖುಷಿ ನೀಡಿದೆ.

‘ಒಪ್ಪಂ’ ಕಥೆಯನ್ನು ಯಥಾವತ್ತಾಗಿ ಕನ್ನಡಕ್ಕೆ ರಿಮೇಕ್‌ ಮಾಡಲಾಗಿದೆಯೇ?

ಖಂಡಿತಾ ಇಲ್ಲ. ಸ್ಕ್ರಿಪ್ಟ್‌ ಅನ್ನು ಸಂಪೂರ್ಣವಾಗಿ ರೀರೈಟ್‌ ಮಾಡಲಾಗಿದೆ. ಇಲ್ಲಿನ ನೇಟಿವಿಟಿಗೆ ತಕ್ಕಂತೆ ಅರ್ಧದಷ್ಟು ಬದಲಾವಣೆ ಮಾಡಿಕೊಳ್ಳಲಾಗಿದೆ. ನಾಯಕ, ಖಳನಟರ ಪಾತ್ರಗಳು ಇಲ್ಲಿನ ಸನ್ನಿವೇಶಕ್ಕೆ ತಕ್ಕಂತೆ ಬದಲಾಗುತ್ತವೆ. ಮಲಯಾಳ ಸಿನಿಮಾ ಪ್ರೇಕ್ಷಕರ ಅಭಿರುಚಿ ಸಂಪೂರ್ಣ ಭಿನ್ನವಾದುದು. ತೆರೆಯ ಮೇಲಿನ ಸಣ್ಣ ಸಣ್ಣ ಭಾವನಾತ್ಮಕ ವಿಷಯವನ್ನೂ ಅವರು ಎಂಜಾಯ್‌ ಮಾಡುತ್ತಾರೆ. ಕನ್ನಡ, ತೆಲುಗು ಪ್ರೇಕ್ಷಕರ ಅಭಿರುಚಿಯಲ್ಲಿ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ, ಸ್ಥಳೀಯ ಪ್ರೇಕ್ಷಕರ ಮನಸ್ಥಿತಿಗೆ ತಕ್ಕಂತೆ ಸಿನಿಮಾ ನಿರ್ದೇಶಿಸಬೇಕು. ಇಲ್ಲಿನವರಿಗೆ ಪರಿಣಾಮಕಾರಿಯಾಗಿ ಸಿನಿಮಾ ಕಟ್ಟಿಕೊಡಬೇಕು. ನಾನು ಅದನ್ನು ಮಾಡಿದ್ದೇನೆ ಅಷ್ಟೇ.

ಶಿವಣ್ಣ ಅವರೊಂದಿಗೆ ಕೆಲಸ ಮಾಡಿದ ಅನುಭವ ಹೇಗಿತ್ತು?

ಶಿವಣ್ಣ ದೊಡ್ಡ ನಟರು. ಅವರು ನಟಿಸಿರುವ ಸಿನಿಮಾಗಳ ಸಂಖ್ಯೆ ಶತಕ ದಾಟಿದೆ. ಹಲವು ಭಿನ್ನವಾದ ಪಾತ್ರಗಳನ್ನು ಅವರು ನಿರ್ವಹಿಸಿದ್ದಾರೆ. ಆದರೆ, ಅವರ ವೃತ್ತಿಬದುಕಿನಲ್ಲಿ ಇದೊಂದು ಸಂಪೂರ್ಣ ಭಿನ್ನವಾದ ಪಾತ್ರ. ಅಂಧನ ಪಾತ್ರಕ್ಕೆ ಜೀವ ತುಂಬುವುದು ಸುಲಭವಲ್ಲ. ಪಾತ್ರಕ್ಕೆ ಅವರು ನ್ಯಾಯ ಒದಗಿಸಿದ್ದಾರೆ. ಅವರೊಟ್ಟಿಗೆ ಕೆಲಸ ಮಾಡಿದ್ದು ನನ್ನ ಪುಣ್ಯ.
ಅವರಿಂದ ಸಾಕಷ್ಟು ಕಲಿತೆ.

ಚಿತ್ರದ ಉಳಿದ ಪಾತ್ರಗಳ ಬಗ್ಗೆ ಹೇಳಿ.

ಎಮೋಷನಲ್ ಥ್ರಿಲ್ಲರ್‌ ಚಿತ್ರ ಇದು.ಇಶಾ ಕೊಪ್ಪಿಕರ್, ವಸಿಷ್ಠ ಸಿಂಹ, ಕೃತಿಕಾ ಜಯಕುಮಾರ್, ಬೇಬಿ ಮೀನಾಕ್ಷಿ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಶಿವಣ್ಣ ಅವರ ಪಾತ್ರದೊಟ್ಟಿಗೆ ಈ ಎಲ್ಲಾ ಪಾತ್ರಗಳು ಚಲಿಸುತ್ತಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.