ಹೊಂಬಾಳೆ ಪ್ರೊಡಕ್ಷನ್ಸ್ನಡಿ ವಿಜಯ್ ಕಿರಗಂದೂರು ನಿರ್ಮಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ‘ಕೆಜಿಎಫ್’. ಕನ್ನಡ, ಹಿಂದಿ ತೆಲುಗು, ಮಲಯಾಳ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಬಹುಕೋಟಿ ವೆಚ್ಚದ ಈ ಸಿನಿಮಾ ಅಭಿಮಾನಿಗಳಲ್ಲಿ ಕತೂಹಲ ಮೂಡಿಸಿದೆ.
ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇದೇ 9ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಅದ್ಧೂರಿ ಪ್ರಚಾರ ನೀಡುವ ಸಲುವಾಗಿ ಹೊಂಬಾಳೆ ಪ್ರೊಡಕ್ಷನ್ ಅಣಿಯಾಗಿದೆ.
ಸಮಾರಂಭಕ್ಕೆ ಮುಂಬೈ, ಕೇರಳ, ಆಂಧ್ರ ಮತ್ತು ತಮಿಳುನಾಡು ಸೇರಿದಂತೆ ಎಲ್ಲ ರಾಜ್ಯಗಳ ಮಾಧ್ಯಮದವರನ್ನೇ ಆಹ್ವಾನಿಸಿದೆ ಸಂಸ್ಥೆ. ಕನ್ನಡ ಸಿನಿಮಾವೊಂದರ ಪ್ರಚಾರ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಹೊರರಾಜ್ಯಗಳ ಮಾಧ್ಯಮಗಳಿಗೆ ಆಹ್ವಾನ ನೀಡಿದ ಹೆಗ್ಗೆಳಿಕೆ ‘ಕೆಜಿಎಫ್’ಗೆ ಸೇರುತ್ತದೆ.
ಕನ್ನಡದ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಜೊತೆಗೆ ವಿತರಣೆಯನ್ನೂ ಮಾಡುತ್ತಿರುವ ಸಂಸ್ಥೆ ಹೊಂಬಾಳೆ. ‘ಕೆಜಿಎಫ್’ ಸಿನಿಮಾದ ಮೂಲಕ ಯಶಸ್ವಿ ಸಿನಿಮಾವೊಂದನ್ನು ನೀಡುವ ಉತ್ಸಾಹದಲ್ಲಿದೆ.
ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾಗೆ ಭುವನ ಗೌಡ ಅವರ ಛಾಯಾಗ್ರಹಣವಿದೆ.ಯಶ್ ಜೊತೆ ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕಾ, ನಾಗಾಭರಣ, ಬಿ.ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್, ದಿನೇಶ್ ಮಂಗಳೂರ್, ಮುನಿ ಸೇರಿದಂತೆ ಇನ್ನೂ ಹಲವರ ತಾರಾಗಣ ಚಿತ್ರಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.