ಕಿಚ್ಚ ಸುದೀಪ್ ಸುದೀಪ್ ನಟನೆಯ ‘ಮ್ಯಾಕ್ಸ್’ ಚಿತ್ರ ಹಿಟ್ ಆಗಿತ್ತು. ಇದೀಗ ಅದೇ ತಂಡದೊಂದಿಗೆ ಸುದೀಪ್ ಮತ್ತೊಂದು ಚಿತ್ರ ಘೋಷಿಸಿದ್ದಾರೆ. ಇದು ಅವರ 47ನೇ ಚಿತ್ರವಾಗಿದ್ದು, ಈ ವರ್ಷವೇ ಚಿತ್ರೀಕರಣ ಮುಗಿಸಿ ಚಿತ್ರವನ್ನು ತೆರೆಗೆ ತರುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.
ಅನೂಪ್ ಭಂಡಾರಿ ಜತೆ ‘ಬಿಲ್ಲ ರಂಗ ಭಾಷಾ’ ತಮ್ಮ ಮುಂದಿನ ಚಿತ್ರವೆಂದು ಸುದೀಪ್ ಈ ಹಿಂದೆ ಹೇಳಿದ್ದರು. ಚಿತ್ರ ಈಗಾಗಲೇ ಸೆಟ್ಟೇರಿದೆ ಕೂಡ. ಅದರ ನಡುವೆಯೇ ಸುದೀಪ್ ‘ಮ್ಯಾಕ್ಸ್’ ನಿರ್ದೇಶಕ ವಿಜಯ್ ಕಾರ್ತಿಕೇಯ ಜತೆ ಕೈ ಜೋಡಿಸಿದ್ದಾರೆ. ಈ ಜೋಡಿ ಮ್ಯಾಕ್ಸ್–2ಗಾಗಿ ಒಂದಾಗಲಿದ್ದಾರೆ ಎಂಬ ಸುದ್ದಿ ಇತ್ತು. ಆದರೆ ಇದೀಗ ಆ ಯೋಜನೆ ಪಕ್ಕಕ್ಕಿಟ್ಟು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.
‘ಈ ತಿಂಗಳಿನಿಂದಲೇ ಸಿನಿಮಾ ಚಿತ್ರೀಕರಣಕ್ಕೆ ಎಲ್ಲ ಸಿದ್ಧತೆ ನಡೆದಿದೆ. ತಮಿಳಿನ ಸತ್ಯಜ್ಯೋತಿ ಫಿಲ್ಮ್ಸ್ ನಿರ್ಮಾಣ ಮಾಡುತ್ತಿದೆ. ಈ ಹಿಂದೆ ವಿಷ್ಣುವರ್ಧನ್ ಜತೆ ‘ಸತ್ಯಜ್ಯೋತಿ’ ಚಿತ್ರ ನಿರ್ಮಾಣ ಮಾಡಿದ್ದ ಸಂಸ್ಥೆ 39 ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರನಿರ್ಮಾಣಕ್ಕೆ ಕೈ ಹಾಕಿದೆ. ಆ್ಯಕ್ಷನ್, ಮಾಸ್ ಕಥೆ ಹೊಂದಿರುವ ಚಿತ್ರ. ಹಂತಹಂತವಾಗಿ ಉಳಿದ ಮಾಹಿತಿ ನೀಡುತ್ತೇವೆ’ ಎಂದರು ನಿರ್ದೇಶಕರು.
‘ಮ್ಯಾಕ್ಸ್ ನಂತರ ನಾವು ಮತ್ತೆ ಒಂದಾಗಿದ್ದೇವೆ. ಸದ್ಯಕ್ಕೆ ಮ್ಯಾಕ್ಸ್ 2 ಸಿನಿಮಾ ಕೈ ಬಿಟ್ಟಿದ್ದೇವೆ. ಈ ವರ್ಷ ಎರಡು ಸಿನಿಮಾ ಮಾಡುತ್ತೇವೆ. ‘ಬಿಲ್ಲರಂಗ ಬಾಷ’ ಸಿನಿಮಾ ಈ ವರ್ಷ ಬಿಡುಗಡೆಯಾಗುವುದಿಲ್ಲ. ಇದು ಬೃಹತ್ ಬಜೆಟ್ ಸಿನಿಮಾ. ಮೊದಲೇ ಹೇಳಿದಂತೆ ಪೂರ್ಣಗೊಳ್ಳಲು ಒಂದೂವರೆ ವರ್ಷ ಬೇಕು. ಆದರೆ 47ನೇ ಸಿನಿಮಾವನ್ನು ಇದೇ ವರ್ಷ ಡಿಸೆಂಬರ್ 25ಕ್ಕೆ ರಿಲೀಸ್ ಮಾಡುತ್ತೇವೆ. ಆರು ತಿಂಗಳಲ್ಲಿ ಚಿತ್ರೀಕರಣ ಮುಗಿಸಿ ತೆರೆಗೆ ತರುವ ಬೃಹತ್ ಯೋಜನೆ ಹಾಕಿಕೊಂಡಿದ್ದೇವೆ. ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಕೂಡ ಶುರು ಆಗಲಿದೆ. ಎಲ್ಲವನ್ನೂ ಒಟ್ಟಿಗೆ ನಿಭಾಯಿಸಬೇಕಿದೆ’ ಎಂದು ಕಿಚ್ಚ ಸುದೀಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.