'ಕಾಂತಾರ ಚಾಪ್ಟರ್ 1' ಸೆಟ್
ಈ ವರ್ಷದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾದ ನಟ ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿ
ರುವ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ನ ಶೂಟಿಂಗ್ ಪೂರ್ಣಗೊಂಡಿದೆ. ಈ ವಿಷಯವನ್ನು ವಿಡಿಯೊವೊಂದರ ಮುಖಾಂತರ ಈ ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಅಧಿಕೃತವಾಗಿ ತಿಳಿಸಿದೆ.
ಸಿನಿಮಾದ ಚಿತ್ರೀಕರಣಕ್ಕಾಗಿ ಚಿತ್ರತಂಡ ಹಾಕಿದ ಶ್ರಮ ಮತ್ತು ಇಡೀ ಸಿನಿಮಾದ ಅದ್ಧೂರಿ
ತನವನ್ನು ಈ ವಿಡಿಯೊ ತಿಳಿಸಿದೆ. ಸಿನಿಮಾಗಾಗಿ ಹೊಂಬಾಳೆ ಫಿಲ್ಮ್ಸ್ ನೂರಾರು ಕೋಟಿ ವ್ಯಯಿಸಿದೆ. ಅ.2ರಂದು ‘ಕಾಂತಾರ ಒಂದು ದಂತಕಥೆ ಅಧ್ಯಾಯ 1’ ಬಿಡುಗಡೆಯಾಗುತ್ತಿದ್ದು, ಈ ವಿಡಿಯೊ ಮುಖಾಂತರ ‘ಕಾಂತಾರ’ ಪ್ರೀಕ್ವೆಲ್ನ ಕುತೂಹಲವನ್ನು ರಿಷಬ್ ಶೆಟ್ಟಿ ತಣಿಸಿದ್ದಾರೆ. ಇತ್ತೀಚೆಗೆ ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಪಾತ್ರದ ಪೋಸ್ಟರ್ ಬಿಡುಗಡೆಗೊಂಡಿತ್ತು.
ಕದಂಬರ ಆಳ್ವಿಕೆಯ ಕಾಲದಲ್ಲಿ ಹುಟ್ಟಿದ ದಂತಕಥೆಯ ಕಥಾಹಂದರ ಹೊಂದಿರುವ ಈ ಸಿನಿಮಾ ಹೀಗಿರಲಿದೆ ಎನ್ನುವ ಸಣ್ಣ ಸುಳಿವನ್ನು ಈ ವಿಡಿಯೊ ಮೂಲಕ ಬಿಚ್ಚಿಡಲಾಗಿದೆ. ಸಿನಿಮಾಗಾಗಿ ಒಂದು ಹೊಸ ಲೋಕವನ್ನೇ ರಿಷಬ್ ಸೃಷ್ಟಿಸಿದ್ದಾರೆ. ವಿಡಿಯೊದಲ್ಲಿ ಆ ಊರಿನ ತುಣುಕುಗಳನ್ನು ತೋರಿಸಿದ್ದಾರೆ. ತನ್ನ ಕನಸು ಸಿನಿಮಾವಾಗಿ ರೂಪುಗೊಂಡ ಬಗೆಯನ್ನು ಇದರಲ್ಲಿ ವಿವರಿಸಿದ್ದಾರೆ.
ಕುಂದಾಪುರ ಬಳಿ 25 ಎಕರೆ ಪ್ರದೇಶದಲ್ಲಿ ಬೃಹತ್ ಸೆಟ್ ಹಾಕಿ ಈ ಸಿನಿಮಾದ ಕಾಲ್ಪನಿಕ ಊರನ್ನು ಸೃಷ್ಟಿಸ
ಲಾಗಿತ್ತು. ಬಹುತೇಕ ಕಾಡಿನಲ್ಲೇ ಈ ಚಿತ್ರದ ಚಿತ್ರೀಕರಣ ನಡೆದಿದೆ. ಸಾವಿರಾರು ಜೂನಿಯರ್ ಆರ್ಟಿಸ್ಟ್ಗಳು ಇದರಲ್ಲಿ ಭಾಗಿಯಾಗಿದ್ದಾರೆ. ಕೃತಕವಾಗಿ ಸೃಷ್ಟಿಸಿದ ದೇವಸ್ಥಾನ, ಕಾಡಿನಲ್ಲಿ ವಾಸಿಸುವ ಜನರ ನಂಬಿಕೆ, ಆಚರಣೆ, ಹಳ್ಳಿಯ ಸಂತೆ, ಕೋಟೆ, ಸಾವಿರಾರು ಸೈನಿಕರು, ಯುದ್ಧ, ಬೃಹತ್ ಹಡಗು ಹೀಗೆ ಕನ್ನಡ ಚಿತ್ರರಂಗದಲ್ಲಿ ಹಿಂದೆಂದೂ ಕಾಣಸಿಗದ ಬೃಹತ್ ಲೋಕವನ್ನೇ ಇಲ್ಲಿ ಸೃಷ್ಟಿಸಲಾಗಿದೆ.
