ADVERTISEMENT

‘ಕಾರ್ನಿ'ಯ ಡಾರ್ಕ್‌ ಥ್ರಿಲ್ಲರ್‌ ಕಥಾನಕ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2018, 9:16 IST
Last Updated 10 ಸೆಪ್ಟೆಂಬರ್ 2018, 9:16 IST
ವಿನೋದ್‌ ಕುಮಾರ್
ವಿನೋದ್‌ ಕುಮಾರ್   

‘ಕಾರ್ನಿ’ ಎಂದರೆ ದುರ್ಗಾದೇವಿಯ ಕೈಯಲ್ಲಿರುವ ಅಸ್ತ್ರದ ಹೆಸರು. ಇದೇ ಹೆಸರಿನಡಿ ಈಗ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ. ವಿನೋದ್‌ ಕುಮಾರ್ ಈ ಚಿತ್ರದ ನಿರ್ದೇಶಕ. ತೊಂಬತ್ತರ ದಶಕದಲ್ಲಿ ದಿನೇಶ್‌ಬಾಬು ‘ಇದು ಸಾಧ್ಯ’ ಎಂಬಡಾರ್ಕ್‌ ಥ್ರಿಲ್ಲರ್‌ ಚಿತ್ರ ನಿರ್ದೇಶಿಸಿದ್ದರು. ‘ಕಾರ್ನಿ’ಗೂ ಈ ಚಿತ್ರವೇ ಪ್ರೇರಣೆಯಂತೆ. ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಈ ತಿಂಗಳಾಂತ್ಯಕ್ಕೆ ತೆರೆಗೆ ಬರಲು ಚಿತ್ರತಂಡ ಸಿದ್ಧತೆ ನಡೆಸಿದೆ.

ಚಿತ್ರದ ಶೇಕಡ ತೊಂಬತ್ತು ಭಾಗದಷ್ಟು ಚಿತ್ರೀಕರಣ ರಾತ್ರಿಯಲ್ಲಿ ನಡೆದಿರುವುದು ಇದರ ವಿಶೇಷ. ಕಥೆಗೆ ಇದರ ಅಗತ್ಯವಿತ್ತು ಎನ್ನುವುದನ್ನು ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರು ಹೇಳಿಕೊಂಡರು.

‘ಕಥೆಯೇ ಚಿತ್ರದ ನಿಜವಾದ ನಾಯಕ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದಾರು ಹೆಣ್ಣುಮಕ್ಕಳು ನಾಪತ್ತೆಯಾಗುತ್ತಾರೆ. ಪೊಲೀಸರು ತನಿಖೆ ಆರಂಭಿಸಿದಾಗ ಒಂದೊಂದು ಕಥೆ ಬಿಚ್ಚಿಕೊಳ್ಳುತ್ತದೆ. ಹೆಣ್ಣುಮಕ್ಕಳು ಏಕೆ ಕಾಣೆಯಾಗುತ್ತಾರೆ ಎನ್ನುವುದನ್ನು ಥ್ರಿಲ್ಲರ್‌ ಮೂಲಕ ಕಟ್ಟಿಕೊಡಲಾಗಿದೆ’ ಎಂಬುದು ಅವರ ವಿವರಣೆ.

ADVERTISEMENT

‘ದುನಿಯಾ’ ರಶ್ಮಿ ಈ ಚಿತ್ರದ ನಾಯಕಿ. ಹಲವು ದಿನಗಳ ಬಳಿಕ ಹೊಸ ಪಾತ್ರದಲ್ಲಿ ಕಾಣಿಸಿಕೊಂಡ ಖುಷಿ ಅವರ ಮೊಗದಲ್ಲಿತ್ತು. ಚಿತ್ರದಲ್ಲಿ ಅವರು ಮೂಕಿಯಾಗಿ ಕಾಣಿಸಿಕೊಂಡಿದ್ದಾರಂತೆ. ನಿರ್ದೇಶಕರು ಹೇಳಿಕೊಟ್ಟ ಸನ್ನೆಯ ಮೂಲಕ ನಟಿಸಿದ್ದೇನೆ ಎಂದು ಹೇಳಿಕೊಂಡರು.

‘ಹಲವು ದಿನಗಳ ಬಳಿಕ ಸಾಕಷ್ಟು ಬದಲಾವಣೆ ಮಾಡಿಕೊಂಡು ಚಿತ್ರರಂಗಕ್ಕೆ ಮರಳಿದ್ದೇನೆ. ಒಂದೇ ತರಹದ ಪಾತ್ರಗಳಲ್ಲಿ ನಟಿಸಿದ್ದ ನನಗೆ ಇದು ಒಂದು ಬಗೆಯ ಹೊಸತನ ನೀಡಿದೆ. ಫೈಟಿಂಗ್‌ ಕೂಡ ಮಾಡಿದ್ದೇನೆ’ ಎಂದು ನಗು ಚೆಲ್ಲಿದರು.

ನಿರಂತ್ ಈ ಚಿತ್ರದ ನಾಯಕ. ಇದು ಅವರಿಗೆ ಎರಡನೇ ಚಿತ್ರ. ಹೀರೊ ಹಾಗೂ ವಿಲನ್‌ ಶೇಡ್‌ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ‘ಚಿತ್ರದಲ್ಲಿ ನನ್ನದು ಸೈಕೋಪಾತ್‌ ಪಾತ್ರ. ರಶ್ಮಿ ಮತ್ತು ನನಗೆ ಚಿತ್ರದಲ್ಲಿ ಒಂದು ಸಾಹಸ ದೃಶ್ಯ ಕೂಡ ಇದೆ’ ಎಂದು ಹೇಳಿದರು.

ಅರಿಂದಮ್‌ ಗೋಸ್ವಾಮಿ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಸೂರ್ಯೋದಯ ಅವರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.