ಕಲಘಟಗಿ (ಧಾರವಾಡ ಜಿಲ್ಲೆ): ತಾರಾ ದಂಪತಿ ಯಶ್- ರಾಧಿಕಾ ಪಂಡಿತ್ ಮಗಳಿಗಾಗಿ, ಕಲಘಟಗಿಯಲ್ಲಿ ಬಣ್ಣದ ತೊಟ್ಟಿಲು ತಯಾರಾಗುತ್ತಿದೆ.
ಅಷ್ಟಕ್ಕೂ ಈ ತೊಟ್ಟಿಲು ತಯಾರಿಸಲು ಹೇಳಿದ್ದು ಯಾರು ಗೊತ್ತೇ? ಇತ್ತೀಚೆಗಷ್ಟೇ ನಿಧನರಾದ ನಟ ಅಂಬರೀಷ್!
ಹೌದು. ಯಶ್– ರಾಧಿಕಾ ಅವರಿಗೆ ಹುಟ್ಟಲಿರುವ ಮಗುವಿಗಾಗಿ ನೀಡಲು ಒಂದೊಳ್ಳೆಯ ತೊಟ್ಟಿಲು ಬೇಕೆಂದು, ಬೆಳಗಾವಿ ಮೂಲದ ನಾರಾಯಣ ಕಲಾಲ ಎಂಬುವವರಿಗೆ ಎರಡು ತಿಂಗಳ ಹಿಂದೆಯೇ ಅಂಬರೀಷ್ ಕೇಳಿದ್ದರಂತೆ. ಅಂಥ ತೊಟ್ಟಿಲಿಗಾಗಿ, ನಾರಾಯಣ ಅವರು ಬೇಡಿಕೆ ಸಲ್ಲಿಸಿದ್ದು ಕಲಘಟಗಿಯ ಸಾವುಕಾರ ಕುಟುಂಬದವರಿಗೆ.
ಈ ತೊಟ್ಟಿಲಿನ ಮೇಲೆ ಕೃಷ್ಣಾವತಾರ, ದಶಾವತಾರ, ರಾಮಾಯಣ ಮಹಾಭಾರತದ ಕಥೆಗಳ ಚಿತ್ರಗಳನ್ನು ಬಿಡಿಸಲಾಗಿದೆ. ಮಗು ದೇವರ ಸನ್ನಿಧಾನದಲ್ಲಿ ಆಡಲಿ ಎಂಬ ಉದ್ದೇಶದಿಂದ ಈ ಚಿತ್ರಗಳನ್ನು ಬರೆಯಲಾಗುತ್ತದೆ. ಇದರ ಅಂದಾಜು ಬೆಲೆ ₹1 ಲಕ್ಷ.
‘ಎರಡು ತಿಂಗಳಿನಿಂದ ಹಗಲೂ ರಾತ್ರಿ ತೊಟ್ಟಿಲಿನ ಕೆಲಸ ಮಾಡಲಾಗುತ್ತಿದೆ. ಹಿಂದೂ– ಮುಸ್ಲಿಂ– ಕ್ರಿಶ್ಚಿಯನ್ ಸೇರಿದಂತೆ ಎಲ್ಲ ಧರ್ಮದವರು ನಮ್ಮಲ್ಲಿ ತೊಟ್ಟಿಲು ತೆಗೆದುಕೊಂಡು ಹೋಗುತ್ತಾರೆ. ಮುಖ್ಯವಾಗಿ ಅರಗು ಮತ್ತು ನೈಸರ್ಗಿಕ ಬಣ್ಣ ಮಿಶ್ರಣ ಮಾಡಿ ಚಿತ್ರ ಬರೆಯಲಾಗುತ್ತಿದೆ. ಎರಡು ವಾರದಲ್ಲಿ ಸಿದ್ಧ ಆಗಲಿದೆ’ ಎನ್ನುತ್ತಾರೆ ಕಲಾವಿದರಾದ ಲಕ್ಷ್ಮಣ ಹಾಗೂ ಶ್ರೀಧರ ಸಾವುಕಾರ.
ಕಲಘಟಗಿಯ ಚಿತ್ರಗಾರ ಗಲ್ಲಿಯಲ್ಲಿ ನೆಲೆಸಿರುವ ಸಾವುಕಾರ ಕುಟುಂಬ ನಾಲ್ಕು ತಲೆಮಾರುಗಳಿಂದಲೂ ಈ ಕೆಲಸದಲ್ಲಿ ತೊಡಗಿದೆ. ಇವರು ತಯಾರಿಸುವ ತೊಟ್ಟಿಲು ಬೆಂಗಳೂರು, ಗೋವಾ, ಆಂಧ್ರಪ್ರದೇಶ, ಮಹಾರಾಷ್ಟ್ರ, ಅಮೆರಿಕ, ದುಬೈ, ಫ್ರಾನ್ಸ್ ದೇಶಗಳಲ್ಲೂ ತನ್ನ ವೈಶಿಷ್ಟ್ಯವನ್ನು ಸಾರಿದೆ. ಇಲ್ಲಿನ ಸಾವುಕಾರ ಕುಟುಂಬದವರ ತೊಟ್ಟಿಲ ಕಲೆಗಾರಿಕೆ ಬಗ್ಗೆ ಕರ್ನಾಟಕ ವಾರ್ತಾ ಇಲಾಖೆಯು ಸಾಕ್ಷ್ಯಚಿತ್ರವನ್ನೂ ಸಿದ್ಧಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.