‘ನವರಸ ನಾಯಕ’ ಜಗ್ಗೇಶ್ ಅಭಿನಯದ ‘ರಂಗನಾಯಕ’ ಸಿನಿಮಾ ತೆರೆಗೆ ಬಂದಿದೆ. ಜಗ್ಗೇಶ್–ಗುರುಪ್ರಸಾದ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ರಚಿತಾ ಮಹಾಲಕ್ಷ್ಮಿ ‘ರಂಗನಾಯಕ’ನಿಗೆ ಜೋಡಿಯಾಗಿದ್ದಾರೆ.
ಸಕಲೇಶಪುರದ ರಚಿತಾ, ಕನ್ನಡ ಹಾಗೂ ತಮಿಳು ಕಿರುತೆರೆಯಲ್ಲಿ ನಟಿಸಿದ ಅನುಭವ ಹೊಂದಿದ್ದಾರೆ. ಇದು ಅವರ ಚೊಚ್ಚಲ ಕನ್ನಡ ಸಿನಿಮಾ. ‘ಹಳೆಕಾಲದ ಹಾಡುಗಳನ್ನು ಕೇಳುವ ಹುಚ್ಚು ಎಲ್ಲರಿಗೂ ಇರುತ್ತದೆ. ಆ ಕಾಲದ ನಾಯಕಿಯಾಗಿ ನಟಿಸುವ ಆಸೆ ನನಗಿತ್ತು. ಇದು ‘ರಂಗನಾಯಕ’ನಲ್ಲಿ ನನಸಾಗಿದೆ. ಮೊದಲ ಸಿನಿಮಾದಲ್ಲೇ ಜಗ್ಗೇಶ್ ಅವರ ಜೊತೆ ನಟಿಸುವ ಅವಕಾಶ ಲಭಿಸಿದೆ. ಇದು ಎಲ್ಲ ಸಿನಿಮಾಗಳಂತಿಲ್ಲ. ನಮ್ಮನ್ನು ಹಳೆಯ ಕಾಲಕ್ಕೆ ಕರೆದೊಯ್ಯುತ್ತದೆ. ನನಗೆ ನಾಯಕಿಯಾಗಿ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಬದಲಾಗಿ ಅಭಿನೇತ್ರಿಯಾಗಿ ಗುರುತಿಸಿಕೊಳ್ಳಲು ಇಷ್ಟಪಡುತ್ತೇನೆ’ ಎನ್ನುತ್ತಾರೆ ರಚಿತಾ.
2006ರಲ್ಲಿ ‘ಮಠ’ ಸಿನಿಮಾ ಹಾಗೂ 2009ರಲ್ಲಿ ‘ಎದ್ದೇಳು ಮಂಜುನಾಥ’ ಬಿಡುಗಡೆಯಾಗಿತ್ತು. ಇದಾಗಿ 15 ವರ್ಷಗಳ ಬಳಿಕ ಗುರುಪ್ರಸಾದ್–ಜಗ್ಗೇಶ್ ಜೋಡಿ ಮತ್ತೆ ಒಂದಾಗಿ ತೆರೆಗೆ ಬಂದಿದೆ. ‘ಪುಷ್ಪಕ ವಿಮಾನ’ ನಿರ್ಮಾಪಕ ವಿಖ್ಯಾತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಚೈತ್ರಾ ಕೊಟ್ಟೂರು, ಎಂ.ಕೆ.ಮಠ ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಸಾಮ್ರಾಟ್ ಅಶೋಕ್ ಗೌತಮ್ ಅವರ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.