
ಇತ್ತೀಚೆಗೆ ತೆರೆಕಂಡ ‘ಏಳುಮಲೆ’ ಸಿನಿಮಾ ಕರ್ನಾಟಕ–ತಮಿಳುನಾಡು ಗಡಿಭಾಗದಲ್ಲಿ ನಡೆಯುವ ಕಥೆಯೊಂದನ್ನು ಹೊತ್ತುಬಂದಿತ್ತು. ಇದೀಗ ಮತ್ತೊಂದು ಸಿನಿಮಾ ಇದೇ ವಿಷಯವನ್ನಿಟ್ಟುಕೊಂಡು ಬರಲಿದೆ.
‘ರಂಗಸಮುದ್ರ’ ಎಂಬ ಸಿನಿಮಾ ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಹೊಯ್ಸಳ ಫಿಲ್ಮ್ಸ್ ಸಂಸ್ಥೆ ಹೊಸ ಚಿತ್ರ ಘೋಷಿಸಿದೆ. ಈ ಬಾರಿ ಹೊಸಬರಿಗೆ ವೇದಿಕೆ ಕಲ್ಪಿಸಿರುವ ಈ ನಿರ್ಮಾಣ ಸಂಸ್ಥೆ, ‘ಬಾರ್ಡರ್ ಡೈರೀಸ್’ ಎನ್ನುವ ಶೀರ್ಷಿಕೆಯನ್ನು ಅನಾವರಣಗೊಳಿಸಿದೆ.
ಗದ್ದಲದ ಊರಿನಲ್ಲಿ ಸದ್ದಿಲ್ಲದೆ ಅರಳಿದ ಪ್ರೇಮಕಥೆಯನ್ನು ಹೇಳಹೊರಟಿದ್ದಾರೆ ನಿರ್ದೇಶಕ ಎ.ಎಸ್.ಜಿ. ಇದು ಇವರ ಚೊಚ್ಚಲ ಸಿನಿಮಾ. ಕಳೆದ ಏಳೆಂಟು ವರ್ಷಗಳಿಂದ ‘ಸಾಹೇಬ’, ‘ನನ್ನ ಪ್ರಕಾರ’, ‘ತೂತು ಮಡಿಕೆ’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ.
‘ಬಾರ್ಡರ್ ಡೈರೀಸ್’ ಸಿನಿಮಾದಲ್ಲಿ ನಟ ಅಂಜನ್ ನಾಗೇಂದ್ರ ನಾಯಕನಾಗಿ ನಟಿಸುತ್ತಿದ್ದಾರೆ. ಅಶ್ವಿತ ಹೆಗಡೆ ನಾಯಕಿಯಾಗಿ ಸಾಥ್ ಕೊಡಲಿದ್ದಾರೆ. ಉಳಿದಂತೆ ಗೋಪಾಲಕೃಷ್ಣ ದೇಶಪಾಂಡೆ, ತಬಲ ನಾಣಿ, ಶರತ್ ಲೋಹಿತಾಶ್ವ, ಮೇಘ ಜಾದವ್, ವೀಣಾ ಸುಂದರ್, ಆನಂದ್ ನೀನಾಸಂ, ಕಾಳಿಪ್ರಸಾದ್, ಕುಶಾಲ್ ಬಿಕೆ, ನಾಗರಾಜ ಶಿವ ಸಿಂಪಿ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ‘ಚಮಕ್’, ‘ಸಖತ್’ ಖ್ಯಾತಿಯ ಜುಡಾ ಸ್ಯಾಂಡಿ ಸಂಗೀತ ನೀಡಿದ್ದು, ಅಚ್ಯುತ್ ಬಿ.ಎಸ್. ಛಾಯಾಚಿತ್ರಗ್ರಹಣ, ಆಕಾಶ್ ಹಿರೇಮಠ ಸಂಕಲನವಿದೆ.
ಚಿತ್ರದ ಚಿತ್ರೀಕರಣ ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿರುವ ಹೊಸೂರಿನ ಕೈಗಾರಿಕ ಪ್ರದೇಶ, ಚನ್ನಪಟ್ಟಣ, ಮಾಗಡಿ ಮತ್ತು ಬೆಂಗಳೂರಿನ ಸುತ್ತಮುತ್ತ ನಡೆದಿದೆ. ಸದ್ಯ ಸಿನಿಮಾದ ಕೊನೆಯ ಹಂತದ ಚಿತ್ರೀಕರಣದ ತಯಾರಿ ನಡೆಯುತ್ತಿದ್ದು, ಜೊತೆಗೆ ಪೋಸ್ಟ್ ಪ್ರೊಡಕ್ಷನ್ ಕೆಲಸವನ್ನೂ ಚಿತ್ರತಂಡ ಆರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.