ಹೊಸ ನಿರ್ಮಾಣ ಸಂಸ್ಥೆಗಳು ಒಟ್ಟಿಗೆ ಮೂರು–ನಾಲ್ಕು ಸಿನಿಮಾಗಳನ್ನು ಘೋಷಿಸುವ ಹೊಸ ಟ್ರೆಂಡ್ ಸದ್ಯ ಸ್ಯಾಂಡಲ್ವುಡ್ನಲ್ಲಿ ಶುರುವಾಗಿದೆ. ನಿರ್ಮಾಪಕ ಕಮಲ್ರಾಜ್ ಕೂಡ ತಮ್ಮ ನೂತನ ನಿರ್ಮಾಣ ಸಂಸ್ಥೆ ಮೂಲಕ ಒಂದೇ ಸಲ ಮೂರು ಚಿತ್ರಗಳನ್ನು ಘೋಷಿಸಿದ್ದಾರೆ. ವಿ.ನಾಗೇಂದ್ರಪ್ರಸಾದ್, ಉಮೇಶ್ ಬಣಕಾರ್, ನಿರ್ದೇಶಕರಾದ ಸಾಯಿಪ್ರಕಾಶ್, ರವಿ ಶ್ರೀವತ್ಸ, ನಟಿ ಪ್ರಿಯಾಂಕ ಉಪೇಂದ್ರ ಇತ್ತೀಚೆಗಷ್ಟೇ ಈ ಹೊಸ ಚಿತ್ರಗಳ ಪೋಸ್ಟರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.
‘ಮೊಹಬ್ಬತ್ ಜಿಂದಾಬಾದ್’, ‘ಟಾಸ್ಕ್’ ಹಾಗೂ ‘ನಾಳೆ ನಮ್ಮ ಭರವಸೆ’ ಸೆಟ್ಟೇರಿರುವ ಹೊಸ ಚಿತ್ರಗಳು. ‘ಈ ಮೊದಲು ‘ದಿ ಸೂಟ್’ ಚಿತ್ರದಲ್ಲಿ ನಟಿಸಿದ್ದೆ. ಹೀಗಾಗಿ ಈ ಮೂರು ಚಿತ್ರಗಳಿಗೆ ಬಂಡವಾಳ ಹೂಡುವುದರ ಜತೆಗೆ ನಟಿಸುತ್ತೇನೆ. ಈಗಾಗಲೇ ಮೂರು ಸಿನಿಮಾ ಶೂಟಿಂಗ್ ನಡೆಯುತ್ತಿದ್ದು, ಡಿಸೆಂಬರ್ ವೇಳೆಗೆ ಬಿಡುಗಡೆ ಮಾಡುವ ಯೋಜನೆಯಿದೆ. ಈ ಚಿತ್ರಗಳಲ್ಲಿ ನಾನು ಲವರ್ಬಾಯ್, ಡಿಟೆಕ್ಟಿವ್ ಮುಂತಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದೇನೆ. ‘ಟಾಸ್ಕ್’ ಚಿತ್ರವನ್ನು ಐದು ಜನ ನಿರ್ದೇಶನ ಮಾಡಲಿದ್ದಾರೆ. ಆ ಪೈಕಿ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಒಂದು ಕಥೆಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ’ ಎಂದರು ಕಮಲ್.
‘ಕಮಲ್ಗೆ ಸಿನಿಮಾ ಮೇಲೆ ಅತಿಯಾದ ಗೀಳಿದೆ. ಹಾಗಿದ್ದರೇನೇ ಏನಾದರೂ ಸಾಧಿಸಲು ಸಾಧ್ಯ. ಅವರ ಆಸಕ್ತಿ, ಉತ್ಸಾಹ ನೋಡಿದರೆ ತುಂಬಾ ಖುಷಿಯಾಗುತ್ತಿದೆ. ನಿರ್ಮಾಣ ಸಂಸ್ಥೆಯಿಂದ ಮತ್ತಷ್ಟು ಹೊಸ ಪ್ರತಿಭೆಗಳು ಹೊರಬರಲಿ’ ಎಂದು ವಿ.ನಾಗೇಂದ್ರಪ್ರಸಾದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.