ADVERTISEMENT

‘ಹಯಗ್ರೀವ’ನಾದ ಧನ್ವೀರ್‌

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2024, 3:05 IST
Last Updated 6 ಫೆಬ್ರುವರಿ 2024, 3:05 IST
‘ಹಯಗ್ರೀವ’ ಚಿತ್ರದ ಮುಹೂರ್ತ ಸಮಾರಂಭ 
‘ಹಯಗ್ರೀವ’ ಚಿತ್ರದ ಮುಹೂರ್ತ ಸಮಾರಂಭ    

‘ಕೈವ’ ಸಿನಿಮಾ ಬಳಿಕ ಹೊಸ ಪ್ರಾಜೆಕ್ಟ್‌ ಕೈಗೆತ್ತಿಕೊಂಡಿರುವ ಧನ್ವೀರ್‌ ‘ಹಯಗ್ರೀವ’ನಾಗಿ ತೆರೆಗೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಮುಹೂರ್ತ ಇತ್ತೀಚೆಗೆ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ನಡೆಯಿತು. 

ಸಮೃದ್ಧಿ ಮಂಜುನಾಥ್ ತಮ್ಮ ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಧನ್ವೀರ್‌ಗೆ ಜೋಡಿಯಾಗಿ ‘ಸಲಗ’ ಖ್ಯಾತಿಯ ಸಂಜನಾ ಆನಂದ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಮತ್ತೊಬ್ಬ ನಾಯಕನಿದ್ದು, ಅವರು ಯಾರು ಎಂದು ಚಿತ್ರ ಬಿಡುಗಡೆಯವರೆಗೂ ಗೌಪ್ಯವಾಗಿಡಲಾಗುವುದು ಎಂದಿದೆ ಚಿತ್ರತಂಡ. ‌

‘ಚಿತ್ರದಲ್ಲಿ ಮುಖ್ಯವಾಗಿ ಪೌರಾಣಿಕ ಅಂಶಗಳ ಜೊತೆಗೆ ಕ್ರೈಮ್‍ ಇದೆ. ಪ್ರೀತಿ, ಭಾವನಾತ್ಮಕ ಅಂಶಗಳ ಜೊತೆಗೆ ಕಮರ್ಷಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳು ಚಿತ್ರದಲ್ಲಿದೆ. ಬೆಂಗಳೂರಿನಲ್ಲಿ ಇಡೀ ಚಿತ್ರದ ಚಿತ್ರೀಕರಣ ನಡೆಯಲಿದೆ. ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ‍್ಳುತ್ತಿದ್ದಾರೆ. ಚಿತ್ರಕ್ಕೆ ನಾನೇ ಕಥೆ, ಚಿತ್ರಕಥೆ ಬರೆದಿದ್ದೇನೆ’ ಎಂದು ಚಿತ್ರದ ಮಾಹಿತಿ ಹಂಚಿಕೊಂಡರು ರಘುಕುಮಾರ್.

ADVERTISEMENT

‘ಇದು ನನ್ನ ಐದನೇ ಚಿತ್ರ’ ಎಂದು ಮಾತು ಆರಂಭಿಸಿದ ಧನ್ವೀರ್, ‘ಬಹಳ ದಿನಗಳಿಂದ ಯೋಜನೆ ರೂಪಿಸಿ ಈ ಚಿತ್ರದ ಚಿತ್ರೀಕರಣಕ್ಕೆ ಇಳಿಯುತ್ತಿದ್ದೇವೆ. ‘ಬಜಾರ್’ ನಂತರ ಈ ಚಿತ್ರಕ್ಕಾಗಿ ಸಿಕ್ಸ್ ಪ್ಯಾಕ್ ‍ಮಾಡಿಕೊಳ್ಳುತ್ತಿದ್ದೇನೆ. ಒಂದೇ ಹಂತದಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.