ADVERTISEMENT

Kannada Movies | ಈ ವಾರ ಎಂಟು ಚಿತ್ರಗಳು ತೆರೆಗೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2025, 23:30 IST
Last Updated 27 ನವೆಂಬರ್ 2025, 23:30 IST
<div class="paragraphs"><p>ಚಂದನ್‌, ನಿಮಿಕಾ</p></div>

ಚಂದನ್‌, ನಿಮಿಕಾ

   

ಡಿಸೆಂಬರ್‌ನಲ್ಲಿ ದರ್ಶನ್‌ ನಟನೆಯ ‘ಡೆವಿಲ್‌’, ಸುದೀಪ್‌ ನಟನೆಯ ‘ಮಾರ್ಕ್‌’ ಹಾಗೂ ಉಪೇಂದ್ರ, ಶಿವರಾಜ್‌ಕುಮಾರ್‌ ಹಾಗೂ ರಾಜ್‌ ಬಿ.ಶೆಟ್ಟಿ ನಟಿಸಿರುವ ‘45’ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ಸಣ್ಣ ಬಜೆಟ್‌ ಸಿನಿಮಾಗಳು ಈ ಅವಧಿಯಲ್ಲಿ ತೆರೆಗೆ ಬರಲು ಹಿಂದೇಟು ಹಾಕಿವೆ. ಹೀಗಾಗಿಯೇ ನವೆಂಬರ್‌ನಲ್ಲಿ ಕಳೆದ ಮೂರು ಶುಕ್ರವಾರಗಳಲ್ಲಿ 20ಕ್ಕೂ ಅಧಿಕ ಕನ್ನಡ ಸಿನಿಮಾಗಳು ತೆರೆಕಂಡಿವೆ. ಗುರುವಾರ(ನ.27) ‘ಬ್ಯಾಂಕ್‌ ಆಫ್‌ ಭಾಗ್ಯಲಕ್ಷ್ಮಿ’ ತೆರೆಕಂಡಿದ್ದು, ಇಂದು(ನ.28) ಮತ್ತೆ ಎಂಟು ಕನ್ನಡ ಸಿನಿಮಾಗಳು ಈ ಪಟ್ಟಿಗೆ ಸೇರ್ಪಡೆಯಾಗುತ್ತಿವೆ.

ನಾಯಿ ಇದೆ ಎಚ್ಚರಿಕೆ

ಕಲಿ ಗೌಡ ನಿರ್ದೇಶನದ ಈ ಚಿತ್ರದ ಪ್ರಮುಖಪಾತ್ರದಲ್ಲಿ ಲೀಲಾ ಮೋಹನ್ ಪಿವಿಆರ್ ನಟಿಸಿದ್ದಾರೆ. ಲಾವಣ್ಯ ಗದೆ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕಲಿ ಗೌಡ ಈ ಹಿಂದೆ ‘ತನಿಖೆ’ ಎಂಬ ಚಿತ್ರ ನಿರ್ದೇಶಿಸಿದ್ದರು. ಹಾರಾರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ನಾಯಿ ಹಾಗೂ ಮನುಷ್ಯನ ಬಾಂಧವ್ಯದ ಕುರಿತು ಕಥೆಯಿದೆ. ಕನ್ನಡದಲ್ಲಿ ತೀರ ಅಪರೂಪ ಎನ್ನಬಹುದಾದ ಝಾಂಬಿ ಚಿತ್ರ ಇದಾಗಿದೆ. ಪ್ರಮೋದ್ ಶೆಟ್ಟಿ, ಬಲ ರಾಜವಾಡಿ, ದಿವ್ಯಶ್ರೀ, ಮಾನಸ ಗೌಡ, ದಿನೇಶ್ ಮಂಗಳೂರು, ನಾಗೇಂದ್ರ ಅರಸ್, ಜಗಪ್ಪ, ಅನಿರುದ್ಧ್ ಮಹೇಶ್, ಪ್ರಬಿಕ್ ಮೊಗವೀರ್, ಚಂದನ, ರಿಷಿ, ಸೀನು ಮುಂತಾದವರು ತಾರಾಬಳಗದಲ್ಲಿದ್ದಾರೆ‌. ಎ.ಜೆ.ಕುಮಾರ್ ಛಾಯಾಚಿತ್ರಗ್ರಹಣ ಹಾಗೂ ರವೀಶ್ ಆತ್ಮರಾಮ್ ಸಂಕಲನ ಚಿತ್ರಕ್ಕಿದೆ.

