ADVERTISEMENT

ಚಿತ್ರೋದ್ಯಮದ ಕಾರ್ಮಿಕರಿಗೆ ಉಚಿತ ಅಕ್ಕಿ ವಿತರಣೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2021, 15:09 IST
Last Updated 9 ಜೂನ್ 2021, 15:09 IST
ಸಚಿವ ಉಮೇಶ್‌ ಕತ್ತಿ ಅವರಿಗೆ ಮನವಿ ನೀಡಿದ ಸುನೀಲ್‌ ಪುರಾಣಿಕ್‌
ಸಚಿವ ಉಮೇಶ್‌ ಕತ್ತಿ ಅವರಿಗೆ ಮನವಿ ನೀಡಿದ ಸುನೀಲ್‌ ಪುರಾಣಿಕ್‌   

ಬೆಂಗಳೂರು: ಕೋವಿಡ್-19 ಎರಡನೇ ಅಲೆಯನ್ನು ನಿಯಂತ್ರಿಸಲು ಜಾರಿಗೊಳಿಸಲಾಗಿರುವ ಲಾಕ್‌ಡೌನ್‌ ಕಾರಣದಿಂದ ತೀವ್ರ ಸಂಕಷ್ಟದಲ್ಲಿರುವ ಕನ್ನಡ ಚಿತ್ರೋದ್ಯಮದ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರಿಗೆ ಸರ್ಕಾರದಿಂದ ಉಚಿತ ಅಕ್ಕಿ ವಿತರಿಸುವಂತೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.

ಚಿತ್ರರಂಗದ ಇತರ ಗಣ್ಯರೊಂದಿಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಹಾಗೂ ವಾರ್ತಾ ಸಚಿವ ಸಿ.ಸಿ.ಪಾಟೀಲ್ ಅವರನ್ನು ಭೇಟಿಯಾಗಿ ಪುರಾಣಿಕ್‌ ಅವರು ಮನವಿ ಸಲ್ಲಿಸಿದರು. ‘ತೀವ್ರ ಸಂಕಷ್ಟದಲ್ಲಿರುವ ಕನ್ನಡ ಚಿತ್ರೋದ್ಯಮದವರಿಗೆ ಸರ್ಕಾರದ ವತಿಯಿಂದ ಆರ್ಥಿಕ ನೆರವು ಹಾಗೂ ಲಸಿಕೆಯನ್ನು ಪ್ರತ್ಯೇಕವಾಗಿ ವ್ಯವಸ್ಥೆ ಮಾಡಿದ್ದನ್ನು ಕನ್ನಡ ಚಿತ್ರರಂಗ ಸ್ಮರಿಸುತ್ತದೆ. ಲಾಕ್‌ಡೌನ್‌ನಿಂದಾಗಿ ಚಿತ್ರೋದ್ಯಮದ ಚಟುವಟಿಕೆಗಳು ಸ್ಥಗಿತವಾಗಿರುವುದರಿಂದ ಇಡೀ ಚಿತ್ರೋದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರೋದ್ಯಮದ ಎಷ್ಟೋ ಕಾರ್ಮಿಕರು, ತಂತ್ರಜ್ಞರು ಪಡಿತರ ಕಾರ್ಡ್‌ಗಳನ್ನೂ ಹೊಂದಿರುವುದಿಲ್ಲ. ಹೀಗಾಗಿ ಪ್ರತೀ ಕುಟುಂಬಕ್ಕೆ 25 ಕೆಜಿಯ ಒಂದು ಚೀಲದಂತೆ ಕನಿಷ್ಟ 5000 ಚೀಲ ಅಕ್ಕಿಯನ್ನು ಉಚಿತವಾಗಿ ವಿತರಿಸಿದರೆ ಅವರ ಕುಟುಂಬಗಳಿಗೆ ನೆರವಾಗಲಿದೆ’ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

ಜೊತೆಗೆ ಸರ್ಕಾರದಿಂದ ನೀಡಲಾಗುತ್ತಿರುವ ಆರ್ಥಿಕ ನೆರವಿನ ಸದುಪಯೋಗ ಪಡೆದುಕೊಳ್ಳಲು ಚಿತ್ರೋದ್ಯಮಕ್ಕೆ ಪ್ರತ್ಯೇಕವಾಗಿ ಎರಡು ಸೇವಾಸಿಂಧು ಕೌಂಟರ್‌ಗಳನ್ನು ತೆರೆಯುವಂತೆ ವಾರ್ತಾ ಸಚಿವ ಸಿ.ಸಿ.ಪಾಟೀಲ್ ಅವರಲ್ಲಿ ಪುರಾಣಿಕ್‌ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಕಲಾವಿದರ ಸಂಘದ ಕಾರ್ಯದರ್ಶಿ ರಾಕ್‌ಲೈನ್ ವೆಂಕಟೇಶ್, ನಿರ್ದೇಶಕಿ ಹಾಗೂ ನಟಿ ರೂಪ ಅಯ್ಯರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.