ನಟಿ ಅಮೂಲ್ಯ ಅವರು ಮಂಗಳವಾರ ಅವಳಿ ಗಂಡು ಮಕ್ಕಳಿಗೆ ಜನ್ಮನೀಡಿದ್ದಾರೆ. ‘ಮಕ್ಕಳು ಹಾಗೂ ತಾಯಿ ಆರೋಗ್ಯವಾಗಿದ್ದಾರೆ’ ಎಂದು ಅಮೂಲ್ಯ ಅವರ ಪತಿ ಜಗದೀಶ್ ಆರ್. ಚಂದ್ರ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಜಗದೀಶ್, ‘ಮಹಾಶಿವರಾತ್ರಿಯ ಪುಣ್ಯ ದಿನದಂದು ಅವಳಿ ಮಕ್ಕಳೊಂದಿಗೆ ಅಮೂಲ್ಯ ಆಶೀರ್ವದಿಸಲ್ಪಟ್ಟಿದ್ದಾರೆ. ಶಿವರಾತ್ರಿಯ ಶುಭ ದಿನದಂದು ಮಹಾದೇವನ ಆಶೀರ್ವಾದವಾಗಿದ್ದು ಸಂತೋಷ ತಂದಿದೆ. ತಾಯಿ ಮತ್ತು ಮಕ್ಕಳಿಬ್ಬರೂ ಸಂಪೂರ್ಣವಾಗಿ ಆರೋಗ್ಯದಿಂದಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಹೃತ್ಪೂರ್ವಕ ಧನ್ಯವಾದಗಳು. ಸದಾ ನಮ್ಮ ಮೇಲೆ ನಿಮ್ಮ ಶುಭ ಹಾರೈಕೆಗಳಿರಲಿ’ ಎಂದಿದ್ದಾರೆ.
ಇತ್ತೀಚೆಗಷ್ಟೇ ಸೀಮಂತ ಕಾರ್ಯಕ್ರಮದ ಫೋಟೊಗಳನ್ನು ಅಮೂಲ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಚಂದನವನದ ಹಲವು ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘ಚೆಲುವಿನ ಚಿತ್ತಾರ’ ಸಿನಿಮಾ ಮುಖಾಂತರ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದ ಅಮೂಲ್ಯ, ನಂತರದಲ್ಲಿ ಹಲವು ಖ್ಯಾತ ನಟರೊಂದಿಗೆ ತೆರೆಹಂಚಿಕೊಂಡಿದ್ದರು. ಮದುವೆಯ ನಂತರ ಸಿನಿಮಾದಿಂದ ಕೊಂಚ ದೂರ ಉಳಿದಿದ್ದ ಅಮೂಲ್ಯ, ಗಣೇಶ್ ಅಭಿನಯಿಸಿದ್ದ ‘ಮುಗುಳುನಗೆ’ ಸಿನಿಮಾದಲ್ಲಿ ಪಾತ್ರವೊಂದನ್ನು ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.