ಈ ಸಿನಿಮಾಗಾಗಿ ಹತ್ತು ಕೆ.ಜಿ. ಏರಿಸಿಕೊಂಡು, ಎಂಟು ಕೆ.ಜಿ. ಇಳಿಸಿಕೊಂಡಿದ್ದರು ರಿಷಬ್. ಸಿನಿಮಾದಲ್ಲಿ ಹೆಚ್ಚಿನ ಪ್ರಮಾಣದ ಆ್ಯಕ್ಷನ್ಸ್ ಇದ್ದು, ತಮ್ಮ ಪಾತ್ರಕ್ಕಾಗಿ ರಿಷಬ್ ಭರ್ಜರಿಯಾಗಿಯೇ ತಯಾರಾಗಿದ್ದರು. ಇದರ ತುಣುಕುಗಳೂ ಇಲ್ಲಿವೆ. ಕಳರಿಪಯಟ್ಟು ತರಬೇತಿ, ಜಿಮ್ನಲ್ಲಿ ಕಸರತ್ತು ನಡೆಸುತ್ತಿರುವ ರಿಷಬ್ ತಮ್ಮ ಪಾತ್ರಕ್ಕಾಗಿ ತಯಾರಾದ ಬಗೆಯನ್ನು ತೋರಿಸಲಾಗಿದೆ. ಬೇರೆ ಯಾವ ಕಲಾವಿದರಿದ್ದಾರೆ ಎನ್ನುವ ಗುಟ್ಟು ಇಲ್ಲಿ ಬಿಟ್ಟುಕೊಟ್ಟಿಲ್ಲ. ದೈವದ ಮೇಲಿನ ತಮ್ಮ ನಂಬಿಕೆಯನ್ನು ರಿಷಬ್ ಇಲ್ಲಿ ಪ್ರಕಟಿಸಿದ್ದಾರೆ. ದೈವದ ಆಶೀರ್ವಾದವೂ ರಿಷಬ್ಗೆ ದೊರಕಿದೆ.
ಚಿತ್ರೀಕರಣದ ಸಂದರ್ಭದಲ್ಲಿ ಎದುರಾದ ಸಮಸ್ಯೆಗಳು, ಅವಘಡಗಳನ್ನು ಉಲ್ಲೇಖಿಸುತ್ತಾ, ತಾನು ನಂಬಿದ ದೈವ ಕೈಬಿಡಲಿಲ್ಲ ಎನ್ನುವುದನ್ನು ರಿಷಬ್ ಉಲ್ಲೇಖಿಸಿದ್ದಾರೆ.
ಚಿತ್ರೀಕರಣದ ವೇಳೆ ಸೆಟ್ಗೆ ಬೆಂಕಿ ಬಿದ್ದ ಘಟನೆಯನ್ನು ಇಲ್ಲಿ ತೋರಿಸಲಾಗಿದೆ. ಕ್ರೇನ್ಗಳನ್ನು ಬಳಸಿ ನಡೆಸಿದ ಸಾಹಸ ದೃಶ್ಯಗಳ ಚಿತ್ರೀಕರಣದ ಗ್ಲಿಮ್ಸ್ ಇಲ್ಲಿದೆ. ತೆಲುಗಿನ ಹಿಟ್ ಸಿನಿಮಾ ‘ಆರ್ಆರ್ಆರ್’ನ ಆ್ಯಕ್ಷನ್ ನಿರ್ದೇಶಕ
ರಾಗಿದ್ದ ಟೊಡರ್ ಲ್ಯಾಜರೋವ್ ಜೊತೆಗೂಡಿ ರಿಷಬ್ ಸಾಹಸ ಸನ್ನಿವೇಶ
ಗಳನ್ನು ರೂಪಿಸುತ್ತಿರುವುದೂ ಸೆರೆಯಾಗಿದೆ. ಚಿತ್ರದಲ್ಲಿ ವಸ್ತ್ರವಿನ್ಯಾಸಕಿ
ಯಾಗಿ ರಿಷಬ್ ಅವರ ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಅವರೇ ಕಾರ್ಯನಿರ್ವಹಿಸಿದ್ದಾರೆ.
