
ಹುಬ್ಬಳ್ಳಿ: ‘ಭಜರಂಗಿ ಸಿನಿಮಾ ಬ್ಯಾನರ್ ಅಡಿ ನಿರ್ಮಾಣವಾದ ಕೈಟ್ ಬ್ರದರ್ಸ್ ಸಿನಿಮಾ 25ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ನ.14ರಂದು ರಾಜ್ಯದಾದ್ಯಂತ ತೆರೆ ಕಾಣಲಿದೆ’ ಎಂದು ಸಿನಿಮಾದ ನಿರ್ದೇಶಕ ವಿರೇನ್ ಸಾಗರ ಬಗಾಡೆ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಳೆಯಿಂದ ಕುಸಿದುಬಿದ್ದ ಹಳ್ಳಿಯೊಂದರಲ್ಲಿನ ಶಾಲೆಯನ್ನು ಪುನರ್ ನಿರ್ಮಿಸಲು ಇಬ್ಬರು ಮಕ್ಕಳು ಹೋರಾಡುವ ಸಾಹಸಮಯ ಕಥೆಯನ್ನು ಚಿತ್ರ ಒಳಗೊಂಡಿದೆ. ಧಾರವಾಡದಲ್ಲಿ ಶೇ 80ರಷ್ಟು ಚಿತ್ರೀಕರಣ ನಡೆದಿದ್ದು, ಉಳಿದ ಭಾಗವನ್ನು ಅಹಮದಾಬಾದ್, ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ’ ಎಂದು ತಿಳಿಸಿದರು.
‘ಪ್ರಮುಖ ಪಾತ್ರಗಳಲ್ಲಿ ಪ್ರಣೀಲ್ ನಾಡಗೀರ, ಅಭಿಷೇಕ ಮುದರಡ್ಡಿ, ಸಮರ್ಥ ಆಶಿ, ವಿನೋದ ಬಗಾಡೆ, ಅನಂತ ದೇಶಪಾಂಡೆ, ಪ್ರಭು ಹಂಚಿನಾಳ, ಅನಸೂಯಾ ಹಂಚಿನಾಳ, ಶ್ರೇಯಾ ಹರಿಹರ ಅಭಿನಯಿಸಿದ್ದಾರೆ. ವಿಜಯ ಭರಮಸಾಗರ, ಸಿಂಪಲ್ ಸುನಿ ಸಾಹಿತ್ಯದ ಮೂರು ಹಾಡುಗಳು ಚಿತ್ರದಲ್ಲಿವೆ. ಅನೀಶ್ ಚೆರಿಯನ್– ಸಂಗೀತ, ಅಶೋಕ ಕಶ್ಯಪ್– ಛಾಯಾಗ್ರಹಣ, ಸಂತೋಷ ರಾಧಾಕೃಷ್ಣನ್– ಸಂಕಲನ ಚಿತ್ರಕ್ಕಿದೆ. ಮಂಜುನಾಥ ಬಿ.ಎಸ್., ರಜನಿಕಾಂತ ರಾವ್ ದಳ್ವಿ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ’ ಎಂದು ಹೇಳಿದರು.
‘ಈಗಾಗಲೇ ಹಲವೆಡೆ ಚಿತ್ರದ ಪ್ರೀಮಿಯರ್ ಶೋ ಮಾಡಲಾಗಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹುಬ್ಬಳ್ಳಿಯ ಲಕ್ಷ್ಮಿ ಮಾಲ್ನ ಚಿತ್ರಮಂದಿರದಲ್ಲಿ ನ.12ರಂದು ಪ್ರೀಮಿಯರ್ ಶೋ ಏರ್ಪಡಿಸಲಾಗಿದೆ’ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಭು ಹಂಚಿನಾಳ, ಸಂದೇಶ ಕಡ್ಡಿ, ವಿನೋದ್ ಬಗಾಡೆ, ಅನಂತ ದೇಶಪಾಂಡೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.