ADVERTISEMENT

ಪಾಠಶಾಲಾ

ಇದು ‘ಗ್ಯಾಪಲ್ಲೊಂದು ಸಿನಿಮಾ’, ‘ಓಮಿನಿ’ ಚಿತ್ರ ನಿರ್ದೇಶಿಸಿದ್ದ ಹೆದ್ದೂರ್ ಮಂಜುನಾಥ್ ಶೆಟ್ಟಿ ನಿರ್ದೇಶಿಸಿರುವ ಸಿನಿಮಾ. ಎಂ.ಎಸ್‌.ಸ್ಕ್ವ್ಯಾರ್‌ ಮೂವೀಸ್‌ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಚಿತ್ರೀಕರಣಗೊಂಡಿರುವ ಈ ಸಿನಿಮಾದಲ್ಲಿ ನಲವತ್ತಕ್ಕೂ ಅಧಿಕ ಮಕ್ಕಳು ನಟಿಸಿದ್ದಾರೆ. ಬಾಲಾಜಿ ಮನೋಹರ್, ಸುಧಾಕರ್ ಬನ್ನಂಜೆ, ಕಿರಣ್ ನಾಯಕ್, ನಟನ ಪ್ರಶಾಂತ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ಕೆಲ ದಶಕಗಳ ಹಿಂದೆ ಶಿಕ್ಷಕರು ಹಾಗೂ ಮಕ್ಕಳ ನಡುವೆ ಇದ್ದ ಸಂಬಂಧದ ಸುತ್ತ ಚಿತ್ರದ ಕಥಾಹಂದರವಿದೆ. ವಿಕಾಸ್ ವಸಿಷ್ಠ ಸಂಗೀತ ನಿರ್ದೇಶನ, ಜೀವನ್ ಗೌಡ ಛಾಯಾಚಿತ್ರಗ್ರಹಣ ಹಾಗೂ ಉಮೇಶ್ ಆರ್‌.ಬಿ. ಸಂಕಲನ ಚಿತ್ರಕ್ಕಿದೆ.

ಇವುಗಳ ಜೊತೆಗೆ ‘ತಂತ್ರ’ ಹಾಗೂ ‘ಆಚಾರ್ಯ ಶ್ರೀಶಂಕರ’ ಎಂಬ ಸಿನಿಮಾಗಳೂ ತೆರೆಕಾಣುತ್ತಿವೆ. ನ.28ರಂದು ತೆರೆಕಾಣಬೇಕಿದ್ದ ರಿಶಿತ್ ಶೆಟ್ಟಿ ನಿರ್ದೇಶನದ, ರಿತ್ವಿಕ್ ಮಠದ್ ಹಾಗೂ ಚೈತ್ರಾ ಜೆ.ಆಚಾರ್‌ ನಟಿಸಿರುವ ‘ಮಾರ್ನಮಿ’ ಸಿನಿಮಾವನ್ನು ಚಿತ್ರತಂಡ ಮುಂದೂಡಿದೆ. 

ರಜನಿ ಭಾರದ್ವಾಜ್

GST

ನಟ ಸೃಜನ್‌ ಲೋಕೇಶ್‌ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ. ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್‌ನಡಿ ಸಂದೇಶ್‌ ನಾಗರಾಜ್‌ ನಿರ್ಮಾಣ ಮಾಡಿದ್ದಾರೆ. ‘ಘೋಸ್ಟ್ಸ್‌ ಇನ್‌ ಟ್ರಬಲ್‌’ ಎನ್ನುವ ಅಡಿಬರಹ ಚಿತ್ರಕ್ಕಿದ್ದು, ಇದುವೇ ಚಿತ್ರದ ಕಥಾಹಂದರವನ್ನು ತಿಳಿಸಿದೆ. ನಿರ್ದೇಶನದ ಜೊತೆಗೆ ನಾಯಕನಾಗಿಯೂ ಸೃಜನ್‌ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಗಿರಿಜಾ ಲೋಕೇಶ್, ಸೃಜನ್ ಲೋಕೇಶ್ ಹಾಗೂ ಸೃಜನ್ ಅವರ ಪುತ್ರ ಸುಕೃತ್ ಅಭಿನಯಿಸಿದ್ದಾರೆ. ಸೃಜನ್ ಲೋಕೇಶ್‌ಗೆ ನಾಯಕಿಯಾಗಿ ರಜನಿ ಭಾರದ್ವಾಜ್ ನಟಿಸಿದ್ದಾರೆ. ಶೋಭರಾಜ್‌, ಶರತ್ ಲೋಹಿತಾಶ್ವ, ನಿವೇದಿತಾ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನಯ ಪ್ರಸಾದ್‌ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನಿರ್ದೇಶನ ಹಾಗೂ ಗುಂಡ್ಲುಪೇಟೆ ಸುರೇಶ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.

ಮೇಘಾ ಶೆಟ್ಟಿ

ಆಪರೇಷನ್‌ ಲಂಡನ್‌ ಕೆಫೆ

ಕನ್ನಡ, ಮರಾಠಿ ಹಾಗೂ ಹಿಂದಿ ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದ್ದು, ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಗುರುತಿಸಿಕೊಂಡು, ಬಳಿಕ ‘ತ್ರಿಬಲ್‌ ರೈಡಿಂಗ್‌’, ‘ದಿಲ್‌ಪಸಂದ್‌’, ‘ಕೈವ’ ಸಿನಿಮಾಗಳಲ್ಲಿ ನಟಿಸಿರುವ ಮೇಘಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಜಿಲ್ಕಾ’ ಸಿನಿಮಾದಲ್ಲಿ ನಟಿಸಿದ್ದ ಕವೀಶ್ ಶೆಟ್ಟಿ ಈ ಸಿನಿಮಾದಲ್ಲಿ ನಕ್ಸಲೈಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸಿದ್ದಾರೆ. ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗಿರುವ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ್ ಪ್ರಕಾಶ್ ನಿರ್ಮಾಣ ಮಾಡಿದ್ದಾರೆ.

