ನಟ ಯಶ್ ನಾಯಕನಾಗಿರುವ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಶೂಟಿಂಗ್ ಹೈದರಾಬಾದ್ನಲ್ಲಿ ನಡೆಯುತ್ತಿದೆ. ಈ ಸಿನಿಮಾದ ‘ಅಧೀರ’ನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತು. ಸಂಜು ಈಗ ಶೂಟಿಂಗ್ಗೆ ಎಂಟ್ರಿ ಕೊಟ್ಟಿದ್ದಾರೆ.
ಸೂರ್ಯವರ್ಧನ್ ‘ಕೆಜಿಎಫ್ ಚಾಪ್ಟರ್ 1’ ಚಿತ್ರದ ಪ್ರಮುಖ ವಿಲನ್. ಅಧೀರ ಅವನ ಸಹೋದರ. ಮೊದಲ ಭಾಗದಲ್ಲಿ ನಿರ್ದೇಶಕರು ಅಧೀರನ ಮುಖವನ್ನು ತೋರಿಸಿರಲಿಲ್ಲ. ಹಾಗಾಗಿ, ಈ ಪಾತ್ರವನ್ನು ಯಾರು ನಿಭಾಯಿಸುತ್ತಾರೆ ಎನ್ನುವ ಬಗ್ಗೆ ಜನರಿಗೆ ಕುತೂಹಲ ಮೂಡಿಸಿತ್ತು.
ಸೂರ್ಯವರ್ಧನ್ನ ಸಾವಿನ ಬಳಿಕ ಅವನ ಪುತ್ರ ಗರುಡ ಗದ್ದುಗೆ ಏರುತ್ತಾನೆ. ಸುಫಾರಿ ಪಡೆದ ರಾಕಿ ಭಾಯ್ ಆತನನ್ನು ಹತ್ಯೆ ಮಾಡುತ್ತಾನೆ. ಅಧೀರನ ಪ್ರವೇಶವಾಗುವುದು ಚಾಫ್ಟರ್ 2ರಲ್ಲಿ. ಆತ ‘ನರಾಚಿ’ ಗಣಿಯಲ್ಲಿ ಹೇಗೆ ಅಬ್ಬರ ಎಬ್ಬಿಸಲಿದ್ದಾನೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಸಂಜಯ್ ದತ್ ಅವರ ಜನ್ಮದಿನದಂದು ಅಧೀರನ ಫಸ್ಟ್ಲುಕ್ ಬಿಡುಗಡೆಗೊಳಿಸಿ ಚಿತ್ರತಂಡ ಶುಭ ಕೋರಿತ್ತು. ಕೆಜಿಎಫ್ ಚಿತ್ರದಲ್ಲಿ ನಟಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದು ಸಂಜು ಕೂಡ ಹೇಳಿಕೊಂಡಿದ್ದರು. ಈ ಅವರು ‘ಅಧೀರ’ನಾಗಿ ಎಂಟ್ರಿ ಕೊಡುವುದರೊಂದಿಗೆ ಎಪಿಕ್ ಜರ್ನಿ ಹೇಗೆ ಮುಗಿಯುತ್ತದೆ ಎನ್ನುವ ಸನ್ನಿವೇಶದ ಚಿತ್ರೀಕರಣ ನಡೆಸಲಾಗುತ್ತಿದೆ ಎಂದು ಪ್ರಶಾಂತ್ ನೀಲ್ ಟ್ವೀಟ್ನಲ್ಲಿ ಹಂಚಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.