ಮುಖ್ಯವಾಗಿ ಚಿತ್ರದ ಛಾಯಾಚಿತ್ರಗ್ರಾಹಕ ಅರವಿಂದ್ ಕಶ್ಯಪ್ ಇಡೀ ಸಿನಿಮಾವನ್ನು ಹೇಗೆ ಸೆರೆಹಿಡಿದಿದ್ದಾರೆ ಎನ್ನುವುದರ ಸಣ್ಣ ಝಲಕ್ ಈ ವಿಡಿಯೊ ಮುಖಾಂತರ ಬಹಿರಂಗವಾಗಿದೆ. ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್, ಪ್ರೊಡಕ್ಷನ್ ಡಿಸೈನರ್ ವಿನೇಶ್ ಬಂಗ್ಲನ್ ಇಡೀ ಸಿನಿಮಾಗೆ ಅದ್ಭುತ ದೃಶ್ಯ ಮತ್ತು ಭಾವನಾತ್ಮಕ ಸ್ಪರ್ಶ ನೀಡಿದ್ದಾರೆ. ಭಾರತದ ಗಡಿ ದಾಟಿ ಹೆಜ್ಜೆ ಇಡಲಿರುವ ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವುದು ನಿಶ್ಚಿತ.
3000ಕ್ಕೂ ಹೆಚ್ಚು ಜೂನಿಯರ್ ಕಲಾವಿದರು ಈ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಆಸ್ಕರ್ ಪ್ರಶಸ್ತಿಯನ್ನು ಗಮನದಲ್ಲಿಟ್ಟುಕೊಂಡೇ ಈ ಸಿನಿಮಾ ತಯಾರಾಗಿದೆ. ಚಿತ್ರವು ಕನ್ನಡ, ಹಿಂದಿ, ತೆಲುಗು, ಮಲಯಾಳ, ತಮಿಳು, ಬೆಂಗಾಲಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ತೆರೆ ಕಾಣಲಿದೆ. ಪ್ರೀಕ್ವೆಲ್ ಅನ್ನು ಈಗಾಗಲೇ ಪ್ರೈಮ್ ವಿಡಿಯೊ ದೊಡ್ಡ ಮೊತ್ತಕ್ಕೆ ಖರೀದಿಸಿದೆ.
‘ಇದು ಕೇವಲ ಸಿನಿಮಾವಲ್ಲ, ಇದೊಂದು ಶಕ್ತಿ’
ವಿಡಿಯೊಗೆ ನೀಡಿದ ಹಿನ್ನೆಲೆ ಧ್ವನಿಯಲ್ಲೇ ತಮ್ಮ ಮನಸ್ಸಿನ ಮಾತನ್ನು ಆಡಿರುವ ರಿಷಬ್ ಶೆಟ್ಟಿ, ‘ನನ್ನದೊಂದು ಕನಸು. ನಮ್ಮ ಮಣ್ಣಿನ ಕಥೆಯನ್ನು ಇಡೀ ಪ್ರಪಂಚಕ್ಕೆ ಹೇಳಬೇಕು. ನಮ್ಮ ಊರು, ನಮ್ಮ ಜನ, ನಮ್ಮ ನಂಬಿಕೆಗಳು. ನಾನು ಈ ಕನಸಿನ ಬೆನ್ನುಹತ್ತಲು ಆರಂಭಿಸಿದಾಗ ಸಾವಿರಾರು ಜನ ನನ್ನ ಬೆನ್ನಿಗೆ ನಿಂತರು. ಮೂರು ವರ್ಷಗಳ ಪರಿಶ್ರಮ. ಇನ್ನೂರೈವತ್ತು ದಿನಗಳ ಚಿತ್ರೀಕರಣ. ಎಷ್ಟೇ ಕಷ್ಟಗಳು ಬಂದರೂ ನಾನು ನಂಬಿದ ದೈವ ನನ್ನ ಕೈಬಿಡಲಿಲ್ಲ. ನನ್ನ ಇಡೀ ತಂಡ, ನನ್ನ ನಿರ್ಮಾಪಕರು ಬೆನ್ನೆಲುಬಾಗಿ ನಿಂತರು. ಪ್ರತಿ ದಿನ ಸೆಟ್ನಲ್ಲಿ ಸಾವಿರಾರು ಜನರನ್ನು ನೋಡುತ್ತಿರುವಾಗ ನನ್ನನ್ನು ಕಾಡುತ್ತಿದ್ದ ವಿಷಯ ಒಂದೇ. ಇದು ಕೇವಲ ಸಿನಿಮಾವಲ್ಲ. ಇದೊಂದು ಶಕ್ತಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.