ಉಗ್ರಂ, ಕೆಜಿಎಫ್ ಸಿನಿಮಾದಲ್ಲಿನ ಕಲಾವಿದರ ನಟನೆಯನ್ನು ಕಂಡವರೆಲ್ಲರಿಗೂ ಅದಕ್ಕೆ ಆ್ಯಕ್ಷನ್, ಕಟ್ ಹೇಳಿದ ಪ್ರಶಾಂತ್ ನೀಲ್ ನಟಿಸಿದರೆ ಹೇಗಿರುತ್ತದೆ?
ಶ್ರೀಮುರಳಿಗೆ ಮತ್ತೊಮ್ಮೆ ಸಕ್ಸಸ್ ನೀಡಿದ ಸಿನಿಮಾ ಉಗ್ರಂ. ಆ ಸಿನಿಮಾದಲ್ಲಿನ ಎಲ್ಲಾ ಪಾತ್ರಗಳ ಅಭಿನಯ ಭಿನ್ನ ಎನ್ನಿಸುತ್ತದೆ. ಅದರಲ್ಲೂ ವಿಲನ್ಗಳ ಕರಾರುವಕ್ಕು ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.
ಇನ್ನೂ ಕೆಜೆಎಫ್ ಸಿನಿಮಾದಲ್ಲಂತು ವಿಲನ್ಗಳೇ ಹೆಚ್ಚು ಗಮನ ಸೆಳೆಯುತ್ತಾರೆ. ಅದೂ ಹೊಸ ಕಲಾವಿದರಿಂದ ಅಂತಹ ನಟನೆಯನ್ನು ನೋಡಿ ಜನರು ಪ್ರಶಂಸಿಸಿದ್ದರು.
ಇದನ್ನೂ ಓದಿ:ಅಧೀರನ ಗುಟ್ಟು ಬಿಚ್ಚಿಟ್ಟ ಪ್ರಶಾಂತ್ ನೀಲ್
ಈ ಎಲ್ಲಾ ಕಲಾವಿದರಿಂದ ಇಂತಹ ನಟನೆಯನ್ನು ಹೊರತೆಗೆದ ನಿರ್ದೇಶಕ ಪ್ರಶಾಂತ್ ನೀಲ್ ನಟಿಸಿದರೆ ಹೇಗೆ ಎನ್ನುವ ಆಲೋಚನೆಯನ್ನು ಅವರ ಮುಂದಿಟ್ಟಾಗ, ‘ಅದೆಲ್ಲ ನಮಗೆ ಅಲ್ಲರೀ, ಕ್ಯಾಮೆರಾದ ಮುಂದೆ ನನಗೆ ನೆಟ್ಟಗೆ ಒಂದು ಸಂದರ್ಶನ ಕೊಡಲು ಬರುವುದಿಲ್ಲ. ಅಂತಹವನಿಂದ ನಟನೆ ಸಾಧ್ಯವೇ’ ಎಂದು ನಗುತ್ತಲೇ ಮರುಪ್ರಶ್ನೆ ಹಾಕಿದರು.
‘ಇಂದಿಗೂ ನನಗೆ ಆ್ಯಕ್ಟಿಂಗ್ ಮಾಡಬೇಕು ಎಂದು ಅನಿಸಿಯೇ ಇಲ್ಲ. ನಟನೆ ಎಂಬುದು ದೇವರು ಕೊಟ್ಟಿರುವ ವರ. ದೇವರು ಕರುಣಿಸಿದ್ದರೆ ಮಾತ್ರವೇ ನಾವು ನಟಿಸಬಹುದು.ಎಲ್ಲರೂ ಡೈರೆಕ್ಷನ್ ಕಲಿಯಬಹುದು. ಆದರೆ, ಅಭಿನಯ ಕಲೆಯ ಕರಗತ ಕಷ್ಟ. ಯಾರೊಬ್ಬರು ಕಲಿಯಲು ಆಗುವುದಿಲ್ಲ. ಅದು ಅವರೊಳಗೆ ಅಂತರ್ಗತವಾಗಿರಬೇಕು. ನನ್ನಿಂದ ನಟನೆ ಎಂದಿಗೂ ಸಾಧ್ಯವಿಲ್ಲ. ನಮ್ಮೊಳಗೆ ನಟನೆಯ ಕಲೆ ಇದ್ದರೆ ಇದೆ ಎಂದರ್ಥ. ಇಲ್ಲದಿದ್ದರೆ ಆ ಭಾಗ್ಯವಿಲ್ಲ ಎಂದು ಭಾವಿಸಬೇಕು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.