ಬಿಚ್ಚುಗತ್ತಿಯ ಬಂಟನ ಬಲ್ಲರೇನ

‘ದುಡಿಯ ಸದ್ದಿಗೆ ಕ್ರಾಂತಿಯು ಎದ್ದಿದೆ’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ದೋರಸಮುದ್ರ ಪಿಕ್ಚರ್ಸ್‌ ಬ್ಯಾನರ್ ಅಡಿಯಲ್ಲಿ ಅನಿಲ್ ದೋರಸಮುದ್ರ ನಿರ್ದೇಶನ ಮಾಡಿದ್ದಾರೆ. ಅವರೇ ಸಿನಿಮಾಗೆ ಬಂಡವಾಳ ಹೂಡಿದ್ದು, ನವೀನ್ ಸಿಂಬಾವಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ‘ಈ ಸಿನಿಮಾ ‘ಚೋಮನದುಡಿ’ಯ ಮುಂದುವರಿದ ಭಾಗ ಎನ್ನಬಹುದು. ಚೋಮ ಹೋರಾಟ ಮಾಡಿದರೂ ಭೂಮಿ ಸಿಗುವುದಿಲ್ಲ. ಆತನ ಮಗ ಕಾಳ ನ್ಯಾಯಕ್ಕಾಗಿ ತೀವ್ರಗಾಮಿಯಾಗಿ ಬಿಚ್ಚುಗತ್ತಿಯನ್ನು ಉಪಯೋಗಿಸಿದಾಗ ಏನಾಗುತ್ತದೆ. ಅಂತಿಮವಾಗಿ ಅಪ್ಪನ ಆಸೆಯನ್ನು ಕಾಳ ಮತ್ತು ಬೆಳ್ಳಿ ಈಡೇರಿಸಿಕೊಳ್ಳುತ್ತಾರಾ ಎಂಬುದನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಚೋಮನ ಪಾತ್ರ ಶೇಕಡ ಇಪ್ಪತ್ತರಷ್ಟು ಬರುತ್ತದೆಂದು’ ಹೇಳುತ್ತಾರೆ ಅನಿಲ್ ದೊರಸಮುದ್ರ. ಚೆಲುವರಾಜ್‌ಗೌಡ, ಬಾಸುಮ ಕೊಡಗು, ಸ್ವೀಡಲ್ ಡಿಸೋಜಾ, ಶೈಲೇಶ್ ಕೆಂಗೇರಿ, ತಾರಾನಾಥ ಬೋಳಾರ್, ಪುಣ್ಯ ಕೋಟ್ಯಾನ್, ಗೋಪಾಲ್ ಮೂಲ್ಯ ಮುಂತಾದವರು ತಾರಾಬಳಗದಲ್ಲಿ ಇದ್ದಾರೆ.

ಫ್ಲರ್ಟ್‌

ನಟ ಚಂದನ್‌ ಕುಮಾರ್‌ ನಿರ್ದೇಶಿಸಿ, ನಟಿಸಿರುವ ಸಿನಿಮಾ ಇದಾಗಿದೆ. ಎವರೆಸ್ಟ್ ಪಿಕ್ಚರ್ಸ್ ಮೂಲಕ ನಿರ್ಮಾಣದಲ್ಲೂ ಚಂದನ್‌ ಕೈಜೋಡಿಸಿದ್ದಾರೆ. ‘ಎ ಪ್ಯೂರ್ ಡವ್ ಸ್ಟೋರಿ’ ಎಂಬ ಅಡಿಬರಹವಿರುವ ಈ ಸಿನಿಮಾದಲ್ಲಿ ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ನಾಯಕಿಯರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ನ್ಯಾಯಾಧೀಶರಾಗಿ ನಟ ಅವಿನಾಶ್ ನಟಿಸಿದ್ದು, ಶೃತಿ, ಸಾಧು ಕೋಕಿಲ, ಗಿರೀಶ್ ಶಿವಣ್ಣ, ವಿನಯ್ ಗೌಡ ತಾರಾಬಳಗದಲ್ಲಿದ್ದಾರೆ. ನಕುಲ್ ಅಭಯಂಕರ್ ಹಾಗೂ ಜಸ್ಸಿ ಗಿಫ್ಟ್ ಚಿತ್ರದ ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸಿನಿಮಾಗೆ ಎಚ್.ಸಿ.ವೇಣು ಛಾಯಾಚಿತ್ರಗ್ರಹಣವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.