ADVERTISEMENT

ಉದ್ಯಾತಿ ಟ್ರಸ್ಟ್‌ನಿಂದ ವಿಭಿನ್ನ ಹೆಜ್ಜೆ; ಥಿಯೇಟರ್‌ ಕಾರ್ಮಿಕರಿಗೆ ಆರೋಗ್ಯ ವಿಮೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 19:30 IST
Last Updated 21 ಜುಲೈ 2020, 19:30 IST
ದಿನಸಿ ಕಿಟ್‌ ವಿತರಿಸುತ್ತಿರುವ ಕಾರ್ತಿಕ್‌ ಟಿ.ಪಿ
ದಿನಸಿ ಕಿಟ್‌ ವಿತರಿಸುತ್ತಿರುವ ಕಾರ್ತಿಕ್‌ ಟಿ.ಪಿ   

ಕೊರೊನಾ ವೈರಸ್‌ ವಿಶ್ವದಾದ್ಯಂತ ತಲ್ಲಣ ಸೃಷ್ಟಿ ಮಾಡಿದೆ. ಈ ಅವಧಿಯಲ್ಲಿ ಕೋಟ್ಯಂತರ ಜನರು ಉದ್ಯೋಗ ಕಳೆದುಕೊಂಡರೆ, ಸ್ವಂತ ಉದ್ಯೋಗ, ವ್ಯಾಪಾರ, ದಿನಗೂಲಿಯನ್ನೇ ನಂಬಿ ಜೀವಿಸುತ್ತಿದ್ದವರಿಗೆ ಭಾರಿ ಹೊಡೆತ ಬಿದ್ದಿದೆ.

ಬೆಂಗಳೂರಿನ ಸಿನಿಮಾ ಮಂದಿರಗಳು, ಫಿಟ್ನೆಸ್‌ ಕೇಂದ್ರ ಮತ್ತು ಜಿಮ್‌ಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರೂ ಇಂಥ ಹೊಡೆತಕ್ಕೆ ಸಿಲುಕಿದ್ದಾರೆ.

ನಗರದ ಉದ್ಯಾತಿ ಟ್ರಸ್ಟ್‌ ಕೊರೊನಾ ಕಾಲದಲ್ಲಿ ಥಿಯೇಟರ್‌, ಫಿಟ್‌ನೆಸ್‌ ಕೇಂದ್ರ ಹಾಗೂ ಜಿಮ್‌ಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಆರೋಗ್ಯ ವಿಮೆ ಮಾಡಿಸುವ ಮೂಲಕ ವಿಶಿಷ್ಟ ಹೆಜ್ಜೆ ಇರಿಸಿದೆ.

ADVERTISEMENT

ಚಿತ್ರಮಂದಿರ, ಜಿಮ್‍ ಸೇರಿದಂತೆ ಬೇರೆ, ಬೇರೆ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದ ನೌಕರರಿಗೆ ಆರ್ಥಿಕ ನೆರವು ಒದಗಿಸುವುದು ಈ ಟ್ರಸ್ಟ್‌ನ ಉದ್ದೇಶ. ಉದ್ಯಾತಿ ಟ್ರಸ್ಟ್ ತಮ್ಮ ಸ್ವಂತ ಹಣದಿಂದಲೇ ನೌಕರರಿಗೆಆರೋಗ್ಯ ವಿಮೆ ಮಾಡಿಸಿದೆ. ಇದರಿಂದಾಗಿ ಕೊರೊನಾ ಕಾಲದಲ್ಲಿ ಆರೋಗ್ಯದಲ್ಲಿ ಏರುಪೇರಾದಾಗ ಅವರಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಲು ಇದು ನೆರವಾಗಲಿದೆ.

ಭೂಮಿಕಾ, ಅಭಿನಯ, ಈಶ್ವರಿ, ಕಾಮಾಕ್ಯ ಸೇರಿದಂತೆ ನಗರದ ವಿವಿಧ ಭಾಗದ ಸಿನಿಮಾ ಥಿಯೇಟರ್‌ಗಳು, ಜಿಮ್‌ನಲ್ಲಿ ಕೆಲಸ ಮಾಡುವ36 ಜನರಿಗೆ ಆರೋಗ್ಯ ವಿಮೆಯನ್ನು ಟ್ರಸ್ಟ್‌ ಮಾಡಿಸಿದೆ. ಪ್ರತಿ ಸದಸ್ಯನಿಗೆ ₹3 ಲಕ್ಷದ ವಿಮೆ ಮಾಡಿಸಲಾಗಿದೆ. ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಅವಧಿಯಲ್ಲಿ ಇದು ಅವಶ್ಯ ಎಂದು ಟ್ರಸ್ಟ್‌ನ ಸ್ಥಾಪಕ, ನಟ ಕಾರ್ತಿಕ್ ಹೆಬ್ಬಾರ್‌‌ ಟಿ.ಪಿ ತಿಳಿಸಿದ್ದಾರೆ.

ಲಾಕ್‌ಡೌನ್‌ ತೆರವುಗೊಳಿಸಿದ ನಂತರವೂ ಸಿನಿಮಾ ಥಿಯೇಟರ್, ಜಿಮ್, ಫಿಟ್‌ನೆಸ್‌ ಕೇಂದ್ರಗಳನ್ನು ತೆರೆಯಲು ಸರ್ಕಾರ ಇನ್ನೂ ಅನುಮತಿಯನ್ನು ನೀಡಿಲ್ಲ. ಹೀಗಾಗಿ ಇಲ್ಲಿ ಕೆಲಸ ಮಾಡುತ್ತಿದ್ದ ಉದ್ಯೋಗಿಗಳೆಲ್ಲಾ ಕಳೆದ ಕೆಲ ದಿನಗಳಿಂದ ಸಂಬಳವಿಲ್ಲದೆ ಜೀವನ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಬೇರೆ ಆದಾಯ ಮೂಲವೂ ಇಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಾರ್ತಿಕ್.

ಲಾಕ್‌ಡೌನ್‌ ಆರಂಭವಾದಾಗಿನಿಂದಲೂ ಉದ್ಯಾತಿ ಟ್ರಸ್ಟ್‌ ಒಂದಿಲ್ಲೊಂದು ಸಮಾಜಮುಖಿ ಕೆಲಸದಲ್ಲಿ ತೊಡಗಿದೆ. ನೂರಾರು ಕುಟುಂಬಗಳಿಗೆ ಅಕ್ಕಿ, ಬೇಳೆ ಸೇರಿದಂತೆ ದಿನಸಿ ಕಿಟ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಗಿದೆ. ಹಾಗೆಯೇ ರೈತರಿಂದ ನೇರವಾಗಿ ಕಿಲೋಗಟ್ಟಲೆ ತರಕಾರಿ ಖರೀದಿಸಿ ಅಗತ್ಯ ಇರುವವರಿಗೆ ಉಚಿತವಾಗಿ ಹಂಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.