ಚೆನ್ನೈ: ಖ್ಯಾತ ತಮಿಳು ನಟ ಹಾಗೂಮಕ್ಕಳ್ ನೀಧಿ ಮೈಯಂ (ಎಂಎನ್ಎಂ) ರಾಜಕೀಯ ಪಕ್ಷದ ಮುಖಂಡ ಕಮಲ್ ಹಾಸನ್ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಶುಕ್ರವಾರ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ.
2016ರಲ್ಲಿ ಕಮಲ್ ಹಾಸನ್ ಅವರ ಬಲಗಾಲಿನ ಮೂಳೆ ಮುರಿದಿತ್ತು. ಈ ಸಂದರ್ಭದಲ್ಲಿ ಕಾಲಿಗೆ ಕಸಿ(ಪಟ್ಟು)ಹಾಕಲಾಗಿತ್ತು. ಅದನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗುವುದುಎಂದು ಎಂಎನ್ಎಂ ಉಪಾಧ್ಯಕ್ಷ ಡಾ. ಆರ್ ಮಹೇಂದ್ರನ್ ತಿಳಿಸಿದ್ದಾರೆ.
ಕಸಿ ತೆಗೆಯುವುದಕ್ಕಾಗಿ ಗುರುವಾರ ಆಸ್ಪತ್ರೆಗೆ ದಾಖಲಾಗಿದ್ದು ಶುಕ್ರವಾರ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಒಂದೆರಡು ದಿನಗಳ ಬಳಿಕ ಅವರನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ಅವರುಹೇಳಿದ್ದಾರೆ.
ಕಮಲ್ ಹಾಸನ್ ರಾಜಕೀಯ ಮತ್ತು ಸಿನಿಮಾಗಳಲ್ಲಿ ಸಕ್ರಿಯರಾಗಿದ್ದ ಕಾರಣ ಶಸ್ತ್ರಚಿಕಿತ್ಸೆಯನ್ನು ಮುಂದೂಡುತ್ತ ಬಂದಿದ್ದರು. ಇದೀಗ ವೈದ್ಯರ ಸಲಹೆ ಪಡೆದು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದುಮಹೇಂದ್ರನ್ ಮಾಹಿತಿ ನೀಡಿದ್ದಾರೆ.
ಬಾಲನಟನಾಗಿ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡ ಕಮಲ್ ತಮ್ಮ ನಟನೆ, ಬರವಣಿಗೆ, ಗಾಯನ, ನಿರ್ದೇಶನ ಮತ್ತು ನಿರ್ಮಾಣ ಕೌಶಲಗಳಿಂದ ಹೆಸರು ಮಾಡಿದ್ದಾರೆ. ಆ ಕಾರಣಕ್ಕೆ ಅವರು ಯುನಿವರ್ಸಲ್ ಸ್ಟಾರ್ ಎಂದು ಖ್ಯಾತಿ ಪಡೆದಿದ್ದಾರೆ.65 ವಸಂತಗಳನ್ನು ಪೂರೈಸಿರುವ ಕಮಲ್ ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ.
60 ವರ್ಷಗಳ ತಮ್ಮ ಚಿತ್ರ ಬದುಕಿನಲ್ಲಿ ಕಮಲ್ ಹಾಸನ್ ನಟನೆಯ ಉನ್ನತಿಗೆ ತಲುಪಿದವರು. ಇದರ ಸವಿನೆನಪಿಗಾಗಿ ಇತ್ತೀಚಿಗೆ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿರಜನಿಕಾಂತ್, ಇಳಯರಾಜ, ದೇವಿಶ್ರೀಪ್ರಸಾದ್, ಎ.ಆರ್ ರೆಹಮಾನ್ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಿದ್ದರು.
ರಾಜಕೀಯ ಪಕ್ಷವನ್ನು ಕಟ್ಟಿರುವ ಕಮಲ್ ರಾಜಕಾರಣದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.