ವಿಭಿನ್ನ ಕಥೆಯ ‘ಕ್ಷೇಮಗಿರಿಯಲ್ಲಿ ಕರ್ ನಾಟಕ’ ಚಿತ್ರ ಇದೇ ಶುಕ್ರವಾರ (ಡಿ. 9)ರಂದು ಬಿಡುಗಡೆಯಾಗುತ್ತಿದೆ.
‘ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಸೈಕಾಲಜಿಯಲ್ಲಿ ಮಾಸ್ಟರ್ಸ್ ಮಾಡಿರುವ ನಾನು, ಯೂರೋಪ್ನಲ್ಲಿ ನಿರ್ದೇಶನದ ಕುರಿತು ತರಬೇತಿ ಪಡೆದಿದ್ದೇನೆ. ನನ್ನ ತಾಯಿ ಮೈಕಲ್ ರಾಣಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಜೆ.ಡಿ ನಾಯಕನಾಗಿ, ಶ್ರದ್ಧಾ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ವಿನುತಾ, ನೀನಾಸಂ ಚೇತನ್ ತಾರಾಬಳಗದಲ್ಲಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾ ಶಾಲೆಯ ಪ್ರತಿಭೆಗಳು ಹೆಚ್ಚಾಗಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಒಬ್ಬ ಮನುಷ್ಯನ ಅಂತರಾಳವನ್ನು ತೆರೆದಿಡುವ ಪ್ರಯತ್ನವನ್ನು ಈ ಚಿತ್ರದಲ್ಲಿ ಮಾಡಿದ್ದೇವೆ. ಯಕ್ಷಗಾನವನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡಿದ್ದೇವೆ. ಕ್ಷೇಮಗಿರಿ ಅಂದರೆ ಊರಿನ ಹೆಸರು. ಚಿತ್ರದಲ್ಲಿ ಹತ್ತು ಹಾಡುಗಳಿವೆ. ರವಿಶಂಕರ್ ಗುಂಡ್ಮಿ ಸಂಗೀತ ನೀಡಿದ್ದಾರೆ. ವಿ.ಮನೋಹರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಗೋವಿಂದರಾಜು ಈ ಚಿತ್ರದ ಛಾಯಾಗ್ರಾಹಕರು’ ಎಂದು ನಿರ್ದೇಶಕ ಜಾನ್ ಪೀಟರ್ ರಾಜಣ್ಣ ಮಾಹಿತಿ ನೀಡಿದರು.
ನಾನು ಮೂಲತಃ ರಂಗಭೂಮಿಯವನು. ಟೆಂಟ್ ಸಿನಿಮಾ ಶಾಲೆಯಲ್ಲಿ ತರಬೇತಿ ಪಡೆದಿದ್ದೇನೆ. ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದೇನೆ ಎಂದು ನಾಯಕ ಜೆ.ಡಿ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಮುಖ್ಯಪಾತ್ರದಲ್ಲಿ ನಟಿಸಿರುವ ಬೇಬಿ ವಿನುತಾ, ನೀನಾಸಂ ಚೇತನ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.
ಹಾಡುಗಳನ್ನು ಬರೆದು ಸಂಗೀತ ನೀಡಿರುವ ರವಿಶಂಕರ್ ಗುಂಡ್ಮಿ ಸಂಗೀತದ ಬಗ್ಗೆ ಮಾಹಿತಿ ನೀಡಿದರು. ಚಿತ್ರ 30ಕ್ಕೂ ಅಧಿಕ ಮಲ್ಟಿಪ್ಲೆಕ್ಸ್ಗಳಲ್ಲಿ ಬಿಡುಗಡೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.