ಪ್ರಿಯಾಂಕ ಉಪೇಂದ್ರ ನಟನೆಯ ‘ಮಮ್ಮಿ’ ಮತ್ತು ‘ದೇವಕಿ’ ಚಿತ್ರಗಳನ್ನು ನಿರ್ದೇಶಿಸಿ ಯಶಸ್ಸು ಕಂಡಿರುವ ನಿರ್ದೇಶಕ ಲೋಹಿತ್ ಮತ್ತೊಂದು ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಈ ಬಾರಿ ಅವರು ಹ್ಯಾಟ್ರಿಕ್ ಸಾಧಿಸುವ ಕನಸಿನೊಂದಿಗೆ ‘ಬ್ರಹ್ಮರಾಕ್ಷಸ’ನ ಬೆನ್ನೇರಿ ಹೊರಟಿದ್ದಾರೆ.
‘ಬ್ರಹ್ಮರಾಕ್ಷಸನ ಬಗ್ಗೆ ಹಲವು ಅಜ್ಜಿ ಕಥೆಗಳಿವೆ. ಬ್ರಹ್ಮರಾಕ್ಷಸನನ್ನು ದೇವಾನುದೇವತೆಗಳಿಂದಲೂ ಸಂಹರಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಜನರು ಬ್ರಹ್ಮರಾಕ್ಷಸ ತೊಂದರೆ ನೀಡದಿರಲೆಂದು ಆತನಿಗೆ ದೇವಸ್ಥಾನಗಳನ್ನು ನಿರ್ಮಿಸಿ ಪೂಜಿಸಲು ಶುರು ಮಾಡಿದರು. ಶೃಂಗೇರಿ, ಮಂಗಳೂರು ಹಾಗೂ ಕೇರಳದಲ್ಲಿ ಬ್ರಹ್ಮರಾಕ್ಷಸನ ದೇವಸ್ಥಾನಗಳೂ ಇವೆ. ಪುರಾಣ ಕಥೆಗಳೊಂದಿಗೆ ತಳುಕು ಹಾಕಿಕೊಂಡಿರುವಇಂತಹ ಬ್ರಹ್ಮರಾಕ್ಷಸನ ಬಗ್ಗೆ ಭಾರತೀಯ ಚಿತ್ರರಂಗದಲ್ಲಿ ಅಷ್ಟಾಗಿ ಸಿನಿಮಾ ಬಂದಿರಲಿಲ್ಲ. ಬ್ರಹ್ಮರಾಕ್ಷಸನನ್ನು ತೆರೆ ಮೇಲೆ ಪರಿಚಯಿಸಲು ಹೊರಟಿದ್ದೇವೆ’ ಎನ್ನುತ್ತಾರೆ ನಿರ್ದೇಶಕ ಲೋಹಿತ್.
‘ಚಿತ್ರಕಥೆ ಅಂತಿಮ ಹಂತದಲ್ಲಿದೆ. ಸದ್ಯದಲ್ಲೇ ಕಲಾವಿದರು ಮತ್ತು ತಾಂತ್ರಿಕ ತಂಡದ ಆಯ್ಕೆ ನಡೆಯಲಿದೆ. ನನ್ನ ಮೊದಲ ಸಿನಿಮಾ ಹಾರಾರ್ ಕಥೆ ಹೊಂದಿದ್ದರೆ, ಎರಡನೇ ಚಿತ್ರ ಥ್ರಿಲ್ಲರ್ ಕಥೆ ಹೊಂದಿತ್ತು. ಈಗ ಮತ್ತೆ ಹಾರಾರ್ ಕಥೆಯನ್ನು ಆಯ್ದುಕೊಂಡಿದ್ದೇನೆ. ಮೊದಲೆರಡು ಚಿತ್ರಗಳನ್ನು ಗೋವಾ ಮತ್ತು ಕೋಲ್ಕತ್ತಾದಲ್ಲಿ ಚಿತ್ರೀಕರಿಸಿದ್ದೆವು. ಮೂರನೇ ಚಿತ್ರವನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲು ಯೋಜಿಸಿದ್ದೇವೆ.ಸೆಪ್ಟೆಂಬರ್ನಿಂದ ಚಿತ್ರೀಕರಣ ಶುರು ಮಾಡುವ ಯೋಜನೆ ಇದೆ’ ಎನ್ನುತ್ತಾರೆ ಅವರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.